‘ಇಸ್ಕೂಲು’ ಹಲವು ನೆನಪುಗಳ ಬುತ್ತಿ ಬಿಚ್ಚಿಡುವ ಪದ. ಸ್ಲೇಟು, ಬಳಪ, ನೀರ್ಕಡ್ಡಿ ಮನಸ್ಸಿನಾಳದಿಂದ ಹೊರಬರುವ ಗಳಿಗೆಯದು. ನೆನಪಿನ ಅಲೆಯನ್ನು ಹಬ್ಬಿಸಿ ಹರಿವ ಹೊಳೆ ‘ಇಸ್ಕೂಲು’. ಅಕ್ಷತಾ ಅವರು ತಾವು ಅಧ್ಯಾಪಕಿಯಾಗಿ ಕೆಲಸ ಮಾಡುವ ಜೋಯಿಡಾ ತಾಲ್ಲೂಕಿನ ‘ಅಣಶಿ’ ಎಂಬ ಹಳ್ಳಿಶಾಲೆಯಲ್ಲಿನ ಅನುಭವಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆರಂಭದಲ್ಲೇ ಬಾವುಟ ಹಾರಿಸಿ, ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳಿ, ಮೊದಲ ದಿನ ಮೌನವಾಗಿ, ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಕಣ್ಣಂಚಲ್ಲಿ ನೀರು ತುಂಬಿಕೊಂಡು, ಇಲಿಯಣ್ಣ ಬಂದಾಗ ಬೆದರಿ, ಗಾಂಧಿ ಜಯಂತಿಗೆ ಪೇಪರ್ ಟೋಪಿ ಮಾಡಿ, ಚಾರಣದ ಕಥೆ ಹೇಳುತ್ತಾ ಇಲ್ಲಿನ ‘ರಾಧಕ್ಕೋರು’ ಅನುಭವಗಳ ಮೂಸೆ ತೆರೆದಿದ್ದಾರೆ. ಇಡೀ ಕೃತಿಯಲ್ಲಿ ಈ ‘ರಾಧಕ್ಕೋರು’ ಶಾಲಾ ಮಕ್ಕಳ ಜೊತೆ ಒಡನಾಡುತ್ತಲೇ ಶೈಕ್ಷಣಿಕ ಮಾದರಿಯಾಗಿ ಕಾಣಿಸುತ್ತಾರೆ. ಲೇಖನಗಳು ಶಾಲೆಗೆ ಸೀಮಿತವಾಗದೆ, ಸುತ್ತಲಿನ ಪರಿಸರ, ಅದರ ವೈಶಿಷ್ಟ್ಯವೂ ಸೂಚ್ಯವಾಗಿ ಅಡಕವಾಗಿದೆ.