ಮೈಸೂರು ಮಹಾರಾಜರ ಚರಿತ್ರೆಯು ಕನ್ನಡದ ಹಲವು ಪ್ರಮುಖ ಲೇಖಕರನ್ನು ಬಹುವಾಗಿ ಕಾಡಿದೆ. ಈ ರಾಜರ ಕಥೆ ಲಾವಣಿ ರೂಪದಲ್ಲಿ ಜನರ ಮಧ್ಯೆ ಇಂದಿಗೂ ಉಸಿರಾಡುತ್ತಿದೆ. ಅಷ್ಟೇ ಅಲ್ಲ, ಇತಿಹಾಸದ ದಾಖಲೆಯಾಗಿ, ಕಥೆಯಾಗಿ, ಕಾದಂಬರಿಯಾಗಿ, ನಾಟಕವಾಗಿ... ಹೀಗೆ ಬಗೆಬಗೆಯ ರೂಪದಲ್ಲಿ ಅವರ ಚರಿತ್ರೆ ನಮ್ಮ ಮುಂದೆ ಕಾಣಿಸಿಕೊಂಡಿದೆ. ಇತಿಹಾಸವನ್ನು ಭಿನ್ನವಾಗಿ ಗ್ರಹಿಸುವ, ಹಾಗೇ ಕಂಡರಿಸುವ ನಾಟಕಕಾರ, ಕವಿ ಡಿ.ಎ.ಶಂಕರ್ ಅವರನ್ನೂ ಮೈಸೂರು ಮಹಾರಾಜರು ಕಾಡದೆ ಬಿಟ್ಟಿಲ್ಲ. ಅಂತೆಯೇ ರಾಜರ ಚರಿತ್ರೆಯನ್ನೇ ಕೇಂದ್ರೀಕರಿಸಿ ಅವರು ಬರೆದ ನಾಲ್ಕು ನಾಟಕಗಳ ಸಂಕಲನವೇ ಇದೀಗ ಓದುಗರ ಕೈಸೇರಿರುವ ‘ಮೈಸೂರು ಇತಿಹಾಸ: ನಾಲ್ಕು ಐತಿಹಾಸಿಕ ನಾಟಕ ಚಕ್ರ’.