ಜಾನಪದ ಕಥಾ ಶೈಲಿಯ ಬರಹದಿಂದ ‘ಮಳೆಬಯಲು’ ಕಾದಂಬರಿಯಲ್ಲಿ ಅಕ್ಷರಗಳು ದೃಶ್ಯರೂಪವಾಗಿ ಓದುಗನ ಕಣ್ಮುಂದೆ ಬಿಡಿಸಿಕೊಳ್ಳುತ್ತವೆ. ಗ್ರಾಮ್ಯ ಭಾರತದ ಅನಾವರಣ ಇಲ್ಲಿದೆ. ಹುಟ್ಟೂರು ಬಿಟ್ಟು ನಗರಕ್ಕೆ ವಲಸೆ ಬರುವುದು, ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ತಲ್ಲಣಿಸುವ ಮನಸ್ಸು. ಹೊಸದಾಗಿ ಬದುಕು ಕಟ್ಟಿಕೊಳ್ಳುವ ಧಾವಂತ, ಹಳ್ಳಿಯಿಂದ ನಗರಕ್ಕೆ ಹೊರಟವರ ಬದುಕಿನ ಸ್ಥಿತ್ಯಂತರವನ್ನು ಕಾದಂಬರಿ ದಾಖಲಿಸಿರುವ ಬಗೆ ಗಮನಾರ್ಹ. ಸಂಪಾದನೆಯ ಅರ್ಥವನ್ನು ಭೂಮಿ ಖರೀದಿಯಲ್ಲಿ; ಒಡೆತನದಲ್ಲಿ ಸಾರ್ಥಕ ಮಾಡಿಕೊಳ್ಳುತ್ತಿರುವ ಇಂದಿನ ತಲೆಮಾರಿನ ಚಿತ್ರಣವನ್ನು ಕಾದಂಬರಿ ಸೂಕ್ಷ್ಮವಾಗಿ ಹರವಿಕೊಂಡಿದೆ.