‘ಕನ್ನಡದ ಮಹಾಕವಿ ಕುವೆಂಪು ಮತ್ತು ಸಂಸ್ಕೃತದ ಮಹಾನಾಟಕಕಾರ ಭಾಸ ನನ್ನ ರಾಮಾಯಣದ ಅನ್ವೇಷಣೆಗೆ ಪ್ರೇರಣೆ’ ಎಂದಿರುವ ನಾಗರಾಜ್, ತಮ್ಮ ಕೃತಿಯನ್ನು ಪೂರ್ವ ಕಾಂಡ (ನಿಜ ರಾಮಾಯಣದ ಅನ್ವೇಷಣೆ) ಮತ್ತು ಉತ್ತರಕಾಂಡ (ರಾಮಾಯಣದ ನಿಜಸ್ವರೂಪ) ಎಂದು ಎರಡು ಭಾಗಗಳನ್ನಾಗಿ ವಿಂಗಡಿಸಿದ್ದಾರೆ. ರಾಮಾಯಣ ಬೆಳೆದು ಬಂದ ಬಗೆ, ರಾಮಾಯಣ ಪೂರ್ವದ ಸೀತೆ– ಅಹಲ್ಯೆಯರ ಕಥೆ, ರಾಮನ ಹುಟ್ಟಿಗೂ ಸ್ಥಿರ ಕೃಷಿ ಮತ್ತು ಕಬ್ಬಿಣದ ಬಳಕೆಗೆ ಇರುವ ಸಂಬಂಧ, ಹಲರಾಮನ ಮೇಲೆ ಕೋದಂಡರಾಮನ ಸವಾರಿ– ಹೀಗೆ ವಿಭಿನ್ನ ದಿಕ್ಕಿನಲ್ಲಿ ರಾಮಾಯಣವನ್ನು ಬಗೆಬಗೆದು ಪರಿಶೀಲಿಸಿದ್ದಾರೆ. ರಾಮಾಯಣ ಮತ್ತು ಇಲಿಯಡ್ ಎಂಬ ಗ್ರೀಕ್ ಕಾವ್ಯದ ಕುರಿತ ಹೋಲಿಕೆ, ಕ್ಷತ್ರಿಯ–ವಾನರ– ದೇವತೆ– ಯಕ್ಷರ ವಿಭಜನೆಯ ಹಿಂದಿರುವ ವಸಾಹತು ರಾಜಕೀಯ ಮತ್ತು ರಾಮ ಅವತಾರವಾದ ಬಗೆಗಳನ್ನು ವಿಶ್ಲೇಷಿಸಿ ಸಾಕಷ್ಟು ಚರ್ಚೆಗೂ ಅವಕಾಶ ಕೊಟ್ಟಿದ್ದಾರೆ.