ನಾಗಪ್ಪ, ಮಂಜ, ಮಾಸ್ತಿ ಗೌಡರಂಥ ಪಾತ್ರಗಳು ನಿಜ ಜೀವನದ ಪ್ರತಿನಿಧಿಗಳೂ ಹೌದು. ಇಲ್ಲಿ ಬಳಸಿರುವ ಹಾಲಕ್ಕಿ ಒಕ್ಕಲಿಗರ ಮೂಲಭಾಷೆಯೇ ಒಮ್ಮೆ ಉತ್ತರ ಕನ್ನಡದ ಕಾಡು, ಕಡಲುಗಳತ್ತ ಸುತ್ತಾಡಿಸಿ ಬರುತ್ತದೆ. ‘ಕೋಟಿ ಸೂರ್ಯದ ದುಡ್ಡು’, ಬೊಮ್ಮನ ಕಾಲಕ್ಕೂ ಅವನ ಮೊಮ್ಮಗನ ಕಾಲಕ್ಕೂ ಈಗಿನವರ ಮನಸ್ಥಿತಿಗೂ ಇರುವ ಅಂತರವನ್ನು ಕಾಣಿಸುವ ಕಥೆ. ಗೋಕರ್ಣ ಹಾಗೂ ಕೋಟಿ ತೀರ್ಥವನ್ನು ಬಲ್ಲವರಿಗೆ ಹೆಚ್ಚು ಆಪ್ತವಾಗುತ್ತದೆ. ಕೆಲವು ಕಥೆಗಳು ವಸ್ತುವಿನ ದೃಷ್ಟಿಯಿಂದ ಗಟ್ಟಿಯಾಗಿವೆ. ಆದರೆ, ನಿರೂಪಣೆಯನ್ನು ಸ್ವಲ್ಪ ಕಿರಿದಾಗಿಸಬಹುದಿತ್ತು. ಶ್ರಮ ಸಂಸ್ಕೃತಿಯ ಸಮುದಾಯದ ಬದುಕು–ಬಣ್ಣ–ಬವಣೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದ ಈ ಕಥಾ ಸಂಕಲನಕ್ಕೆ ಅದೇ ಶಕ್ತಿಯೂ ಹೌದು, ಮಿತಿಯೂ ಹೌದು.