ಕಾಟನ್ ಮಿಲ್ ಆರಂಭ, ಈ ಮಿಲ್ನ ಕಾರ್ಮಿಕರ ಸಂಘಕ್ಕೆ ನರಸಿಂಹನ್ ಅವರು ಅಧ್ಯಕ್ಷರಾದ ನಂತರ ನಡೆದ ಘಟನೆಗಳು, ನಗರಸಭೆಯ ಸದಸ್ಯ ಸ್ಥಾನಕ್ಕೆ ಪಂಪಾಪತಿ ಅವರ ಅವಿರೋಧ ಆಯ್ಕೆ, ಕಮ್ಯೂನಿಸ್ಟ್ ಪಕ್ಷದ ರಾಜಕಾರಣಕ್ಕೆ ಅಧಿಕೃತ ಪ್ರವೇಶ, ಬಡ ಕಾರ್ಮಿಕರೂ ಜನಪ್ರತಿನಿಧಿಗಳಾದ ಬಗೆ ಹೀಗೆ ಪ್ರತಿಪುಟದಲ್ಲೂ ಕೆಂಪುಗಾಥೆಯನ್ನು ಈ ಕೃತಿ ಹಿಡಿದಿಟ್ಟಿದೆ. ಕೃತಿಗೆ ಬೆನ್ನುಡಿ ಬರೆದಿರುವ ರಹಮತ್ ತರೀಕೆರೆ ಅವರು ಉಲ್ಲೇಖಿಸುವಂತೆ ಈ ಕೃತಿ ಓದುತ್ತಾ, ದಾವಣಗೆರೆಯ ಹೋರಾಟದ ಘಟನಾವಳಿಗಳನ್ನು ಕಣ್ಣಾರೆ ಕಂಡಿದ್ದ ಕಾದಂಬರಿಕಾರ ಬಸವರಾಜ ಕಟ್ಟೀಮನಿಯವರ ಕಾದಂಬರಿ ‘ಜ್ವಾಲಾಮುಖಿಯ ಮೇಲೆ’ ನೆನಪಾಗುತ್ತದೆ.