ಜಗತ್ತು ಸುತ್ತಿದರೂ ವಾಪಸ್ ನಮ್ಮ ತಾಯ್ನೆಲದ ಮಣ್ಣನ್ನೇ ನಂಬಿ ಬದುಕು ಕಟ್ಟಿಕೊಳ್ಳಬೇಕು, ಸಾರ್ಥಕವಾಗಬೇಕು ಎಂಬ ಆಶಯವೇ ‘ಭೂಮಿಯ ಋಣ’. ಈ ಕಥೆಗಳ ಗುಚ್ಛದಲ್ಲಿ ಇದೇ ಪ್ರಧಾನ ವಸ್ತು. ಎಲ್ಲ ಕಥೆಗಳೂ ಅಷ್ಟೆ. ನಮ್ಮ ನೆಲ, ನಮ್ಮತನ, ಸೊಗಡಿನ ಬಗ್ಗೆ ಮಾತನಾಡಿವೆ. ಕುಟುಂಬ, ಸಂಬಂಧಗಳ ಮೌಲ್ಯವನ್ನು ತಿಳಿಹೇಳಿವೆ. ಗ್ರಾಮೀಣ ಹೆಣ್ಣುಮಕ್ಕಳ ಬದುಕು– ಬವಣೆಯನ್ನು ತೆರೆದಿಟ್ಟಿವೆ. ದೇವರು– ನಂಬಿಕೆ– ಮೂಢನಂಬಿಕೆಗಳ ಬಗೆಗೂ ಚರ್ಚೆಗಳಿವೆ. ದೇವದಾಸಿ ಪದ್ಧತಿಯ ದರ್ಶನವೂ ಇದೆ. ಮಾತುಗಳಲ್ಲಿ ಪ್ರಾದೇಶಿಕ ಪದಗಳ ನುಡಿಗಟ್ಟುಗಳ ಬಳಕೆ, ಗಾದೆಗಳ ಉಲ್ಲೇಖ, ಮಾತಿನ ಕಸುವು ಇದೆ. ಪ್ರತಿರೋಧದ ಧ್ವನಿ, ಗ್ರಾಮೀಣ ಮಹಿಳೆಯರ ಕ್ಷೀಣ ಒಳದನಿಗಳಿಗೆ ಅಕ್ಷರ ರೂಪ ಕೊಟ್ಟಿದ್ದಾರೆ ಕಥೆಗಾರ್ತಿ.