ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವಿಗೆ ಒಲವು ಸವರಿದ ಕಾವ್ಯ

Last Updated 18 ಏಪ್ರಿಲ್ 2020, 18:30 IST
ಅಕ್ಷರ ಗಾತ್ರ

ಕನ್ನಡದಲ್ಲಿ ಗಝಲ್‌ ಬರೆಯುವವರ ಸಂಖ್ಯೆ ಬೆಳೆಯುತ್ತಲೇ ಇದೆ. ಅದರಲ್ಲೂ ಉರ್ದು ಮತ್ತು ಹಿಂದಿ ಹೃದಯಕ್ಕೆ ಹತ್ತಿರವಾಗಿರುವ ಉತ್ತರ ಕರ್ನಾಟಕದಲ್ಲಿ ಗಝಲ್‌ ಬರೆಯುವವರ ದೊಡ್ಡದೊಂದು ದಂಡೇ ಇದೆ. ಕನ್ನಡ ಕಾವ್ಯದ ಜೊತೆಗೆ ಸ್ತನಪಾನದ ಸಂಬಂಧ ಇಟ್ಟುಕೊಂಡೇ ಉರ್ದು ಗಝಲ್‌ಗಳನ್ನು ಪ್ರೀತಿಸುತ್ತಿರುವುದು ಈ ದಂಡಿನಲ್ಲಿ ಎದ್ದು ಕಾಣುವ ಸಂಗತಿ. ಉರ್ದು ಗಝಲ್‌ನ ಮೋಹಕ್ಕೆ ಸಿಕ್ಕು ಕನ್ನಡದಲ್ಲಿ ಗಝಲ್‌ ಬರೆಯುವವರು ಎರಡೂ ಭಾಷೆಗಳ ಕಾವ್ಯದ ಅಧ್ಯಯನ ನಡೆಸುತ್ತಿರುವುದು ಗಮನಾರ್ಹ.

ಸುಮ್ಮನೆ ಲಹರಿಗೆ ಬಿದ್ದು ಕನ್ನಡದ ಗಝಲ್‌ ಬರೆಯುವವರಿಗಿಂತ ಭಿನ್ನವಾಗಿ, ಮತ್‌ಲಾ, ರದೀಫ್‌, ಕಾಫಿಯಾ, ರವೀಗಳ ಛಂದೋಬದ್ಧ ಅಧ್ಯಯನ ನಡೆಸಿ ಗಝಲ್ ಬರೆಯುತ್ತಿರುವ ಕನ್ನಡ ಕವಿಗಳ ಗುಂಪೊಂದಿದೆ. ಈ ಗುಂಪಿಗೆ ಹೊಸ ಸೇರ್ಪಡೆ ನಿರ್ಮಲಾ ಶೆಟ್ಟರ. ’ನಿನ್ನ ಧ್ಯಾನಿಸಿದ ಮೇಲೂ‘ ಎನ್ನುವ ಅವರ ಈ ಗಝಲ್‌ ಸಂಕಲನದ ಕವಿತೆಗಳು ಪದೇ ಪದೇ ಧ್ಯಾನದೊಳಗಿನ ಜ್ಞಾನವನ್ನೂ ಎತ್ತಿ ತೋರುತ್ತವೆ. ಮುನ್ನುಡಿಯಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಗುರುತಿಸಿದಂತೆ ಇಲ್ಲಿರುವ ’ಗಝಲ್‌ ದೇಹದಲ್ಲಿ ಕನ್ನಡದ ರಕ್ತ ಮಾಂಸ ಪ್ರಾಣ ಸಂಚಾರ’ ಗಮನ ಸೆಳೆಯುತ್ತದೆ.

’ಈಗೀಗ ನಾನು ಮಲ್ಲಿಗೆ ಮುಡಿಯುವುದ ಬಿಟ್ಟಿರುವೆ/ ನಿನ್ನ ಬೆವರು ಅಂಟಿದ ಮೇಲೆ ಗಿಡ ನೆಡುವುದ ಬಿಟ್ಟಿರುವೆ..‘ ಎಂದು ಪ್ರೇಮಿಯ ಜೊತೆಗೆ ನೇರ ಮಾತನಾಡುವಂತೆಯೇ, ’ಹಸಿರುಡುವ ಭೂತಾಯಿ ನಂಜುಂಡ ಗರ್ಭದಲಿ / ಕಣ್ಣು ಆಡಿಸಿದಲ್ಲೆಲ್ಲಾ ಹಸಿವು ವಿಷವಾಗಿ ಕಾಡುತ್ತಿದೆ..‘ ಎಂದು ಸಾಮಾಜಿಕ ಎಚ್ಚರವನ್ನೂ ಪ್ರಕಟಿಸುತ್ತಾರೆ. ಒಟ್ಟು 54 ಗಝಲ್‌ಗಳ ಈ ಗುಚ್ಛ ಕಾವ್ಯಮೋಹಿಗಳ ದಾರಿಯ ನೋವಿನಲಿ ಹೆಗಲ ನೀಡಿದ ಹೆಜ್ಜೆಗಳಂತಿವೆ. ಗಝಲ್‌ ಬರೆಯುವುದಲ್ಲ, ಅದೊಂದು ಕಟ್ಟುವ ಕ್ರಿಯೆ ಎನ್ನುವುದನ್ನು ನಿರ್ಮಲಾ ಅವರು ಬಹು ಎಚ್ಚರದಿಂದ ಪಾಲಿಸಿದ್ದಾರೆ. ಮೊದಲ ಕವನ ಸಂಕಲನ ಪ್ರಕಟಿಸಿದ 10 ವರ್ಷಗಳ ಬಳಿಕ ಎರಡನೆಯದಾಗಿ ಗಝಲ್‌ ಸಂಕಲನವನ್ನು ಹೊರತಂದಿರುವ ಈಕವಯತ್ರಿ ಈ ಮೂಲಕ ತನ್ನ ಮುಂದಿನ ಕವನ ಸಂಕಲನದ ಬಗ್ಗೆ ಹೊಸ ನಿರೀಕ್ಷೆಯನ್ನೂ ಹುಟ್ಟುಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT