ಕೆ.ವಿ. ತಿರುಮಲೇಶ್ ಅವರು ಕಾತ್ಯಾಯಿನಿಯವರ ಇಲ್ಲಿನ ಕವಿತೆಗಳನ್ನು ಕುರಿತು ಹೇಳಿರುವ ಮಾತುಗಳು ಗಮನಾರ್ಹ. ‘ಕನ್ನಡ ಕವಿತೆ ಅರ್ಥದ ಅಪಮೌಲ್ಯದಿಂದ ಸೊರಗುತ್ತಿರುವ ಈ ಸಂದರ್ಭದಲ್ಲಿ ಹೊಸತೊಂದು ಕವನ ಸಂಕಲನ ನಮ್ಮ ಮನಸ್ಸನ್ನು ಹೇಗೆ ಥಟ್ಟನೆ ತಟ್ಟಬಲ್ಲದು ಎನ್ನುವುದಕ್ಕೆ ಇಲ್ಲಿದೆ ನಿದರ್ಶನ. ವಸ್ತು ವೈವಿಧ್ಯ, ಪದ ಸಂಪತ್ತು, ವಾಕ್ಯ ವೈಭವ, ವೈಚಾರಿಕ ಪ್ರಬುದ್ಧತೆ, ಮೂಲಭೂತವಾದ ಮುಗ್ಧತೆ, ಕಳಕಳಿ, ಸಾಮಾಜಿಕ ಔಚಿತ್ಯ ಎಲ್ಲವೂ ಕಾತ್ಯಾಯಿನಿಯವರ ಕವಿತೆಗಳಲ್ಲಿವೆ. ದ್ಯಾವಾ ಪೃಥವಿಯನ್ನವರು ಒಟ್ಟಿಗೇ ಕ್ರಮಿಸುತ್ತಾರೆ. ಜೀರುಂಡೆ ಮತ್ತು ನಕ್ಷತ್ರ ಒಟ್ಟಿಗೇ ಅವರ ದೃಷ್ಟಿ ಪರಿಧಿಯೊಳಗೆ ಬರುತ್ತವೆ.’ ಎಚ್.ಎಸ್.ಶಿವಪ್ರಕಾಶ್ ಅವರ ಮುನ್ನುಡಿ ಇಲ್ಲಿಯ ಕವನಗಳಿಗೆ ಉತ್ತಮ ಪ್ರವೇಶವನ್ನು ಒದಗಿಸುತ್ತದೆ.