ಚೊಕ್ಕ ಬರವಣಿಗೆ, ಬಳಸಿರುವ ರೂಪಕ ಓದಿಗೆ ವೇಗ ವರ್ಧಕವಾಗಿ ದೃಶ್ಯರೂಪದಲ್ಲಿ ರೋಮಾಂಚನ ನೀಡುತ್ತವೆ. ‘ನಿವೃತ್ತಿ ಮರುದಿನದ ಮುಂಜಾನೆ’ ಕಥೆಯಲ್ಲಿ, ಕಿಟಕಿಯಿಂದ ಹೊರನೋಡಿದ ಸುಬ್ಬರಾಯಪ್ಪನವರಿಗೆ ಕಂಡ ದೃಶ್ಯದ ವಿವರಣೆ– ‘ಕಾದ ಹೆಂಟೆನೆಲವು ನೀರ್ಗುಳ್ಳೆಗಳನ್ನು ಹೊರಡಿಸುತ್ತ ಮಳೆನೀರನ್ನು ಗುಳುಗುಳನೆ ಇಂಗಿಸಿಕೊಳ್ಳುವಂತೆ ಹೊರಗಿನ ಮರ, ಗಿಡ, ಹೂವು, ಎಲೆ ತಂಗಾಳಿ ಸೊಬಗೆಲ್ಲವೂ ಬೆಲ್ಲ–ತುಪ್ಪದ ಪಾಯಸವಾಗಿ ಒಳಗಿಳಿಯತೊಡಗಿತು’ ಇದಕ್ಕೆ ಸಾಕ್ಷ್ಯ. ‘ಭಾನುವಾರದ ಒಂದು ಹಗಲು’ ಕಥೆಯಲ್ಲಿ ಕುಪ್ಪುಸ್ವಾಮಿಯ ‘ಹೆಣ–ಹಣ’ದ ತಳಮಳ ಕಟ್ಟಿಕೊಟ್ಟ ಬಗೆಯೂ ಉಲ್ಲೇಖಾರ್ಹ.