ಸುಮ್ಮನೆ ಲಹರಿಗೆ ಬಿದ್ದು ಕನ್ನಡದ ಗಝಲ್ ಬರೆಯುವವರಿಗಿಂತ ಭಿನ್ನವಾಗಿ, ಮತ್ಲಾ, ರದೀಫ್, ಕಾಫಿಯಾ, ರವೀಗಳ ಛಂದೋಬದ್ಧ ಅಧ್ಯಯನ ನಡೆಸಿ ಗಝಲ್ ಬರೆಯುತ್ತಿರುವ ಕನ್ನಡ ಕವಿಗಳ ಗುಂಪೊಂದಿದೆ. ಈ ಗುಂಪಿಗೆ ಹೊಸ ಸೇರ್ಪಡೆ ನಿರ್ಮಲಾ ಶೆಟ್ಟರ. ’ನಿನ್ನ ಧ್ಯಾನಿಸಿದ ಮೇಲೂ‘ ಎನ್ನುವ ಅವರ ಈ ಗಝಲ್ ಸಂಕಲನದ ಕವಿತೆಗಳು ಪದೇ ಪದೇ ಧ್ಯಾನದೊಳಗಿನ ಜ್ಞಾನವನ್ನೂ ಎತ್ತಿ ತೋರುತ್ತವೆ. ಮುನ್ನುಡಿಯಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಗುರುತಿಸಿದಂತೆ ಇಲ್ಲಿರುವ ’ಗಝಲ್ ದೇಹದಲ್ಲಿ ಕನ್ನಡದ ರಕ್ತ ಮಾಂಸ ಪ್ರಾಣ ಸಂಚಾರ’ ಗಮನ ಸೆಳೆಯುತ್ತದೆ.