ಖ್ಯಾತನಾಮರಿಂದ ಹಿಡಿದು ಅಷ್ಟಾಗಿ ಬೆಳಕಿಗೆ ಬಾರದ ಅಪರೂಪದ ವ್ಯಕ್ತಿಗಳ ಪರಿಚಯ (ಶ್ರೀಸಾಮಾನ್ಯರು, ಬಹುಮಾನ್ಯರು) ಈ ಹೊತ್ತಗೆಯಲ್ಲಿದೆ. ಸದ್ದಿಲ್ಲದ ಸೇವಕರು, ಸಾಧಕರು, ಲೇಖಕರು ಇಲ್ಲಿ ಅನಾವರಣಗೊಂಡಿದ್ದಾರೆ. ಈ ಲೇಖನಗಳಿಗೆಲ್ಲ ಮೂಲವೇ ಫೇಸ್ಬುಕ್. ಲೇಖಕರ ಕರೆಗೆ ಹಲವಾರು ಜನ ಸ್ಪಂದಿಸಿ ಕೈಜೋಡಿಸಿ ಲೇಖನ ಬರೆದಿದ್ದಾರೆ. ಇಲ್ಲಿ ಅನಾವರಣಗೊಂಡ ಹೆಚ್ಚಿನ ವ್ಯಕ್ತಿಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರು. ಅನೇಕರು ಇಲ್ಲಿಂದ ಬೇರೆಡೆ ನೆಲೆಸಿ ಇಡೀ ದೇಶಕ್ಕೆ ಕೊಡುಗೆಯಾದವರು (ಜಾರ್ಜ್ ಫೆರ್ನಾಂಡಿಸ್, ಡಾ.ಬೆಳ್ಳಿಪಾಡಿ ಸತೀಶ್ ರೈ, ಕರ್ನಲ್ ಎಚ್.ಎಸ್. ಶಂಕರ್ ಇತ್ಯಾದಿ). ಹೀಗೆ ಪುಟ್ಟ ಲೇಖನ ಗುಚ್ಚದ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ ಲೇಖಕರು. ಜಾಲತಾಣವೊಂದರ ಆಗು ಹೋಗುಗಳನ್ನು ಒಂದಿಷ್ಟು ಜರಡಿ ಹಿಡಿದು ಆಯ್ದರೆ ಒಂದು ಗಟ್ಟಿಕಾಳಿನಂತಹ ವಿಷಯ ಸಿಗುತ್ತದೆ. ಅದನ್ನು ಗ್ರಂಥರೂಪಕ್ಕೆ ತಂದು ದಾಖಲೆಯಾಗಿಸಬಹುದು ಎಂಬುದಕ್ಕೆ ಈ ಹೊತ್ತಗೆ ಉದಾಹರಣೆಯಾಗಿ ಮುಂದಿದೆ.