ಪ್ರಕೃತಿಯಲ್ಲಿ ಮಿತಿಯಿಲ್ಲದ ದಾಹಕ್ಕೆ ಬಲಿಯಾದವ ಮನುಷ್ಯ. ನೆಲ, ಜಲ, ಜೀವಜಗತ್ತಿನ ಸಂಬಂಧಗಳು ಬುದ್ಧಿವಂತ ಮನುಷ್ಯನ ಆಸೆಗಳಿಂದ ವಿಕಾರವಾಗುವ ಪರಿ, ಕೊನೆಗೆ ತನ್ನದೇ ವಿಕೃತಿಗಳಿಂದ ಇಡೀ ಜೀವಜಾಲವನ್ನೇ ಬಲಿಗೊಡುವ ಅನೇಕ ಸಂಕಟಗಳ ಹೂರಣವೇ ‘ಪಕ್ಕಿಹಳ್ಳದ ಹಾದಿಗುಂಟ’ ಕಾದಂಬರಿ.
ಹಲವು ತಲೆಮಾರುಗಳ ಕತೆಯಂತಿರುವ ಈ ಕಾದಂಬರಿ ಬಾಲ್ಯದಿಂದ ಹಿಡಿದು ಮುಪ್ಪಿನವರೆಗಿನ ಬದುಕಿನ ಹಾದಿ, ಏರಿಳಿತಗಳನ್ನು ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ಕಟ್ಟಿಕೊಡುತ್ತದೆ. ಇಲ್ಲಿನ ‘ಮುಕ್ತಾತಾಯಿ’, ‘ಹರಿಣಾಕ್ಷಿ’, ‘ಅಣ್ಣಯ್ಯ ಬಲ್ಲಾಳ’ರಂತಹ ಅದೆಷ್ಟೋ ಪಾತ್ರಗಳು ನಮ್ಮೊಳಗನ್ನೂ ಆವರಿಸಿದ್ದರೆ ಅಚ್ಚರಿಯಿಲ್ಲ.
ಎಲ್ಲರೂ ಹಾಯ್ದಿರಬಹುದಾದ ಅಥವಾ ಹಾಯುತ್ತಿರುವ ಅನೇಕ ಪಕ್ಕಿಹಳ್ಳಗಳು ಇಲ್ಲಿ ಬಿತ್ತರಗೊಂಡಿವೆ. ಕಾಸರಗೋಡು, ಸುತ್ತಲಿನ ಗ್ರಾಮ್ಯ ಭಾಷೆ ಓದಿನ ಸುಖ ಹೆಚ್ಚಿಸುತ್ತದೆ.