ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಚುವಲ್ ವಾದ್ಯಗೋಷ್ಠಿಯಲ್ಲಿ ರಂಗಪ್ರವೇಶ!

Last Updated 7 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಕಲಾರಸಿಕರು ಎದುರಿಗೆ ಕುಳಿತು ಮೆಚ್ಚುಗೆಯ ಕರತಾಡನ ಮಾಡುತ್ತಿದ್ದರೆ ಕಲಾವಿದರಿಗೆ ನರ್ತಿಸಲು ಸಹಜ ಸ್ಫೂರ್ತಿ-ಉತ್ಸಾಹದ ರಂಗು. ನೃತ್ಯ-ಅಭಿನಯದ ಸಾಕ್ಷಾತ್ಕಾರಕ್ಕೆ ಉತ್ತಮ ಪ್ರಭಾವಳಿ ನೀಡುವ ಉತ್ತಮ ಸಂಗೀತ-ವಾದ್ಯಗೋಷ್ಠಿಯ ಸಾಹಚರ್ಯ ಇದ್ದರಂತೂ ನೃತ್ಯ ಕಲಾವಿದರಿಗೆ ಜೀವಂತಿಕೆಯ ಚೈತನ್ಯ. ಇದು ಎಂದಿನ ನೃತ್ಯ ಕಾರ್ಯಕ್ರಮಗಳ ದೃಶ್ಯ. ಆದರೆ ಇಂದಿನ ವಿಶ್ವವ್ಯಾಪಿ ಕರಾಳ ಕೊರೊನಾದ ಆಕ್ರಮಣದ ಸಂದರ್ಭದಲ್ಲಿ ರಂಗಪ್ರವೇಶಗಳು ನಡೆಯುವ ಸನ್ನಿವೇಶಗಳೇ ವಿಭಿನ್ನ.

ಇಂಥ ವಿಷಮ ಪರ್ವಕಾಲದಲ್ಲಿ ಕೆಲಕಾಲ ಕೈಕಟ್ಟಿ ಕುಳಿತ ನೃತ್ಯ ಕಲಾವಿದರು ತಮ್ಮ ಸೃಜನಾತ್ಮಕ ಚಟುವಟಿಕೆಗಳನ್ನು ಹೆಚ್ಚು ಕಾಲ ಹತ್ತಿಕ್ಕಲಾರದೆ ಪರ್ಯಾಯವಾಗಿ ಕಂಡುಕೊಂಡ ಮಾರ್ಗವೇ ‘ಅಂತರ್ಜಾಲ’ ಮಾಧ್ಯಮ ಬಳಕೆ. ಕಳೆದೊಂದು ವರ್ಷದಿಂದ ಈ ಬಗೆಯ ‘ವರ್ಚುವಲ್’ ನೃತ್ಯ ಕಾರ್ಯಕ್ರಮಗಳು ನಡೆಯುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.

ಇತ್ತೀಚೆಗೆ ಅಮೆರಿಕದ ಬೇ ಏರಿಯಾದಲ್ಲಿ ಇಂಥದೊಂದು ‘ರಂಗಪ್ರವೇಶ’ ನೃತ್ಯ ಕಾರ್ಯಕ್ರಮ ನಡೆಯಿತು. ಅಲ್ಲಿ ಎಲ್ಲವೂ ಶಿಸ್ತುಬದ್ಧ ಮತ್ತು ಕಾನೂನಿನ ಚೌಕಟ್ಟಿನಲ್ಲೇ ನಡೆಸಬೇಕಾದ ನಿಬಂಧನೆ. ಅದರಂತೆ ಖ್ಯಾತ ನೃತ್ಯ ಕಲಾವಿದೆ ಮತ್ತು ನಾಟ್ಯಗುರು ವಿದುಷಿ ವಿದ್ಯಾಲತಾ ಜೀರಗೆಯವರ ಶಿಷ್ಯೆ ನಿಶಾ ನವೀನ್ ‘ರಂಗಪ್ರವೇಶ’ವು ವಿಧ್ಯುಕ್ತವಾಗಿ ನೆರವೇರಿತು. ತಂತ್ರಜ್ಞರೂ ಸೇರಿದಂತೆ ಇಪ್ಪತ್ತು ಜನರಿಗೆ ಮಾತ್ರ ಪ್ರವೇಶಾವಕಾಶವಿತ್ತು. ಧ್ವನಿ, ಬೆಳಕು, ವೇಷಭೂಷಣ ಸಹಾಯಕ, ಮೇಕಪ್ ಮ್ಯಾನ್, ವಿಡಿಯೊ-ಫೋಟೊಗ್ರಾಫರ್‌ಗಳು, ಆಡಿಟೋರಿಯಂನವರೂ ಸೇರಿದಂತೆ ಹನ್ನೆರಡು ಜನ ಮತ್ತು ಕಲಾವಿದೆ ಹಾಗೂ ಅವಳ ತಾಯ್ತಂದೆಯರು, ಗುರುಗಳು, ಪೂಜೆ ಮಾಡಿಸುವ ಶಾಸ್ತ್ರಿಗಳು ಸೇರಿದಂತೆ ಒಟ್ಟು ಎಂಟು ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ನೃತ್ಯಕ್ಕೆ ಸಂಗೀತ ಸಹಕಾರ ನೀಡುವ ವಾದ್ಯಗೋಷ್ಠಿಯವರು ಅಂತರ್ಜಾಲದಲ್ಲೇ ತಮ್ಮ ಕಾರ್ಯವನ್ನು ನಿರ್ವಹಿಸಿದ್ದು ಇದೇ ಪ್ರಥಮ ಎನ್ನಬಹುದು. ನೂರಾರು ಮಂದಿ ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ರಂಗಮಂದಿರ ಪೂರ್ತಿ ಖಾಲಿಯಾಗಿತ್ತು. ಬರೀ ಖಾಲಿ ಕುರ್ಚಿಗಳು! ಕಲಾವಿದೆ ನಿಶಾ, ಸುಂದರ ವೇಷಭೂಷಣಗಳಿಂದ ಸಜ್ಜಿತಳಾಗಿ, ಎದುರಿಗೆ ಸಾವಿರಾರು ಮಂದಿ ಕಲಾರಸಿಕರು ಆಸಕ್ತಿಯಿಂದ ನೃತ್ಯ ವೀಕ್ಷಣೆ ಮಾಡುತ್ತಿದ್ದಾರೆಂಬ ಭಾವನೆಯಲ್ಲಿ ರಂಗದ ಮೇಲೆ ಸುಮನೋಹರವಾಗಿ ಎರಡು ಗಂಟೆಗಳ ಕಾಲ ತಾದಾತ್ಮ್ಯವಾಗಿ ನರ್ತಿಸಿದ್ದು ಸ್ತುತ್ಯರ್ಹ .

ಆತ್ಮವಿಶ್ವಾಸದಿಂದ ರಂಗವನ್ನು ಪ್ರವೇಶಿಸಿದ ಹನ್ನೆರಡು ವರ್ಷದ ಪುಟ್ಟಕಲಾವಿದೆ ನಿಶಾ ನವೀನ್, ಹಸನ್ಮುಖದಿಂದ ಶುಭಾರಂಭಕ್ಕೆ ‘ಪುಷ್ಪಾಂಜಲಿ’ಯನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದಳು. ಸಪೂರ ಮೈಕಟ್ಟು, ಲೀಲಾಜಾಲವಾಗಿ ಬಾಗಿ ಬಳುಕುತ್ತಿದ್ದ ಎಳೆಯ ಶರೀರ ಅವಳ ಅಂಗಶುದ್ಧಿಯ ನರ್ತನದ ಸೌಂದರ್ಯವನ್ನು ಎತ್ತಿ ಹಿಡಿಯಿತು. ಪ್ರಥಮ ವಂದಿತ ವಿಘ್ನನಿವಾರಕ ಗಣೇಶನಿಗೆ ಸಂಪ್ರದಾಯದಂತೆ ‘ನೃತ್ಯನೈವೇದ್ಯ’ ಅರ್ಪಿಸಿದಳು. ನಿಶಾ, ತನ್ನ ನೃತ್ತ ನಾವೀನ್ಯದಿಂದ ಮುದ ನೀಡಿದಳು. ಗಣಪನ ವಿವಿಧ ಭಂಗಿಗಳು ಸೊಗಯಿಸಿದವು.

ಶುದ್ಧ ನೃತ್ತದ ಕೃತಿ ‘ಜತಿಸ್ವರಂ’- ನೃತ್ಯ ಕಲಾವಿದರ ಮೂಲಭೂತ ನೃತ್ಯ ವ್ಯಾಕರಣದ ಆಯಾಮಗಳ ತಿಳಿವಳಿಕೆ ಮತ್ತು ಪರಿಶ್ರಮವನ್ನು ಬಿಂಬಿಸುವ ನೃತ್ತ ಪರಿಣತಿಯ ಕೈಗನ್ನಡಿ. ‘ಮಾರ್ಗಂ’- ಸಂಪ್ರದಾಯದ ವಿನ್ಯಾಸದಲ್ಲಿನ ಎಲ್ಲ ಕೃತಿಗಳಲ್ಲೂ ಕಾಣಸಿಗುವ ನೃತ್ತಗಳ ನೇಯ್ಗೆ, ವಿವಿಧ ಬಗೆಗಳನ್ನು ಕಲಾವಿದರು ಕರಗತ ಮಾಡಿಕೊಂಡಿದ್ದಕ್ಕೆ ಸಾಕ್ಷಿಗೊಡುವ ಈ ‘ಜತಿಸ್ವರ’ ನಿರೂಪಣೆಯಲ್ಲಿ ಯಶಸ್ವಿಯಾದರೆ ಮುಂದಿನ ಕೃತಿಗಳ ಸಾಕಾರ ಫಲಪ್ರದ ಮತ್ತು ಅಷ್ಟೇ ಸಲೀಸು.

ನಿಶಾ ನೃತ್ತಗಳನ್ನು ಸಮರ್ಪಕವಾಗಿ ನಿರ್ವಹಿಸಿದ ಪರಿ, ನಾವೀನ್ಯ ಹಾಗೂ ಬೆಡಗು ತುಂಬಿದ್ದ ಜತಿಗಳು, ಸ್ವರಗಳ ಮಾಧುರ್ಯದ ಆವರ್ತನದಲ್ಲಿ ಮೆಚ್ಚುಗೆ ಪಡೆದವು. ಅವಳ ಅಂಗಶುದ್ಧಿಯ ಅಚ್ಚುಕಟ್ಟಾದ ನರ್ತನ ವೈಶಿಷ್ಟ್ಯಪೂರ್ಣವಾಗಿ ಸೆಳೆದರೆ, ನೃತ್ತಗಳಲ್ಲೇ ಭಂಗಿಗಳನ್ನು ರಚಿಸಿದ ಬಗೆ ವಿಶೇಷವಾಗಿತ್ತು. ನಾಟ್ಯದ ಎಲ್ಲ ಆಯಾಮಗಳನ್ನೂ ಸಮಗ್ರ ದರ್ಶನ ಮಾಡಿಸಿದ ಕ್ರೌಢೀಕೃತ ಜತಿಗಳ ಗುಚ್ಛ ಮನಕಾನಂದ ನೀಡಿತು.

ಶ್ರೀ ಮುತ್ತುಸ್ವಾಮಿ ದೀಕ್ಷಿತರ ‘ಅಖಿಲಾಂಡೇಶ್ವರಿ ರಕ್ಷಮಾಂ’ ದೇವೀ ಕೀರ್ತನೆಯನ್ನು ಭಕ್ತಿ ತಾದಾತ್ಮ್ಯದಿಂದ ಸಾಕ್ಷಾತ್ಕಾರಗೊಳಿಸಿದಳು ಕಲಾವಿದೆ. ಬಾಲಸುಬ್ರಮಣ್ಯ ಶರ್ಮ ಅವರ ಭಾವಪೂರ್ಣ ಗಾಯನದ ಮಾರ್ದವತೆ, ನರ್ತನಲಾಸ್ಯದಲ್ಲಿ ಪ್ರತಿಧ್ವನಿಸಿತು. ಯಾವುದೇ ಆರ್ಭಟವಿಲ್ಲದ ಸೌಮ್ಯ ನೃತ್ತಗಳು ಹೃದಯಸ್ಪರ್ಶಿಯಾಗಿದ್ದವು. ಅನನ್ಯ ಭಕ್ತಿಯ ಈ ಸಮರ್ಪಣೆ ದೇವಿಗರ್ಪಿಸಿದ ಏಕಾಂತ ಸೇವೆಯಂತೆ ಭಾಸವಾಯಿತು.

ಆನಂತರ-ನೃತ್ಯ ಪ್ರಸ್ತುತಿಯ ಹೃದಯ ಭಾಗ ಅಷ್ಟೇ ಹೃದ್ಯವೂ ಆದ ಘಟ್ಟ ‘ವರ್ಣಂ’. ಬಹು ಸಂಕೀರ್ಣ ಮತ್ತು ದೀರ್ಘ ಬಂಧದ ಪ್ರಸ್ತುತಿ, ಕಲಾವಿದೆಯ ತಾಳ-ಲಯಜ್ಞಾನ ಮತ್ತು ನೆನಪಿನ ಶಕ್ತಿಗೆ ಹಾಗೂ ನೃತ್ಯ ಸಾಮರ್ಥ್ಯಕ್ಕೆ ಸವಾಲೊಡ್ಡುವಂಥದ್ದು. ಜೊತೆ ಜೊತೆಯಲ್ಲಿ ಅಭಿನಯ ಪ್ರಭುತ್ವವನ್ನೂ ನಿರೀಕ್ಷಿಸುವಂಥದ್ದು.

ಕಲಾವಿದೆ ನಿಶಾ ಪ್ರಸ್ತುತಪಡಿಸಿದ ವೀಣೆ ಶೇಷಯ್ಯರ್ ರಚಿಸಿದ ಪದವರ್ಣ ‘ದೇವಾದಿ ದೇವ ನಟರಾಜ’ನನ್ನು ಸ್ತುತಿಸುವ ಕೃತಿ, ಹಲವು ಸಂಚಾರಿ ಕಥಾನಕಗಳು ನಾಟಕೀಯ ಆಯಾಮದಿಂದ ಕಂಗೊಳಿಸಿದವು. ಚಿದಂಬರದ ದೇವಾಲಯಕ್ಕೆ ನಟರಾಜನ ದರ್ಶನಕ್ಕೆ ಹಾತೊರೆದು ಬರುವ ಭಕ್ತೆಯ ಹಂಬಲ-ಅನನ್ಯ ಭಕ್ತಿ ಸಮರ್ಪಣೆ ಆನಂದ ನೀಡಿತು. ನೃತ್ತಾವಳಿಗಳಲ್ಲಿ ನಾಟ್ಯಪ್ರಿಯ ನಟರಾಜನಿಗೂ ನೃತ್ತಾವೃತ ನರ್ತನಕ್ಕೂ ಅವಿನಾಭಾವ ಸಂಬಂಧವೆಂಬಂತೆ, ಶಿವನನ್ನು ನಿಶಾ ನೃತ್ಯಾರ್ಚನೆಯಲ್ಲಿ ಸಾಕ್ಷಾತ್ಕರಿಸಿದಳು.

ಮುಂದೆ, ಶ್ರೀಮನ್ನಾರಾಯಣನ ರೂಪ-ಶಕ್ತಿ-ಮಹಿಮೆಗಳನ್ನು ಬಗೆಬಗೆಯಾಗಿ ವರ್ಣಿಸಿ, ಕೊಂಡಾಡುವ ಭಕ್ತೆ, ಕಡೆಯಲ್ಲಿ ಆತನಿಗೆ ಶರಣಾಗುವ ಈ ಭಕ್ತಿಪ್ರಧಾನ ಕೃತಿ, ಮನೋಹರವಾಗಿ ಪ್ರಸ್ತುತಿಗೊಂಡಿತು. ದಶಾವತಾರದ ನೋಟ ಬಹು ಸಂಕ್ಷಿಪ್ತವಾಗಿ ಸಾಗಿ ಪರಿಣಾಮ ಬೀರಿತು. ಆನಂತರ- ಮುರುಗನ ರೂಪಾತಿಶಯ, ಮಹಿಮಾಪೂರ್ಣ ವ್ಯಕ್ತಿತ್ವವನ್ನು, ತನ್ನ ದ್ರವೀಕೃತ ಸುಮನೋಹರ ಚಲನೆಗಳಿಂದ, ಕಮನೀಯ ಭಂಗಿಗಳಿಂದ ಕಣ್ಮುಂದೆ ಸುಂದರವಾಗಿ ಕಂಡರಿಸಿದಳು.

ನಟರಾಜನ ಅದ್ಭುತ ವ್ಯಕ್ತಿತ್ವವನ್ನು ಕಟ್ಟಿಕೊಡುವ ದಯಾನಂದ ಸರಸ್ವತಿ ಅವರ ಜನಪ್ರಿಯ ರಚನೆ ‘ಭೋ ಶಂಭೋ ಶಿವ ಶಂಭೋ ಸ್ವಯಂಭೋ’ ನಿಶಾಳ ಮಿಂಚಿನ ಸಂಚಾರದ ಹೆಜ್ಜೆ-ಗೆಜ್ಜೆಗಳ ಶುದ್ಧ ನೃತ್ತ ಸಂಚಾರ-ಚಲನೆಗಳಲ್ಲಿ ಅದ್ಭುತವಾಗಿ ಮೂಡಿಬಂತು. ನಾಟ್ಯಾಧಿಪತಿಯ ಆನಂದತಾಂಡವದ ರೋಮಾಂಚಕ ಪ್ರಸ್ತುತಿಯು, ಆಕೆಯ ಮಂಡಿ ಅಡವು, ಆಕಾಶಚಾರಿಗಳ ಮೋಡಿಯಲ್ಲಿ, ಉತ್ತಮ ನಿಯಂತ್ರಣದ ಶಕ್ತ ಯೋಗಭಂಗಿಗಳ ಪ್ರದರ್ಶನಗಳಲ್ಲಿ ಯಶಸ್ವಿಯಾಯಿತು. ‘ಮಂಗಳ’ದೊಡನೆ ನೃತ್ಯ ಪ್ರಸ್ತುತಿ ಸಂಪನ್ನಗೊಂಡಿತು. ಅಚ್ಚುಕಟ್ಟಾದ ನರ್ತನವನ್ನು ಶಾಸ್ತ್ರೀಯ ಚೌಕಟ್ಟಿನೊಳಗೆ ಸೊಗಸಾಗಿನಿರೂಪಿಸಿದ ನಿಶಾ, ತಾನೊಬ್ಬ ಭರವಸೆಯ ಕಲಾವಿದೆಯೆಂಬುದನ್ನು ಸಾಬೀತುಗೊಳಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT