ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ, ಮುಳಬಾಗಿಲಿನಲ್ಲಿ ಕಣದಿಂದ ಹಿಂದೆ ಸರಿದ ಮಂಜುನಾಥ್‌, ಮುನಿಯಪ್ಪ ಪುತ್ರಿ

ಫಲ ನೀಡಿದ ಹಿರಿಯರ ಸಂಧಾನ
Last Updated 27 ಏಪ್ರಿಲ್ 2018, 13:24 IST
ಅಕ್ಷರ ಗಾತ್ರ

ಕೋಲಾರ: ಕಾಂಗ್ರೆಸ್‌ ವರಿಷ್ಠರ ಸಂಧಾನ ಸೂತ್ರದನ್ವಯ ಜಿಲ್ಲೆಯ ಕೋಲಾರ ಕ್ಷೇತ್ರದಲ್ಲಿ ಕೊತ್ತೂರು ಜಿ.ಮಂಜುನಾಥ್‌ ಮತ್ತು ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ ಸಂಸದ ಕೆ.ಎಚ್‌.ಮುನಿಯಪ್ಪರ ದ್ವಿತೀಯ ಪುತ್ರಿ ಎಂ.ನಂದಿನಿ ನಾಮಪತ್ರ ಹಿಂಪಡೆದಿದ್ದು, ಈ ಇಬ್ಬರ ಸ್ಪರ್ಧೆಗೆ ಸಂಬಂಧಿಸಿದ ಗೊಂದಲಕ್ಕೆ ತೆರೆ ಬಿದ್ದಿದೆ.

ಮಂಜುನಾಥ್‌, ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹಾಗೂ ಕೋಲಾರ ಕ್ಷೇತ್ರದಲ್ಲಿ ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದರು. ಕೋಲಾರ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಇದ್ದರೂ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು.

ಮಂಜುನಾಥ್‌ರ ಜಾತಿ ಪ್ರಮಾಣಪತ್ರ ವಿವಾದ ಸಂಬಂಧ ಹೈಕೋರ್ಟ್‌ನಲ್ಲಿ ವ್ಯತಿರಿಕ್ತ ತೀರ್ಪು ಬರಬಹುದೆಂಬ ಲೆಕ್ಕಾಚಾರದಲ್ಲಿ ಸಂಸದ ಮುನಿಯಪ್ಪ ಮುಳಬಾಗಿಲು ಕ್ಷೇತ್ರದಲ್ಲಿ ಮಗಳ ನಾಮಪತ್ರ ಹಾಕಿಸಿದ್ದರು. ಮುನಿಯಪ್ಪರ ಈ ನಡೆಗೆ ವರಿಷ್ಠರು ಹಾಗೂ ಪಕ್ಷದ ಸ್ಥಳೀಯ ಮುಖಂಡರಿಂದ ಆಕ್ಷೇಪ ವ್ಯಕ್ತವಾಗಿತ್ತು.

ನಂತರದ ಬೆಳವಣಿಗೆಯಲ್ಲಿ ಹೈಕೋರ್ಟ್‌ ಮಂಜುನಾಥ್‌ರ ಜಾತಿ ಪ್ರಮಾಣಪತ್ರ ಅಸಿಂಧುಗೊಳಿಸಿದ್ದರಿಂದ ಮುಳಬಾಗಿಲಿನಲ್ಲಿ ಅವರ ನಾಮಪತ್ರ ತಿರಸ್ಕೃತವಾಗಿತ್ತು. ಆದರೆ, ಕೋಲಾರ ಕ್ಷೇತ್ರದಲ್ಲಿ ಸಿಂಧುವಾಗಿತ್ತು.

ಹೀಗಾಗಿ ಅವರು ಕೋಲಾರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೈಯದ್‌ ಜಮೀರ್‌ ಪಾಷಾರ ನಾಮಪತ್ರ ವಾಪಸ್‌ ತೆಗೆಸಿ ಪಕ್ಷದಿಂದ ತಮ್ಮನ್ನು ಬೆಂಬಲಿಸಬೇಕೆಂದು ಪಟ್ಟು ಹಿಡಿದಿದ್ದರು. ಮುನಿಯಪ್ಪ, ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇಲ್ಲದ ಕಾರಣ ಪಕ್ಷದಿಂದ ತಮ್ಮ ಮಗಳನ್ನು ಬೆಂಬಲಿಸಬೇಕೆಂದು ದಾಳ ಉರುಳಿಸಿದ್ದರು.

ಆದರೆ, ಮಂಜುನಾಥ್‌ ಮತ್ತು ಮುನಿಯಪ್ಪರ ಬೇಡಿಕೆಗೆ ಪಕ್ಷದೊಳಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಂತಿಮವಾಗಿ ವರಿಷ್ಠರು ಮಂಜುನಾಥ್‌ ಮತ್ತು ನಂದಿನಿ ಅವರನ್ನು ಚುನಾವಣಾ ಕಣದಿಂದ ಹಿಂದೆ ಸರಿಸುವ ಸಂಧಾನ ಸೂತ್ರ ರೂಪಿಸಿದ್ದರು.

ಜತೆಗೆ ಮುಳಬಾಗಿಲು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಮಂಜುನಾಥ್‌ರ ಆಪ್ತರ ಪೈಕಿ ಒಬ್ಬರಿಗೆ ಪಕ್ಷದ ಬೆಂಬಲ ನೀಡಬೇಕು ಮತ್ತು ಕೋಲಾರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಜಮೀರ್‌ ಪಾಷಾರನ್ನು ಮುಂದುವರಿಸಬೇಕೆಂದು ನಿರ್ಣಯ ಕೈಗೊಂಡಿದ್ದರು.

‍[related]

ಜೆಡಿಎಸ್‌ಗೆ ನಾರಾಯಣಸ್ವಾಮಿ ಬೆಂಬಲ

ಇನ್ನು ಬಂಗಾರಪೇಟೆ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡು ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಚುನಾವಣಾ ಕಣದಿಂದ ಹಿಂದೆ ಸರಿದು ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT