ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಬೇಂದ್ರೆ ಸ್ಮೃತಿ

Last Updated 5 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ವರಕವಿ ಬೇಂದ್ರೆಯವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಸಾಹಿತ್ಯವನ್ನು ಕುರಿತು ಆಕಾಶವಾಣಿ ಧಾರವಾಡ ಕೇಂದ್ರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿತವಾದ ಪ್ರಬಂಧಗಳನ್ನು ಡಾ. ಬಸವರಾಜ ಸಾದರ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ. ಇಂತಹ ಕೃತಿಗಳಲ್ಲಿರುವ ವಿಮರ್ಶೆಯು ಒಂದು ಸಂಸ್ಕೃತಿಯಲ್ಲಿನ ಹೊಸ ಓದುಗ ಸಮುದಾಯವನ್ನು ಬೆಳೆಸುತ್ತದೆ. ಹೊಸ ಓದುಗ ವಲಯ ವಿಸ್ತಾರವಾಗಲು ಸಾಧ್ಯವಾಗುತ್ತದೆ.

ಈ ಸಂಕಲನದಲ್ಲಿ ‘ಬೇಂದ್ರೆ ಹಾಗೂ ಗೆಳೆಯರ ಗುಂಪು’, ‘ಬೇಂದ್ರೆ ಕಾವ್ಯದ ಮುಖ್ಯ ನೆಲೆಗಳು ಮತ್ತು ದರ್ಶನ’, ‘ಬೇಂದ್ರೆ ಕಾವ್ಯದಲ್ಲಿ ಒಲವು’, ‘ಬೇಂದ್ರೆಯವರ ಕಾವ್ಯೇತರ ಸಾಹಿತ್ಯ’, ‘ಬೇಂದ್ರೆಯವರ ಕಾವ್ಯ ಭಾಷೆ ಮತ್ತು ಪ್ರತಿಮಾ ಯೋಜನೆ’ ಎಂಬ ಐದು ಲೇಖನಗಳಿವೆ. ಬೇಂದ್ರೆಯವರು ಕಟ್ಟಿದ್ದ ಗೆಳೆಯರ ಗುಂಪು ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಐರ್ಲೆಂಡಿನ ಸಾಂಸ್ಕೃತಿಕ ಪುನರುಜ್ಜೀವನ ಕಾಲದಲ್ಲಿ ಏಟ್ಸ್ ಕವಿಯು ‘In dreams begins responsibility’ ಎಂಬ ಮಾತನ್ನು ಹೇಳುತ್ತಾನೆ. ಈ ಮಾತು ಗೆಳೆಯರ ಗುಂಪಿಗೂ ಅನ್ವಯಿಸುತ್ತದೆ. ಈ ಗೆಳೆಯರೆಲ್ಲರೂ ಕನಸುಗಾರರು. ಯಾವುದೇ ನಿಯಮ, ನಿರ್ಬಂಧಗಳಿಲ್ಲದ ಗೆಳೆತನದ ವಾತಾವರಣದಲ್ಲಿ ಸಮಾನಮನಸ್ಕರಾಗಿ ನವ ಕರ್ನಾಟಕದ ಪುನರುಜ್ಜೀವನಕ್ಕೆ ಉತ್ತರ ಕರ್ನಾಟಕದ ಪರವಾಗಿ ತಮ್ಮ ವೈಶಿಷ್ಟ್ಯಪೂರ್ಣ ಕೊಡುಗೆಯನ್ನು ಈ ಗೆಳೆಯರು ನೀಡಿದರು.

ಹದಿನೈದು ವರ್ಷಗಳ ಕಾಲ ನಡೆದ ಗೆಳೆಯರ ಗುಂಪಿನ ಕಾರ್ಯಚಟುವಟಿಕೆಗಳು ಕಾವ್ಯ ರಚನೆಗಷ್ಟೇ ಸೀಮಿತವಾಗಿರಲಿಲ್ಲ. ‘ಜಯಕರ್ನಾಟಕ’ ಪತ್ರಿಕೆಯಲ್ಲಿ ಹಳೆಯ ಹೊಸ ಕಾವ್ಯಗಳ ಮೌಲ್ಯಮಾಪನ ಮಾಡುವ ಜತೆಗೆ ವಿಚಾರಪೂರಿತವಾದ ಲೇಖನಗಳನ್ನೂ ಪ್ರಕಟಿಸಿದರು. ನಾಡಹಬ್ಬದ ಆಚರಣೆಯನ್ನು ಪ್ರಾರಂಭ ಮಾಡಿ ಕರ್ನಾಟಕದ ಏಕೀಕರಣಕ್ಕೆ ಪಣತೊಟ್ಟರು. ಕನ್ನಡ ನಾಡು, ನುಡಿ, ಸಂಸ್ಕೃತಿಯ ಬೆಳವಣಿಗೆಗೆ ಗೆಳೆಯರ ಗುಂಪು ಕೊಟ್ಟಿರುವ ಕೊಡುಗೆಗಳ ಹಿಂದೆ ಬೇಂದ್ರೆಯವರು ಇದ್ದರು ಎಂಬುದನ್ನು ಕುರ್ತುಕೋಟಿಯವರು ವಿವರವಾಗಿ ದಾಖಲಿಸಿದ್ದಾರೆ.

ಬೇಂದ್ರೆಯವರು ತಮ್ಮ ಕಾವ್ಯದಲ್ಲಿ ಬಳಸುವ ಭಾಷೆಯು ಬದುಕನ್ನು ಕಟ್ಟುವ, ಶೋಧಿಸುವ,ಸಾಕ್ಷಾತ್ಕರಿಸುವ ಮಾನವೀಯವಾದ, ಕ್ರಿಯಾಶೀಲವಾದ ಶಕ್ತಿಯಾಗಿದೆ. ಆದ್ದರಿಂದಲೇ ಅವರ ಕಾವ್ಯ ಇಂದಿಗೂ ನವನವೀನ. ಅವರ ಭಾಷಾ ಬಳಕೆಯನ್ನು ಕುರಿತು ಇಲ್ಲಿಯವರೆಗೂ ಮಹತ್ವದ ವಿಮರ್ಶಕರು ಬರೆದಿರುವ ಲೇಖನಗಳನ್ನು ಗಮನದಲ್ಲಿಟ್ಟುಕೊಂಡು ಚನ್ನವೀರ ಕಣವಿಯವರು ‘ಬೇಂದ್ರೆಯವರ ಕಾವ್ಯಭಾಷೆ ಮತ್ತು ಪ್ರತಿಮಾ ಯೋಜನೆ’ ಎಂಬ ಲೇಖನ ಬರೆದಿದ್ದಾರೆ.

ಬೇಂದ್ರೆಯವರ ಕವಿತೆಯಲ್ಲಿರುವ ಪದಗಳು ಅರ್ಥದ ತರ್ಕದ ಬಂಧನದಿಂದ ಮುಕ್ತವಾಗಿವೆ. ಆದ್ದರಿಂದಲೇ ಕವಿತೆಯನ್ನು ಸ್ವಯಂಪೂರ್ಣವಾದ ಶಬ್ದ ರಚನೆ ಎಂದು ಕರೆಯಲಾಗುತ್ತದೆ. ಅವರ ಕವಿತೆಯಲ್ಲಿ ಬಳಕೆಯಾಗುವ ಪದಗಳು ತಮ್ಮ ಸ್ವಂತ ಶಕ್ತಿಯ ಮೇಲೆ ವ್ಯವಹರಿಸುತ್ತವೆ. ಅಂತಹ ಶಕ್ತಿ ಬೇಂದ್ರೆಯವರ ಕಾವ್ಯ ಭಾಷೆಗಿದೆ. ಬೇಂದ್ರೆಯವರ, ವಿಮರ್ಶೆ, ಸಂಶೋಧನೆ, ಚಿಂತನಶೀಲ ಬರಹ, ನಾಟಕ, ಕಥೆ,ಹರಟೆ ಅನುವಾದ ಇತ್ಯಾದಿ ಪ್ರಕಾರಗಳನ್ನು ಕುರಿತ ಸಮೀಕ್ಷಾತ್ಮಕ ಬರಹವನ್ನು ಗುರುಲಿಂಗ ಕಾಪಸೆಯವರು ಬರೆದಿದ್ದಾರೆ. ಇದರಲ್ಲಿ ನಾಟಕಗಳನ್ನು ಕುರಿತು ಸೂಕ್ಷ್ಮವಾದ ಒಳನೋಟಗಳಿವೆ. ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಲೇಖನವು ಬೇಂದ್ರೆಯವರ ಕಾವ್ಯದಲ್ಲಿರುವ ಗಂಡು ಮತ್ತು ಹೆಣ್ಣಿನ ನಡುವೆ ಇರಬಹುದಾದ ಪ್ರೇಮ, ಸಾಮರಸ್ಯ, ದಾಂಪತ್ಯದ ಸಮರಸ ಇತ್ಯಾದಿಗಳನ್ನು ಲಘುಬಗೆಯಿಂದ ವಿವರಿಸುತ್ತದೆ.

ಕೃತಿ: ಇದು ಬರಿ ಬೆಳಗಲ್ಲೊ ಅಣ್ಣಾ

ಸಂಪಾದನೆ: ಬಸವರಾಜ ಸಾದರ

ಪ್ರ: ಸಂಗಾತ ಪುಸ್ತಕ, ಗದಗ

ಸಂ: 9341757653

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT