ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯ ಕೌತುಕಗಳ ಅಕ್ಷರಮಾಲೆ

Last Updated 28 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ವನ್ಯಜೀವಿ ಕಾರ್ಯಕರ್ತ ಸಂಜಯ್ ಗುಬ್ಬಿ ಬರೆದಿರುವ ಹೊಸ ಪುಸ್ತಕ ‘ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು’. ಪರಿಸರ, ವನ್ಯಜೀವಿಗಳು, ಆ ವನ್ಯಜೀವಿಗಳಿಗೆ ಇರುವ ಪುರಾಣರೂಪಿ ಪ್ರಸಿದ್ಧಿ... ಇಂಥವುಗಳ ಬಗ್ಗೆ ಆಸಕ್ತಿ ಇರುವವರಿಗೆ ಎಂದೇ ಈ ಪುಸ್ತಕ ಬರೆದಂತೆ ಇದೆ. ಕಾಡುಗಳಿಂದ ದೂರ ಇದ್ದು, ನಗರವಾಸಿ ಬದುಕಿನ ನಡುವೆಯೇ ವನ್ಯಲೋಕದ ಬಗ್ಗೆ ಕೌತುಕ ಇರಿಸಿಕೊಂಡವರನ್ನು ಮನಸ್ಸಿನಲ್ಲಿ ಕುಳ್ಳಿರಿಸಿಕೊಂಡು, ಈ ಪುಸ್ತಕದ ಅಕ್ಷರಗಳನ್ನು ಅವರು ಪೋಣಿಸಿದ್ದಾರೆ ಎಂಬುದು ಮೊದಲ ಓದಿನಲ್ಲಿ ದಕ್ಕುವ ಅನುಭವ.

ಪುಸ್ತಕದಲ್ಲಿ ಇರುವ ‘ಇಬ್ಬನಿಯ ಹುಲಿ’ ಕಥೆಯನ್ನು ಈ ಮಾತಿಗೆ ಉದಾಹರಣೆಯಾಗಿ ಉಲ್ಲೇಖಿಸಬಹುದು. ಇದನ್ನು ಕಥೆಯಾಗಿಯೂ ಓದಿಕೊಳ್ಳಬಹುದು, ವನ್ಯಜೀವಿಗಳಿಗೆ ಸಂಬಂಧಿಸಿದ ಅನುಭವಕಥನದ ಒಂದು ಅಧ್ಯಾಯವಾಗಿಯೂ ಓದಿಕೊಳ್ಳಬಹುದು. ‘ಇಬ್ಬನಿಯ...’ ಅಧ್ಯಾಯವು ಕಾಡಿನಲ್ಲಿ ವನ್ಯಮೃಗಗಳ ಜೊತೆ ನಡೆದ ಮುಖಾಮುಖಿಯ ಕಥೆಯಾದರೆ, ‘ಶಾಲೆಗೆ ಬಂದ ಚಿರತೆ’ ಅಧ್ಯಾಯ (ಅಥವಾ ಸೊಗಸಾದ ಒಂದು ಥ್ರಿಲ್ಲರ್ ಕಥೆ) ವನ್ಯಮೃಗ ಮತ್ತು ಮಾನವನ ಸಂಘರ್ಷದ ಒಂದು ಮುಖವನ್ನು ಸ್ವಾನುಭವದ ಮೂಲಕ ವಿವರಿಸುತ್ತದೆ. ಬೆಂಗಳೂರಿನಲ್ಲಿ 2016ರಲ್ಲಿ ಶಾಲೆಯೊಂದಕ್ಕೆ ಚಿರತೆ ನುಗ್ಗಿದ್ದು, ಅದನ್ನು ಹಿಡಿಯಲು ಹೋದ ಸಂಜಯ್ ಮೇಲೆ ಆ ಚಿರತೆ ಎರಗಿದ್ದು ಈ ಅಧ್ಯಾಯದ ಕಥಾವಸ್ತು. ‘ಆನೆ ಕರಡಿಗಳ ನ್ಯಾಯಾಲಯದಲ್ಲಿ ಕ್ಯಾಮರಾ ಟ್ರಾಪ್‌ಗಳು’ ಕಥೆಯು ತಮ್ಮ ಆವಾಸಸ್ಥಾನದಲ್ಲಿ ಅನೈಸರ್ಗಿಕ ವಸ್ತುವೊಂದು ಕಂಡಾಗ ಪ್ರಾಣಿಗಳು ವರ್ತಿಸುವ ಬಗೆಯನ್ನು ಕಟ್ಟಿಕೊಡುತ್ತದೆ. ಹೀಗೆ, ಪುಸ್ತಕದ ಒಂದೊಂದು ಅಧ್ಯಾಯವೂ ಕಥೆಯ ರೂಪದಲ್ಲಿ ವನ್ಯಜೀವಿಗಳ ಲೋಕದ ಒಂದೊಂದು ಆಯಾಮವನ್ನು ವಿವರಿಸುತ್ತ ಸಾಗುತ್ತದೆ.

‘ಕಥೆಗಳು’ ಎಂಬ ಪದವನ್ನು ಸಂಜಯ್ ಅವರು ಈ ಪುಸ್ತಕದ ಶೀರ್ಷಿಕೆಯಲ್ಲಿ ಬಳಸಿರುವುದನ್ನು ಗಮನಿಸಿದರೆ, ಈ ಪುಸ್ತಕವು ಗಹನ ವಿಚಾರಗಳನ್ನೂ ಸಹಜ ಧಾಟಿಯಲ್ಲಿ ಹೇಳಬೇಕು ಎಂಬ ಉದ್ದೇಶ ಲೇಖಕರದ್ದಾಗಿತ್ತು ಎಂಬುದು ವೇದ್ಯವಾಗುತ್ತದೆ. ಪುಸ್ತಕದಲ್ಲಿ ಬಳಸಿರುವ ಭಾಷೆ ಕೂಡ ಅದೇ ರೀತಿಯಲ್ಲಿ ಇದೆ. ಅಂದಹಾಗೆ, ಈ ಪುಸ್ತಕದಲ್ಲಿ ಇರುವ ಕೆಲವು ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವುವು. ಹಾಗಾಗಿ, ಕೆಲವು ಕಥೆಗಳನ್ನು ಓದುವಾಗ ‘ಎಲ್ಲೋ ಓದಿದ್ದೇನಲ್ಲ’ ಎಂಬ ಸಹಜ ಅನುಮಾನ ಮೂಡಬಹುದು.

ಶಾಲೆಗೆ ಬಂದ ಚಿರತೆ
ಮತ್ತು ಇತರ ಕಥೆಗಳು
ಲೇ: ಸಂಜಯ್ ಗುಬ್ಬಿ
ಪ್ರ: ನವಕರ್ನಾಟಕ ಪ್ರಕಾಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT