‘ವಾಸ್ತವವಾಗಿ ಶಿವಪ್ಪ ಹೀಗೆ ಇದ್ದನೋ ಇಲ್ಲವೋ ನಾನರಿಯೆ. ಆದರೆ ನನ್ನ ಕಾದಂಬರಿಯ ನಾಯಕ ಹೀಗಿರಬೇಕು ಎನ್ನುವುದು ನನ್ನ ಆಶಯ. ಅದರಂತೆ ಶಿವಪ್ಪ ನಾಯಕನನ್ನು ಸೃಷ್ಟಿಸಿದ್ದೇನೆ’ ಎಂದು ಲೇಖಕರೇ ಮುನ್ನುಡಿಯಲ್ಲಿ ಹೇಳಿದ್ದಾರೆ. ಕೃತಿಯಲ್ಲಿ ಶಿವಪ್ಪ ನಾಯಕನ ಶಿಸ್ತಿನ ಆಡಳಿತವನ್ನು ಬಿಂಬಿಸಲು ಒತ್ತು ನೀಡಲಾಗಿದೆ.ಕಾದಂಬರಿಯನ್ನು ಓದುತ್ತ ಸಾಗಿದಂತೆ ಅರ್ಧ ಕರ್ನಾಟಕವನ್ನು ಸುತ್ತಿದ ಅನುಭವವಾಗುತ್ತದೆ. ಅರಮನೆ, ಕೋಟೆ ಕೊತ್ತಲಮತ್ತು ಸಮೃದ್ಧ ಹಸಿರಿನ ಮೂಲಕ ಕರೆದುಕೊಂಡು ಹೋಗುವ ಲೇಖಕರು ಯುದ್ಧದ ರೋಮಾಂಚನವನ್ನೂ ಮೋಸ, ವಂಚನೆ ಮುಂತಾದವುಗಳ ಕುತಂತ್ರಗಳ ಮೂಲಕ ಒಳ್ಳೆಯತನವನ್ನು ದಮನಿಸಲು ಪ್ರಯತ್ನಿಸುವವರನ್ನೂ ಪರಿಚಯಿಸಿದ್ದಾರೆ. ಪ್ರೀತಿ, ಸ್ನೇಹ, ವಿಶ್ವಾಸ, ವಾತ್ಸಲ್ಯದ ಅಗಾಧ ಲೋಕವನ್ನೂ ತೆರೆದಿಟ್ಟಿದ್ದಾರೆ.