ದೇಶದ ಆಂತರಿಕ ಮತ್ತು ಬಾಹ್ಯ ಸುರಕ್ಷತೆ, ನೀತಿ ನಿರೂಪಣೆ ಎಲ್ಲದಕ್ಕೂ ಪೂರಕವಾಗುವಂತೆ ವಿನ್ಯಾಸಗೊಂಡ ಅದ್ಭುತ ಗೂಢಚಾರ ದಳವಿದು. ‘ರಾ’ ನೀಡುವ ಅತ್ಯಮೂಲ್ಯ ಮಾಹಿತಿಗಳು ರಾಜಕೀಯ ನಿರ್ಧಾರಗಳಿಗೆ ಕಾರಣವಾದದ್ದು, ಶತ್ರುಗಳಿಂದಲೇ ಯುದ್ಧ ಮಾಡಿಸಿ ಅವರನ್ನು ನಿರ್ನಾಮ ಮಾಡಿದ್ದು, ನೆರೆ ದೇಶಗಳಲ್ಲಿಯೂ ಆಡಳಿತಾತ್ಮಕ ಮತ್ತು ರಾಜಕೀಯ ನಿರ್ಣಾಯಕ ಶಕ್ತಿಯಾಗಿ ತೆರೆಮರೆಯಲ್ಲೇ ಕೆಲಸ ಮಾಡಿದ್ದು, ‘ರಾ’ ಮತ್ತು ಸೇನೆಯ ಸಂಯೋಜನೆ ಮತ್ತು ಅಪರೂಪದಲ್ಲಿ ಅಲ್ಲಲ್ಲಿ ಕಾಣುವ ವೈರುಧ್ಯ ಹಾಗೂ ಅತಿ ಕಡಿಮೆಯಲ್ಲಿ ತಾನು ಅಗಾಧ ಸಾಮರ್ಥ್ಯ ಬೆಳೆಸಿಕೊಂಡು ವಿಸ್ತರಿಸಿದ್ದು... ಹೀಗೆ ಎಲ್ಲ ಆಯಾಮಗಳನ್ನು ಲೇಖಕರು ತೆರೆದಿಟ್ಟಿದ್ದಾರೆ.ಕೃತಿಯು ಭಾರತ–ಪಾಕಿಸ್ತಾನದ ಯುದ್ಧ, ಅದು ಮುಂದೆ ಬಾಂಗ್ಲಾ ವಿಮೋಚನೆಗೆ ಕಾರಣವಾದದ್ದನ್ನು ಕಥನ ರೂಪದಲ್ಲಿ ವಿವರಿಸಿಕೊಂಡು ಹೋಗಿದೆ. ವಿವಿಧ ದೇಶಗಳಲ್ಲಿ ‘ರಾ’ ಕಾರ್ಯಾಚರಣೆ, ಇಲ್ಲಿ ಸೇವೆ ಸಲ್ಲಿಸಿದ ಚಾಣಾಕ್ಷ ಅಧಿಕಾರಿಗಳು ಅವರ ತ್ಯಾಗ ಇಲ್ಲಿ ದಾಖಲಾಗಿವೆ. ಒಟ್ಟಿನಲ್ಲಿ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವ ಕೃತಿ ಇದು.