ರಂಗಭೂಮಿಯ ಯಾವ ತರಬೇತಿಯನ್ನೂ ಪಡೆಯದೇ ಇದ್ದರೂ 20ನೇ ಶತಮಾನದ ಉತ್ತರಾರ್ಧದ ಐದು ದಶಕಗಳ ಕಾಲ ಹವ್ಯಾಸಿ ರಂಗಭೂಮಿಯ ನಾಯಕ ಎಂದು ಕರೆಸಿಕೊಂಡ, ಈ ವೇದಿಕೆಗೆ ನೂರಾರು ರಂಗಕರ್ಮಿಗಳನ್ನು, ಕಲಾವಿದರನ್ನು ನೀಡಿದ ರಾಮರಾಜೇ ಅರಸು ನಾಗೇಶ(ಆರ್.ನಾಗೇಶ್) ಅವರ ನೆನಪಿನಲ್ಲಿ ಬಂದಿರುವ ಕೃತಿ ‘ಆರ್.ನಾಗೇಶ್ ರಂಗವಿಹಂಗಮ’. 15 ವರ್ಷಗಳ ಹಿಂದೆಯೇ ಬರಬೇಕಿದ್ದ ಇಂಥ ಒಂದು ಕೃತಿ ತಡವಾಗಿದ್ದೇಕೆ ಎನ್ನುವ ಕಾರಣವನ್ನು ನೀಡುತ್ತಾ, ಆರ್.ನಾಗೇಶ್ ಅವರ ಒಡನಾಡಿಗಳಾಗಿದ್ದ ಶ್ರೀನಿವಾಸ್ ಜಿ.ಕಪ್ಪಣ್ಣ, ಟಿ.ಎನ್.ಸೀತಾರಾಂ, ಟಿ.ಎಸ್.ನಾಗಾಭರಣ, ಕೆ.ಮರಳಸಿದ್ದಪ್ಪ, ಪುರುಷೋತ್ತಮ ಬಿಳಿಮಲೆ, ಎನ್.ಕೆ.ಮೋಹನರಾಂ, ಉಮಾಶ್ರೀ, ಮಂಡ್ಯ ರಮೇಶ ಮುಂತಾದವರ ನೆನಪಿನ ಬುತ್ತಿಯಿಂದ ಬಂದ ಲೇಖನ, ಛಾಯಾಚಿತ್ರಗಳೊಂದಿಗೆ ಕೃತಿಯನ್ನು ಸಂಪಾದಿಸಿದ್ದಾರೆ ಬಿ.ಎಸ್.ವಿದ್ಯಾರಣ್ಯ.