ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಹಾಗೂ ಪ್ರಾಕ್ತನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಈಚೆಗಷ್ಟೇ ನಿವೃತ್ತರಾಗಿರುವ ಡಾ.ಅಶೋಕ ಶೆಟ್ಟರ್ ಅವರು ಬರೆದ ಬರಹಗಳ ಸಂಗ್ರಹವೇ ‘ಗದ್ಯಂ ಹೃದ್ಯಂ’.
ಈ ಕೃತಿಯಲ್ಲಿ ಶೆಟ್ಟರ್ ತಮ್ಮ ತವರು ಜಿಲ್ಲೆ ಬೆಳಗಾವಿಯ ಬೈಲಹೊಂಗಲ ಹಾಗೂ ಅವರು ಕಲಿತು, ಬೋಧನಾ ವೃತ್ತಿ ಮಾಡಿದ ಧಾರವಾಡದ ಹಳೆಯ ನೆನಪುಗಳನ್ನು ಚೇತೋಹಾರಿಯಾಗಿ ಮೆಲುಕು ಹಾಕಿದ್ದಾರೆ.
ದ.ರಾ. ಬೇಂದ್ರೆ, ಶಂಬಾ ಜೋಶಿ,ಬಸವರಾಜ ಕಟ್ಟೀಮನಿ, ಚಂದ್ರಶೇಖರ ಪಾಟೀಲಹಾಗೂ ಧಾರವಾಡಕ್ಕೆ ಬರುತ್ತಿದ್ದ ಬೇರೆ ಜಿಲ್ಲೆಗಳ ಸಾಹಿತಿಗಳು, ಬಂಡಾಯ ಸಾಹಿತ್ಯ ಸಂಘಟನೆ, ಸಾಧನಕೇರಿಯ ಪರಿಸರದ ಬಗ್ಗೆಬರೆದಿದ್ದಾರೆ.
ರಿಸರ್ಚ್ ಫೆಲೊ ಆಗಿ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿದ್ದ ವೇಳೆ ಅಲ್ಲಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ಸಿಖ್ಖರ ಮೇಲೆ ನಡೆದ ದೌರ್ಜನ್ಯದ ಕುರಿತೂ ಸವಿವರವಾಗಿ ದಾಖಲಿಸಿದ್ದಾರೆ. ದೆಹಲಿಯಲ್ಲಿರುವ ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್ಡಿ)ಯಲ್ಲಿ ಕನ್ನಡಿಗರು ಪ್ರವೇಶ ಪಡೆದ ವೇಳೆ ಅವರೊಂದಿಗಿನ ಒಡನಾಟದ ಕುರಿತು ಅವರು ದಾಖಲಿಸಿರುವ ನೆನಪುಗಳು ಆ ಕಾಲದ ಇತಿಹಾಸವೂ ಹೌದು.
ಈ ಪುಸ್ತಕದ ಆರಂಭದಲ್ಲಿ ಲೇಖಕ ಚಂದ್ರಶೇಖರ ಆಲೂರ ಅವರು ಬರೆದ ಮುನ್ನುಡಿ ಒಳಗಿನ ಹೂರಣವನ್ನು ಓದುಗರ ಎದುರು ತೆರೆದಿಡುತ್ತದೆ.
ಕೃತಿ–ಗದ್ಯಂ ಹೃದ್ಯಂ ಲೇಖಕರು: ಅಶೋಕ ಶೆಟ್ಟರ್ ಗೀತಾಂಜಲಿ ಪುಸ್ತಕ ಪ್ರಕಾಶನ, ಕಂದಾಯ ಭವನ, 100 ಅಡಿ ರಸ್ತೆ, ರಾಜೇಂದ್ರ ನಗರ, ಶಿವಮೊಗ್ಗ ಬೆಲೆ: ₹ 230