ಒಬ್ಬ ಕರಿಯ ಹೆಣ್ಣುಮಗಳ ಮೇಲಾದ ಕ್ರೌರ್ಯ ಹೇಳುತ್ತಾ, ಕಪ್ಪು ವರ್ಣೀಯರಅಸಹಾಯಕತೆ ಮತ್ತು ಹೀನಾಯ ಬದುಕಿನ ಸಂಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಯಜಮಾನನ ಸಿಟ್ಟಿಗೆ, ಆಕ್ರೋಶಕ್ಕೆ, ದೌರ್ಜನ್ಯಕ್ಕೆ ಗುರಿಯಾದ ಅಬಲೆಯ ದೇಹ ಹೆಪ್ಪುಗಟ್ಟಿ ಹಿಪ್ಪೆಯಾದ ಚಿತ್ರಣ ಎಂತವರಿಗೂ ಅರಗಿಸಿಕೊಳ್ಳಲಾಗದು. ‘ಲೇಖನಿಯೆಂಬುದು ಬಹುಶಃ ಆ ಗಾಯಗಳಿಂದ ಜನ್ಮತಾಳಿರಬಹುದು’ ಎಂದು ಲೇಖಕ ಒಂದು ಅಧ್ಯಾಯದಲ್ಲಿ ಹೇಳುತ್ತಾರೆ. ತಾಯಿ ಇದ್ದರೂ ಪ್ರೀತಿ ಇಲ್ಲದೆ, ತಂದೆ ಇದ್ದರೂ ಆಸರೆ ಇಲ್ಲದೆ, ಕೆಲವೊಮ್ಮೆ ಒಡೆಯನೇ ತಂದೆ ಎಂದು ಗೊತ್ತಿದ್ದರೂ ಅನಾಥ ಸ್ಥಿತಿಯಲ್ಲಿ ಬದುಕುವುದು ಎಂತಹ ವ್ಯಥೆ ಎನ್ನುವುದನ್ನು ಓದುವಾಗ ಕರುಳು ಕಿವುಚಿದಂತಾಗುತ್ತದೆ. ಡಗ್ಲಾಸ್ ಆತ್ಮಚರಿತೆಯನ್ನು ವಿಕಾಸ್ ಆರ್. ಮೌರ್ಯ ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ.