ಮನಸ್ಸು ಜರ್ಜರಿತವಾದಾಗ ಯೋಚನೆಗಳು ಅಷ್ಟು ಸಲೀಸಾಗಿ ಹರಿಯುವುದಿಲ್ಲ ಎಂಬಂತಹ ತಾಕಲಾಟದ ಮಾತುಗಳು ಪುಸ್ತಕದ ಹೂರಣ. ಅಪ್ಪನ ಹೋಟೆಲಿಗೆ ನೆರವಾಗುತ್ತಾ, ಹಾಲು ವ್ಯಾಪಾರ, ಓದುಗಳನ್ನು ಸರಿದೂಗಿಸಿಕೊಂಡು ಹೋಗುವ ಗಜ್ಯಾನದ್ದು ಒಂದು ತುಂಟ ಪಡೆ ಇರುತ್ತದೆ. ಅವರ ಕಿತಾಪತಿ, ತಮ್ಮ ನಡುವಿನ ಸ್ಪರ್ಧೆ ಮುಂತಾದವುಗಳು ಬಿದ್ದು ಮೇಲೇಳುವ ಮನಸುಗಳಿಗೆ ಚಿಕಿತ್ಸಕ ಗುಣದಂತಿರುತ್ತವೆ. ಇಡೀ ಕಾದಂಬರಿಯುದ್ದಕ್ಕೂ ಆಲದ ಮರದ ಅಜ್ಜನ ಪಾತ್ರ ಗಮನ ಸೆಳೆಯುತ್ತದೆ. ಕಥೆ ಹೇಳುವ, ಅನುಭವ ಹಂಚಿಕೊಳ್ಳುವ, ಮಕ್ಕಳಿಗೆ ತಿಳಿ ಹೇಳುವ ಆತನ ಸಾಂಗತ್ಯ ಗಜ್ಯಾ ಮತ್ತು ಸಂಗಡಿಗರಿಗೆ ಅಪ್ಯಾಯಮಾನವಾಗಿರುತ್ತದೆ.