ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆನೋವಾದ ಬಂಡಾಯ ಅಭ್ಯರ್ಥಿಗಳು

ಕಾಂಗ್ರೆಸ್‌, ಬಿಜೆಪಿಗೆ ಸಂಕಷ್ಟ; ಆಮದು ಅಭ್ಯರ್ಥಿಗಳಿಂದ ಜೆಡಿಎಸ್‌ ಶಕ್ತಿ ವೃದ್ಧಿ
Last Updated 26 ಏಪ್ರಿಲ್ 2018, 9:01 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಟಿಕೆಟ್‌ ದೊರೆಯದ ಮುಖಂಡರು ಮಾತೃ ಪಕ್ಷಗಳ ವಿರುದ್ಧವೇ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಹಿಂದಕ್ಕೆ ಪಡೆಯಲು ಎರಡು ದಿನ ಸಮಯ ಇರುವ ಕಾರಣ ಏನಾದರೂ ಮಾಡಿ ಅವರನ್ನು ಕಣದಿಂದ ಹಿಂದಕ್ಕೆ ಸರಿಯುವಂತೆ ಮಾಡಬೇಕು ಎಂದು ಅಧಿಕೃತ ಅಭ್ಯರ್ಥಿಗಳು ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆಡಳಿತದ ಚುಕ್ಕಾಣಿ ಹಿಡಿಯಲು ಅಗತ್ಯವಿರುವ ಮ್ಯಾಜಿಕ್‌ ಸಂಖ್ಯೆಯನ್ನು ತಲುಪಲು ಪ್ರಯತ್ನಿಸುತ್ತಿರುವ ಪಕ್ಷಗಳಿಗೆ ಬಂಡಾಯ ಈಗ ಬಹುದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ಅಳಿಯ ಚಂದ್ರಾಸಿಂಗ್‌ ಕುಟುಂಬದ ಸದಸ್ಯರ ಒತ್ತಡಕ್ಕೆ ಮಣಿದು ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಆದರೆ, ಬೀದರ್‌ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಬಯಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಮಹಮ್ಮದ್ ಫಿರೋಜ್‌ ಖಾನ್ ಅವರು ಬೀದರ್ ತಾಲ್ಲೂಕಿನ ಕಮಠಾಣಾ ಹಾಗೂ ಬಗದಲ್‌ ವ್ಯಾಪ್ತಿಯಲ್ಲಿರುವ ಮುಸ್ಲಿಂ ಮತದಾರರನ್ನು ನೆಚ್ಚಿಕೊಂಡು ಪಕ್ಷದ ಅಧಿಕೃತ ಅಭ್ಯರ್ಥಿ ಅಶೋಕ ಖೇಣಿ ವಿರುದ್ಧ ಕಣಕ್ಕೆ ಇಳಿದಿದ್ದಾರೆ.

ಔರಾದ್‌ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪದ ನಿವೃತ್ತ ಅಧಿಕಾರಿ ಭೀಮಸೇನರಾವ್‌ ಸಿಂಧೆ ಸ್ಪರ್ಧಿಸಲಿದ್ದಾರೆ ಎನ್ನುವ ವಿಷಯ ಐದು ತಿಂಗಳಿಂದ ಕಾಂಗ್ರೆಸ್‌ ವಲಯದಲ್ಲಿ ಚರ್ಚೆಯಲ್ಲಿತ್ತು. ಪಟ್ಟಿ ಪ್ರಕಟವಾದಾಗ ಬೇರೊಬ್ಬರಿಗೆ ಟಿಕೆಟ್‌ ದೊರಕಿತ್ತು. ಭೀಮಸೇನ್‌ರಾವ್‌ ಸಿಂದೆ ಬೆಂಬಲಿಗರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು. ಬೆಂಬಲಿಗರ ಒತ್ತಾಯಕ್ಕೆ ಮಣಿದು ಮಂಗಳವಾರ ಭೀಮಸೇನ್‌ರಾವ್‌ ಸಿಂಧೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಪಕ್ಷ ನಿಷ್ಠೆಯನ್ನು ಕಡೆಗಣಿಸಿ ಬಸವ ಕಲ್ಯಾಣ ಹಾಗೂ ಭಾಲ್ಕಿಯ ಟಿಕೆಟ್‌ಗಳನ್ನು ಬೇರೆ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆ. ಪ್ರಬಲ ಆಕಾಂಕ್ಷಿಗಳಿಗೆ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಎದ್ದಿದ್ದಾರೆ. ಅವರ ಬೆಂಬಲಿಗರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರು  ಬಾರಿ ಶಾಸಕ ಹಾಗೂ ಮೂರು ಬಾರಿ ಸಚಿವರಾಗಿದ್ದ ಬಸವರಾಜ ಪಾಟೀಲ ಅಷ್ಟೂರ್ ಅವರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡ ಲಾಗಿದೆ. ಹೀಗಾಗಿ ಅವರು ತಮ್ಮ ಬೆಂಬಲಿಗರೊಂದಿಗೆ ಪಕ್ಷ ವನ್ನೇ ತೊರೆದಿದ್ದಾರೆ. ಮಾಜಿ ಶಾಸಕ ಮಾರುತಿರಾವ್‌ ಅವರೂ ಬಿಜೆಪಿ ಯಿಂದ ಹೊರ ಬಂದು ಜೆಡಿಎಸ್‌ ಸೇರಿದ್ದಾರೆ. ಬಸವಕಲ್ಯಾಣದಲ್ಲಿ ಬಿಜೆಪಿ ಕಾರ್ಯಕರ್ತರ ಬಲ ಕುಗ್ಗಿದ್ದು, ಮುಖಂಡರಲ್ಲಿ ಆತಂಕ ಉಂಟು ಮಾಡಿದೆ.

ಡಿ.ಕೆ.ಸಿದ್ರಾಮ ಅವರಿಗೆ ಬಿಜೆಪಿ ಟಿಕೆಟ್‌ ಪ್ರಕಟಿಸಿದ ನಂತರವೂ ಪಕ್ಷದ ಮುಖಂಡರು ಪ್ರಕಾಶ ಅವರಿಗೆ ಕರೆ ಮಾಡಿ ಕನಿಷ್ಠ ಪಕ್ಷ ಬೆಂಬಲ ನೀಡುವಂತೆಯೂ ಮನವಿ ಮಾಡಿಲ್ಲ. ಇದೇ ಕಾರಣಕ್ಕೆ ಪ್ರಕಾಶ ಖಂಡ್ರೆ ಅವರು ಬಿಜೆಪಿಗೆ ರಾಜೀನಾಮೆ ಸಲ್ಲಿಸಿ ಜೆಡಿಎಸ್‌ ಸೇರಿ ಸ್ಪರ್ಧೆಗೆ ಇಳಿದಿದ್ದಾರೆ. ಅವರ ಬೆಂಬಲಿಗರ ಪಡೆಯೂ ಪಕ್ಷದೊಂದಿಗಿನ ನ ಸಂಪರ್ಕ ಕಡಿದುಕೊಂಡಿದೆ. ಹೀಗಾಗಿ ಮತಗಳು ವಿಭಜನೆಯಾಗುವ ಆತಂಕದಲ್ಲಿ ಪಕ್ಷದ ಮುಖಂಡರು ಇದ್ದಾರೆ.

ಜಿಲ್ಲೆಯಲ್ಲಿ ಚಿಗುರಿದ ಜೆಡಿಎಸ್‌

ಬೀದರ್‌: ಜಿಲ್ಲೆಯಲ್ಲಿ ಹಿಂದಿನ ಎರಡು ತಿಂಗಳ ವರೆಗೂ ಜೆಡಿಎಸ್‌ ಅಂದರೆ ಬಂಡೆಪ್ಪ ಕಾಶೆಂಪುರ ಎನ್ನುವಷ್ಟರ ಮಟ್ಟಿಗೆ ಪಕ್ಷದ ಪ್ರಭಾವ ಕುಸಿದಿತ್ತು. ಆದರೆ, ಬಿಜೆಪಿ ಟಿಕೆಟ್‌ ದೊರೆಯದ ಮುಖಂಡರು ಮುನಿಸಿಕೊಂಡು ಜೆಡಿಎಸ್‌ ಸೇರಿದ ನಂತರ ಪಕ್ಷದ ಸಂಘಟನೆಗೆ ಆನೆ ಬಲ ಬಂದಿದೆ.

ಪಿಜಿಆರ್‌ ಸಿಂಧ್ಯ ಅವರು ಬಸವಕಲ್ಯಾಣದ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ನಂತರ ಜಿಲ್ಲೆಯ ಮರಾಠಲ್ಲಿ ಉತ್ಸಾಹ ಮೂಡಿದೆ. ಬಿಜೆಪಿ ಜಪಿಸುತ್ತಿದ್ದ ಮರಾಠರು ಜೆಡಿಎಸ್ ಕುರಿತು ಆಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್‌ ಪ್ರಬಲ ಅಭ್ಯರ್ಥಿಗಳನ್ನೇ ಚುನಾವಣಾ ಕಣಕ್ಕೆ ಇಳಿಸಿದೆ. ಕಳೆದ ಬಾರಿ ಕೆಜೆಯಿಂದ ಸ್ಪರ್ಧಿಸಿದ್ದ ಬಂಜಾರಾ ಸಮುದಾಯದ ಧನಾಜಿ ಜಾಧವ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಬಿಸಿತಟ್ಟಿದೆ.

‘ಪ್ರಸ್ತುತ ಜಿಲ್ಲೆಯಲ್ಲಿ ಜೆಡಿಎಸ್‌ ಪ್ರಬಲ ಶಕ್ತಿಯಾಗಿ ಗುರುತಿಸಿಕೊಂಡಿದೆ. ಬೇರೆ ಬೇರೆ ಸಮುದಾಯಕ್ಕೆ ಸೇರಿದ ಬಂಡೆಪ್ಪ ಕಾಶೆಂಪುರ, ಪಿಜಿಆರ್ ಸಿಂಧ್ಯ, ಪ್ರಕಾಶ ಖಂಡ್ರೆ ಹಾಗೂ ನಸಿಮೋದ್ದಿನ್‌ ಪಟೇಲ್ ಮೊದಲಾದವರು ಪಕ್ಷದಲ್ಲಿ ಇದ್ದಾರೆ. ನಮ್ಮ ಪಕ್ಷ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಸ್ಪರ್ಧೆ ಒಡ್ಡಲಿದೆ’ ಎನ್ನುತ್ತಾರೆ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ.

ಮೀಸಲು ಕ್ಷೇತ್ರದಲ್ಲಿ ಬೇಡ ಜಂಗಮರಿಗೂ ಅವಕಾಶ

ಬೀದರ್: 1989ರಲ್ಲಿ ಬೀದರ್‌ ಲೋಕಸಭಾ ಮೀಸಲು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಪ್ರಭು ಕಲ್ಮಠ ಸ್ಪರ್ಧಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿದ್ದರು. ಕಲ್ಮಠ ಅವರಿಗೆ 1,38,881 ಮತಗಳು ಬಂದಿದ್ದವು. ಇದೇ ಲೆಕ್ಕಾಚಾರದ ಮೇಲೆ ರವಿ ಸ್ವಾಮಿ ಔರಾದ್‌ ಮೀಸಲು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಒಂದು ಕಾಲದಲ್ಲಿ ವೀರಶೈವ ಸಮುದಾಯದಲ್ಲಿ ಗುರುತಿಸಿಕೊಂಡಿದ್ದ ಬೇಡ ಜಂಗಮರು ಜಿಲ್ಲೆಯಲ್ಲಿ ಪರಿಶಿಷ್ಟರ ಪಟ್ಟಿಯಲ್ಲೂ ಇದ್ದಾರೆ. ಬೀದರ್‌ ನಗರಸಭೆ ಸದಸ್ಯರಾಗಿದ್ದ ರವಿ ಸ್ವಾಮಿ ಸಮುದಾಯ ಹಾಗೂ ಮೇಲ್ವರ್ಗದವರನ್ನು ನಂಬಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT