ಕಲ್ಪನೆಗಳಿಗೂ ವಾಸ್ತವದ ಹಿನ್ನೆಲೆಯುಂಟು. ಅರ್ಥಾತ್ ಇಲ್ಲಿರುವ ಐತಿಹಾಸಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕತೆಯ ಎಳೆಗಳನ್ನೊಳಗೊಂಡ ಕಥೆಗಳು ಸಾಮಾಜಿಕ ವೈರುಧ್ಯಗಳನ್ನು ಕೆಣಕಿ ಎಬ್ಬಿಸುತ್ತವೆ. ಕಂಡ, ಅನುಭವಿಸಿದ, ಕೇಳಿದ ಸಂಗತಿಗಳನ್ನು ಯಾವ, ಯಾರ ಮರ್ಜಿಗೂ ಒಳಗಾಗದೆ ನಿರ್ಭಿಡೆಯಿಂದ ಚಿತ್ರಿಸಿರುವ ಲೇಖಕರ ನಿರೂಪಣೆ ಮನಸ್ಸಿಗೆ ತಟ್ಟುತ್ತದೆ. ಎಲ್ಲ ಘಟನೆ, ವರ್ತನೆಗಳಿಗೂ ಕಾರ್ಯಕಾರಣ ಸಂಬಂಧವಿದೆ. ಅದನ್ನರಿಯುವಲ್ಲಿ ತೊಡರುವ ಮಂದಿ ಅದಕ್ಕೆ ಸಮಾಜಬಾಹಿರ ಪಟ್ಟ ಕಟ್ಟುತ್ತಾರೆ. ಇಲ್ಲಿ ದೋಷಿ ಎನಿಸಿದವರ ವಿಚಾರದಲ್ಲಿ ಸಲ್ಲಬೇಕಾದುದು ಕ್ರೋಧವಲ್ಲ, ಕನಿಕರ ಎಂಬುದು ಲೇಖಕರ ಅಂಬೋಣ. ಇಲ್ಲಿನ ಎಲ್ಲ ಕಥೆಗಳು ಕಾಡುವ ಮತ್ತು ಮರು ಓದಿಗೂ ಒಡ್ಡುವ ಗುಣಗ್ರಾಹಿಯಾಗಿವೆ.