ಕಥೆಯ ನಡುವೆ ಬರುವ ಖರ್ಚು, ವೆಚ್ಚದ ತಖ್ತೆ ವಿವರಗಳು, ಪಂಚಗವ್ಯ, ಸಾವಯವ ಗೊಬ್ಬರ ತಯಾರಿಸುವ ವಿಧಾನ ಹಾಗೂ ಸಸ್ಯ ಸಂರಕ್ಷಣೆ ಕುರಿತ ಮಾಹಿತಿಗಳು ಕಾದಂಬರಿಯ ಭಾಗವಾಗದೆ ರೈತರಿಗೆ ನೀಡಿದ ಸಲಹೆಗಳಂತೆ ಭಾಸವಾಗುತ್ತವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೃಷಿ ಯೋಜನೆಗಳ ಕುರಿತ ವಿವರಗಳು ಇದನ್ನೊಂದು ಕೃಷಿ ವಿಶ್ವವಿದ್ಯಾಲಯದ ಕೈಪಿಡಿ ರೀತಿಯಲ್ಲಿ ಓದಿಕೊಳ್ಳುವಂತೆ ಒತ್ತಾಯಿಸುತ್ತವೆ. ಕೃಷಿ ಜತೆಗೆ ಉಪ ಕಸುಬುಗಳನ್ನು ಮಾಡುತ್ತಾ ಹಳ್ಳಿಯಲ್ಲಿ ನೆಮ್ಮದಿಯ ಜೀವನ ಸಾಗಿಸಬಹುದು ಎಂದು ಪ್ರತಿಪಾದಿಸುವ ಈ ಕಾದಂಬರಿ, ಯುವಕರನ್ನು ಮತ್ತೆ ಹಳ್ಳಿಯತ್ತ ಹಿಂದಿರುಗುವಂತೆ ಆಗ್ರಹಿಸುತ್ತದೆ. ಯಾವ ಉದ್ವೇಗಕ್ಕೂ ಒಳಗಾಗದೆ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳದೆ ಹಣ ಗಳಿಸಬಹುದಾದ ಒಂದೇ ಕ್ಷೇತ್ರವೆಂದರೆ ಅದು ಕೃಷಿ ಎನ್ನುವುದು ಕೃತಿ ಕೊಡುವ ಸಂದೇಶವಾಗಿದೆ.