ಯಕ್ಷಗಾನವೆಂಬ ವಾಙ್ಮಯ ಪ್ರಪಂಚದಲ್ಲಿ ಪ್ರಾಸಬದ್ಧತೆಗೆ, ಪೌರಾಣಿಕ ಚೌಕಟ್ಟಿನೊಳಗೆ ಪಾತ್ರೋಚಿತ ಸಂವಾದಕ್ಕೆ, ಆಕರ್ಷಕ ಪಾತ್ರ ನಿರೂಪಣೆಗೆ ಹೆಸರಾದವರು ಕುಂಬಳೆ ಸುಂದರ ರಾವ್. ಕಳೆದ ವರ್ಷಾಂತ್ಯದಲ್ಲಿ ನಮ್ಮಿಂದ ದೂರವಾದರೂ ಅವರು ಕಟ್ಟಿಕೊಟ್ಟ ಪಾತ್ರ ಪ್ರಪಂಚ, ವಾಕ್ ವೈಭವ, ಚೇತೋಹಾರಿ ಮಾತುಗಳು, ವಾಚಿಕಾಭಿನಯ - ಇವೆಲ್ಲ ಯಕ್ಷಗಾನ ಲೋಕದಲ್ಲಿ ಸದಾ ಸ್ಮರಣೀಯ. 2008ರಲ್ಲಿ ಪ್ರಕಟವಾದ ಅವರ ಆತ್ಮಕತೆ, ಡಾ.ಅಮೃತ ಸೋಮೇಶ್ವರ ಸಂಪಾದಕತ್ವದ ‘ಸುಂದರ ಕಾಂಡ’ ಈಗ ‘ಯಕ್ಷ ಪಥದ ಯಾತ್ರಿಕ’ ಹೆಸರಿನಲ್ಲಿ, ಅವರ ಸಹೋದರ ನಾ.ದಾಮೋದರ ಶೆಟ್ಟಿ ಅವರ ಸಂಪಾದಕತ್ವದಲ್ಲಿ ಮರು ಮುದ್ರಣಗೊಂಡಿದೆ. 350 ಪುಟಗಳ ಈ ಗ್ರಂಥದಲ್ಲಿ ಅವರ ಬದುಕು, ಹಿನ್ನೆಲೆ, ಪರಿಸರ, ವೃತ್ತಿ, ಪ್ರವೃತ್ತಿ, ಸಂಸಾರ, ಬಂಧು ಮಿತ್ರರು, ಸಹಕಲಾವಿದರ ನೆನಪುಗಳಿವೆ. ಜೊತೆಗೆ ಅವರ ಕಾಲದ ರಂಗ ಚಟುವಟಿಕೆಗಳ ಮೇಲೆ ಬೆಳಕನ್ನೂ ಚೆಲ್ಲಲಾಗಿದೆ.