ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ವಾಗ್ಗೇಯ ಪರಂಪರೆ

Last Updated 1 ಮೇ 2021, 19:30 IST
ಅಕ್ಷರ ಗಾತ್ರ

ತಮಿಳುನಾಡಿನ ಹಲವು ವಾಗ್ಗೇಯಕಾರರು ನಮಗೆ ಗೊತ್ತು. ಆದರೆ, ಅದೇ ತಲೆಮಾರಿನ ನಮ್ಮ ನಾಡಿನ ಎಷ್ಟೋ ವಾಗ್ಗೇಯಕಾರರ ಹೆಸರೂ ಗೊತ್ತಿಲ್ಲ. ಅವರ ರಚನೆಗಳ ಪರಿಚಯವೂ ಇಲ್ಲ. ಯಾಕೆ ಹೀಗೆ ಎಂಬ ಪ್ರಶ್ನೆ ಈ ಗಾಯಕರನ್ನು ಕಾಡಿದಾಗ ಉತ್ತರವಾಗಿ ಆರಂಭವಾಗಿದ್ದೇ ಕರ್ನಾಟ ವಾಗ್ಗೇಯ ಮಂಜರಿ

ಕರ್ನಾಟಕ ಸಂಗೀತ ಪ್ರಕಾರವು ಭಾರತೀಯ ಸಂಗೀತ ಎಂಬ ಪ್ರಾಚೀನ ಪರಂಪರೆಯಿಂದ ಬೇರ್ಪಡೆಯಾಗಿ ಸ್ವತಂತ್ರ ರೂಪ ಪಡೆದುಕೊಂಡು ಪ್ರಸಿದ್ಧಿಗೆ ಬಂದದ್ದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಪರ್ಷಿಯನ್‌ ಹಾಗೂ ಮೊಘಲರ ಆಕ್ರಮಣದ ನಂತರ ಅವರ ಸಂಗೀತದ ಪ್ರಭಾವ ಹೆಚ್ಚಾಗಿ ಉತ್ತರಾದಿ ಅಥವಾ ಹಿಂದೂಸ್ಥಾನಿ ಸಂಗೀತ ಪ್ರಕಾರವಾಗಿ ಹೇಗೆ ಬೆಳೆಯಿತೋ, ಅಂತೆಯೇ ದಕ್ಷಿಣದಲ್ಲಿ ಆ ಅಖಂಡ ಭಾರತೀಯ ಸಂಗೀತವು ಕರ್ನಾಟಕ ಸಂಗೀತವಾಗಿ ಪುರಂದರದಾಸರ ಕಾಲದಿಂದ ಈಚೆಗೆ ಒಂದು ಸ್ವರೂಪ ಪಡೆದುಕೊಂಡಿರಬೇಕು. ಶಾಸ್ತ್ರಗ್ರಂಥಗಳಲ್ಲಿ ಬಹಳ ಹಿಂದಿನಿಂದಲೂ ‘ಕರ್ನಾಟಕ ಸಂಗೀತ’ ಎಂಬ ಪದಬಳಕೆಯಿದ್ದರೂ ಅದು ಅಭ್ಯಾಸ-ರೂಢಿಕ್ರಮದಲ್ಲಿ ಉಪಯೋಗಕ್ಕೆ ಪ್ರಾಯಶಃ ಈ ಸಮಯದಲ್ಲಿಯೇ ಬಂದಿರಬೇಕು.

ಆಗ ಈ ಸಂಗೀತವನ್ನು ಬೆಳೆಸಿದವರಲ್ಲಿ ಪ್ರಮುಖರಾದ ಪುರಂದರದಾಸರು ‘ಕರ್ನಾಟಕ ಸಂಗೀತ ಪಿತಾಮಹ’ ಎಂದೇ ಹೆಸರಾದರು. ಅವರು ಲಕ್ಷಾಂತರ ರಚನೆಗಳನ್ನು ಮಾಡಿದ್ದರೆಂದೂ, ನಮ್ಮ ಸಂಗೀತದ ಕಲಿಕಾ ಪಾಠ, ಸೂಳಾದಿ ಸಪ್ತ ತಾಳಗಳ ಬಳಕೆಯ ರಚನೆಗಳನ್ನು ಮಾಡಿದ್ದರೆಂದೂ ತಿಳಿದಿದೆ. ಅವರ ವಾಗ್ಗೇಯತ್ವದಲ್ಲಿ ಮೂಡಿದ ನಾಲ್ಕುಮುಕ್ಕಾಲು ಲಕ್ಷ ರಚನೆಗಳಲ್ಲಿ ಕೇವಲ ಏಳುನೂರು ರಚನೆಗಳಷ್ಟು ಮಾತ್ರ ದೊರಕಿವೆ. ಮಿಕ್ಕವು ಕಾಲಕ್ರಮೇಣ ನಾಶವಾಗಿವೆ.

ಈ ಪ್ರಕಾರದಲ್ಲಿ ಇಂದಿಗೂ ಬಳಕೆಯಲ್ಲಿರುವ ಅಣ್ಣಮಾಚಾರ್ಯರ ರಚನೆಗಳು, ನಾರಾಯಣ ತೀರ್ಥರ ತರಂಗಗಳು, ಭದ್ರಾಚಲ ರಾಮದಾಸರ ಹಾಡುಗಳು, ದಾಸಪರಂಪರೆಯಲ್ಲಿ ಕನಕದಾಸರಾದಿಯಾಗಿ ಎಷ್ಟೋ ರಚನೆಗಳು ಕೇವಲ ಕರ್ಣಪರಂಪರೆಯಲ್ಲಿಯೇ ಇದ್ದು, ಇಂತಹ ಇನ್ನೂ ಎಷ್ಟೋ ರಚನೆಗಳು ಲಭ್ಯವಿಲ್ಲದಾಗಿವೆ. ಆಗಿನ ರಾಜಾಶ್ರಯಗಳಲ್ಲಿದ್ದ ಸಂಗೀತಗಾರರ, ಬೇರೆ ಬೇರೆ ವಾಗ್ಗೇಯಕಾರರಲ್ಲಿ ಮೂಡಿರುವ ಕೃತಿಗಳೂ ಅಷ್ಟೇ. ವಿಪರ್ಯಾಸವೆಂದರೆ ಇಂತಹ ಕೃತಿಗಳನ್ನು ಇಂದಿನಂತೆ ಬರೆದು ಸಂರಕ್ಷಿಸಿಲ್ಲ. ಇದು ದೂಷಣೆಯಲ್ಲ, ಆಗತಾನೇ ಟಿಸಿಲೊಡೆದು ಮೂಡುತ್ತಿದ್ದ ಪ್ರಕಾರದ ಮಜಲುಗಳು ಜನಕ್ಕೆ ತಲುಪಲೇ ಒಂದೆರಡು ತಲೆಮಾರುಗಳು ಹಿಡಿದಿರಬಹುದು. ಸುಮಾರು 18ನೆಯ ಶತಮಾನದ ಹೊತ್ತಿಗೆ ಕೃತಿಗಳನ್ನು ಬರೆದಿಡುವ ಸಂಪ್ರದಾಯ ಹುಟ್ಟಿದ್ದು ಎನ್ನಬಹುದು.

ಮೈಸೂರು ಅರಮನೆಯಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿಯ ಅಪರೂಪದ ನೋಟ
ಮೈಸೂರು ಅರಮನೆಯಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿಯ ಅಪರೂಪದ ನೋಟ

ವಾಗ್ಗೇಯ ರಚನೆಗಳನ್ನು ಬರೆದಿಡುವ ಅಭ್ಯಾಸವು ಕರ್ನಾಟಕ ಸಂಗೀತ ಪರಂಪರೆ ಹೆಮ್ಮರವಾಗಿ ಬೆಳೆಯಲು ಅನುವು ಮಾಡಿಕೊಟ್ಟಿತು. ಲಕ್ಷ್ಯ-ಲಕ್ಷಣಗಳು, ಶಾಸ್ತ್ರಗ್ರಂಥಗಳನ್ನಾಧರಿಸಿ, ಆ ಅಂಶಗಳನ್ನೆಲ್ಲಾ ಒಳಗೊಂಡಂತೆ ಮಾಡಿದ ರಚನೆಗಳು ಜನಕ್ಕೆ ಹಾಡಲು ಆಸರೆಯಾದರೆ, ಅವುಗಳಲ್ಲಿ ಅಡಗಿದ್ದ ರಾಗಭಾವ ಹಾಗೂ ಶಾಸ್ತ್ರಾಧಾರಿತ ವಿಷಯಗಳು ಸಂಗೀತಶಾಸ್ತ್ರ ಜ್ಞಾನದ ಹಾಗೂ ಮನೋಧರ್ಮ ಸಂಗೀತದ ಬೆಳವಣಿಗೆಗೆ ಪುಷ್ಟಿ ನೀಡಿದವು. ಹಾಗಾಗಿ ಕಲ್ಪಿತ ಸಂಗೀತವು ಕಲ್ಪನಾಸಂಗೀತ ಚೆನ್ನಾಗಿ ಬೆಳೆಯಲು ಸಹಕಾರಿಯಾಗಿದ್ದರಲ್ಲಿ ಅನುಮಾನವಿಲ್ಲ. ಸಂಗೀತ ವಿದ್ಯಾರ್ಥಿಯ ಸ್ಪಷ್ಟ ಗಮನಕ್ಕೆ ಬಾರದಿದ್ದರೂ ಶಾಸ್ತ್ರ ಹಾಗೂ ಪ್ರಯೋಗ ಎರಡರ ಜ್ಞಾನವೂ ಅರಿವಿಗೆ ಬರುವಂತಹ, ಜೊತೆಗೆ ದೇವತಾಸ್ತುತಿಯೂ ಆಗುವಂತಹ ರಚನೆಗಳೇ ಈ ಕರ್ನಾಟಕ ಸಂಗೀತ ಪ್ರಕಾರದಲ್ಲಿ ಹೆಚ್ಚಾಗಿ ಕಾಣುವುದು. ಪುರಂದರದಾಸರು, ಕನಕದಾಸರು ಇವರೇ ಮೊದಲಾಗಿ ಮಾಡಿರುವ ರಚನೆಗಳಲ್ಲಿ ಸಾಹಿತ್ಯವು ದೇವತಾಸ್ತುತಿಯಷ್ಟೇ ಆಗಿರದೆ ಅವುಗಳಲ್ಲಿ ಸಮಾಜ ಸುಧಾರಣೆ, ಕ್ಷೇತ್ರದರ್ಶನ, ನೀತಿಪಾಠ, ಪುರಾಣಕಥನ, ಹೀಗೆ ಹತ್ತು ಹಲವಾರು ವಿಷಯಗಳ ಸುತ್ತ ಇರುವುದನ್ನು ಕಾಣುತ್ತೇವೆ. ವಾಗ್ಗೇಯತ್ವವು ವಾಕ್ (ಸಾಹಿತ್ಯ) ಮತ್ತು ಗೇಯ (ಸಂಗೀತ) ಎಂಬ ಎರಡು ಬೃಹತ್ ವಿಷಯಗಳ ಸಮ್ಮಿಲನದ ಅಸಾಮಾನ್ಯ ಕಲೆ. ಹಾಗಾಗಿ ವಾಗ್ಗೇಯಕಾರರುಗಳಿಗೆ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ವಿಶೇಷ, ಪೂಜ್ಯ ಸ್ಥಾನಮಾನ.

ವೀಣೆ ಶೇಷಣ್ಣ
ವೀಣೆ ಶೇಷಣ್ಣ

ಹದಿನೈದು ಹದಿನಾರನೆಯ ಶತಮಾನದ ವಾಗ್ಗೇಯ ರಚನೆಗಳಲ್ಲಿ ಎಷ್ಟೋ ರಚನೆಗಳು ಕೈತಪ್ಪಿ ಹೋಗಿವೆ. ಅದಕ್ಕೂ ಹಿಂದಿನವು ಕೇವಲ ಶಾಸ್ತ್ರ ಅಥವಾ ಪದ್ಯರೂಪದಲ್ಲಿವೆ. ಲಭ್ಯವಿರುವಷ್ಟು ರಚನೆಗಳಲ್ಲಿ ವಾಕ್ ಮತ್ತು ಗೇಯಗಳಲ್ಲಿ ವಾಕ್ ಭಾಗವು ರಚನೆಕಾರರದ್ದೇ ಆಗಿದ್ದರೂ ಗೇಯ ಭಾಗವು ಆ ವಾಗ್ಗೇಯಕಾರರದ್ದು ಹೌದೇ ಅಲ್ಲವೇ ಎಂಬ ಸಂಶಯವಿದೆ. ಸಂಪ್ರದಾಯದಲ್ಲಿ ಬಂದ ಹತ್ತು ಹಲವು ಹಾಡುಗಳಲ್ಲಿ ರಚನೆಕಾರ ಗೇಯವಿದ್ದಿರಬಹುದು. ಆದರೆ, ಹೌದು ಎಂದು ಸ್ಥಾಪಿಸುವ ಯಾವ ಆಧಾರಗಳೂ ಇಲ್ಲ. ಹಾಗಾಗಿ ಇಂದು ದಾಸರ ರಚನೆಗಳಿಗೆ, ಅಣ್ಣಮಾಚಾರ್ಯರ ರಚನೆಗಳಿಗೆಲ್ಲ ಯಾರು ಬೇಕಾದರೂ ರಾಗ ಸಂಯೋಜನೆಗಳನ್ನು ಮಾಡಿ ಹಾಡುವ ರೂಢಿಯಿದೆ. ಅಂದರೆ ಗೇಯತ್ವ ಅಧಿಕಾರ ಗಾಯಕನ ಕೈಯಲ್ಲಿದೆ. ಸಾಂಪ್ರದಾಯಿಕ ಗೇಯಗಳನ್ನು ಕೇಳಿದಾಗಲೂ ನಮಗೆ ಆ ಕಾಲದ ಸಂಗೀತದ ಬಗ್ಗೆ ಒಂದು ಸ್ಥೂಲ ಚಿತ್ರಣ ಸಿಗಬಹುದಷ್ಟೇ ವಿನಾ ಅದರ ಸಂಪೂರ್ಣ ಚಿತ್ರಣ ತಿಳಿಯುವುದಿಲ್ಲ.

ಸೂಳಾದಿಗಳನ್ನು ಗಮನಿಸಿದಾಗ ತಾಳದ ಅಥವಾ ಲಯಜ್ಞಾನದ ಬಿಗಿಸಾಧನೆ ಇದ್ದಿರಬಹುದು ಎಂದು ಅರಿಯಬಹುದು. ಆದರೆ ಸೂಳಾದಿಗಳು ಸಂಗೀತದಲ್ಲಿ ಹೆಚ್ಚಾಗಿ ಪ್ರಯೋಗದಲ್ಲಿಲ್ಲ; ಭಜನ ಸಂಪ್ರದಾಯದಲ್ಲಿ ಸಂಗೀತಕ್ಕೆ ಮಹತ್ವ ಇಲ್ಲದ ರೀತಿ ಪ್ರಯೋಗದಲ್ಲಿವೆ, ಇಲ್ಲವಾದರೆ ಪ್ರಾತ್ಯಕ್ಷಿಕೆಗಳಲ್ಲಿವೆ ಅಷ್ಟೇ. ಇನ್ನೂ ಪೂರ್ವದಲ್ಲಿ ಹಾಡುತ್ತಿದ್ದ ಜಯದೇವನ ಗೀತಗೋವಿಂದದಂತಹ ಕಾವ್ಯಗಳಲ್ಲಿ ಸಹ ಸಂಗೀತ ಇತ್ತೇ ಇಲ್ಲವೇ ಎಂಬುದು ತಿಳಿಯದ ಸಮಾಚಾರ. ಕ್ಷೇತ್ರಜ್ಞರ ಪದಗಳಲ್ಲಿ ಸಂಗೀತವು ರಚನೆಕಾರರದ್ದೇ ಎಂಬ ಅಭಿಪ್ರಾಯವಿದೆ. ಹಾಗಿದ್ದ ಪಕ್ಷದಲ್ಲಿ ಇದು ನಮಗೆ ದೊರೆತಿರುವ ಅತ್ಯಂತ ಹಳೆಯ ವಾಗ್ಗೇಯ ರಚನೆ ಎನ್ನಬಹುದು.

ಪುರಂದರದಾಸರು, ಕನಕದಾಸರು, ತ್ಯಾಗರಾಜರು
ಪುರಂದರದಾಸರು, ಕನಕದಾಸರು, ತ್ಯಾಗರಾಜರು

ಮುಂದೆ, ಹದಿನೆಂಟನೆಯ ಶತಮಾನದಷ್ಟರ ಹೊತ್ತಿಗೆ ವಿಶೇಷವಾಗಿ ಬೆಳೆದ ಈ ವಾಗ್ಗೇಯ ಪರಂಪರೆ ಮರಾಠರ ಆಳ್ವಿಕೆಯಲ್ಲಿ ಒಂದು ನವೋದಯ ಪರ್ವ ಕಂಡಿತು. ಆ ಸಮಯದಲ್ಲಿ ವಾಗ್ಗೇಯ ತ್ರಿಮೂರ್ತಿಗಳಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿಗಳ ರಚನೆಗಳು ಅತಿ ಹೆಚ್ಚು ಪ್ರಭಾವ ಬೀರಿ, ಈ ಪರ್ವಕ್ಕೆ ನಾಂದಿಯಾದವು. ಇಂದಿನ ಕರ್ನಾಟಕ ಸಂಗೀತ ಪ್ರಕಾರದ ಸ್ವರೂಪ ಬರುವಲ್ಲಿ ಇವುಗಳು ಬಹುಮುಖ್ಯ ಪಾತ್ರ ಹೊಂದಿವೆ. ಅದೇ ಸಮಯದಲ್ಲಿ ಕೇರಳದಲ್ಲಿ ಕೂಡಾ ತಿರುವಾಂಕೂರು ಸಂಸ್ಥಾನದ ಸ್ವಾತಿ ತಿರುನಾಳರ, ತಮಿಳುನಾಡಿನಲ್ಲೂ ಹಲವಾರು ವಾಗ್ಗೇಯಕಾರರ, ಆಂಧ್ರದಲ್ಲೂ ಹಲವರ ರಚನೆಗಳು ದೊರೆತಿವೆ. ಸ್ಥೂಲವಾಗಿ ದಕ್ಷಿಣಭಾರತದ ಹಲವಾರು ಭಾಗಗಳಲ್ಲಿ ದೊರೆತಿವೆ ಎನ್ನಬಹುದು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಈ ಪ್ರಕಾರವನ್ನು ದಕ್ಷಿಣಾದಿ ಸಂಗೀತ ಎನ್ನುವ ರೂಢಿಯೂ ಇದೆ. ಇವುಗಳ ಸಂಗೀತಭಾಗವೂ ಹೆಚ್ಚಿನಂಶ ವಾಗ್ಗೇಯಕಾರರದ್ದೇ ಆಗಿದೆ. ಇವುಗಳಲ್ಲಿ ಹಲವು ಹೆಸರುವಾಸಿಯಾಗಿವೆ, ಹಲವು ಆಗಿಲ್ಲ. ಆದರೆ ಈ ಕಾಲದ ನಂತರ ಬಹುಪಾಲು ವಾಗ್ಗೇಯಕಾರರು ರಚನೆಗಳನ್ನು ಲಿಖಿತ ರೂಪದಲ್ಲೋ ಮುದ್ರಿಸಿಯೋ ಉಳಿಸಿ ಮುಂದಿನ ಪೀಳಿಗೆಗಳಿಗೆ ತಲುಪಿಸಿದ್ದಾರೆ.

ಹಾಗೆ ಬಂದ ಈ ಪರಂಪರೆಯಲ್ಲಿ ಮುಂದುವರೆದು ಅನೇಕರು ರಚನೆಗಳನ್ನು ಮಾಡಲು ಉಪಕ್ರಮಿಸಿ ಇಂದು ಬಹಳಷ್ಟು ಜನ ರಚನೆಕಾರರು ಇದ್ದಾರೆ. ಅಂಥವರ ರಚನೆಗಳು ಅತ್ಯಂತ ಸುಂದರವಾಗಿಯೂ ಪರಂಪರಾನುಗತವಾದ ಶಾಸ್ತ್ರಬದ್ಧತೆಯುಳ್ಳವಾಗಿಯೂ ಇರುವುದನ್ನು ಕಾಣುತ್ತೇವೆ.

ಈ ಪರಂಪರೆಯು ರೂಪುಗೊಂಡದ್ದು ವಿಜಯನಗರದಲ್ಲಿ ಎಂಬ ಅಭಿಪ್ರಾಯವಿದ್ದರೂ, ಅದಕ್ಕೆ ಪೋಷಣೆ ಸಿಕ್ಕಿ ಹೆಮ್ಮರವಾಗಿದ್ದು ಕಾವೇರಿ ತೀರದ ಭಾಗಗಳಾದ ಕರ್ನಾಟಕ-ತಮಿಳುನಾಡಿನಲ್ಲಿ. ಅದರಲ್ಲೂ ತಮಿಳುನಾಡಿನಲ್ಲಿ ಸಂಗೀತ ತ್ರಿಮೂರ್ತಿಗಳ ಶಿಷ್ಯಪರಂಪರೆಗಳು ಆ ವೈಭವವನ್ನು ಇಂದಿಗೂ ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುತ್ತಿರುವುದು ವಿದಿತ. ಹಾಗಾಗಿ ಅವರ ಶಿಷ್ಯಪರಂಪರೆಗಳಲ್ಲಿ ಮೂಡಿಬಂದ ವಾಗ್ಗೇಯ ರಚನೆಗಳೂ ಪ್ರಸಿದ್ಧಿಗೆ ಬಂದಿವೆ. ಆದರೆ ಕರ್ನಾಟಕ- ತೆಲುಗು ಪ್ರಾಂತ್ಯಗಳು ಹಾಗೂ ಕೇರಳದಲ್ಲಿ ಮುಂದುವರೆದ ಈ ವಾಗ್ಗೇಯ ವೈಭವವು ತಮಿಳುನಾಡಿನವಷ್ಟು ಪ್ರಸಿದ್ಧಿಗೆ ಬರಲಾಗಿಲ್ಲ. ಪ್ರಾಯಶಃ ತಮಿಳುನಾಡಿನ ಸಂಗೀತಗಾರರು ಆ ಕಾಲದಲ್ಲಿ ಆಯಾ ಗುರುಪರಂಪರೆಗಳ ವಾಗ್ಗೇಯಕಾರರ ರಚನೆಗಳನ್ನು ಎಲ್ಲೆಡೆ ಹಾಡಿ ಪ್ರಸಿದ್ಧಿಗೆ ಯಶಸ್ವಿಯಾಗಿ ತಂದು, ಮಿಕ್ಕ ಸಂಗೀತಗಾರರನ್ನೂ ಪ್ರಭಾವಿತರನ್ನಾಗಿ ಮಾಡಿರುವುದು ಇದಕ್ಕೆ ಕಾರಣವಿದ್ದರೂ ಇರಬಹುದು.

ಬೇರೆ ಪ್ರಾಂತ್ಯಗಳಲ್ಲಿದ್ದ ವಾಗ್ಗೇಯಕಾರರ ಎಷ್ಟೋ ಅಪೂರ್ವ ಕೃತಿಗಳು ಪ್ರಸಿದ್ಧಿಗೆ ಬಾರದೆ ನೇಪಥ್ಯಕ್ಕೆ ಸರಿಯುತ್ತಿವೆ. ಕರ್ನಾಟಕದ ಹಲವಾರು ವಾಗ್ಗೇಯಕಾರರ ರಚನೆಗಳು ಸಂಪೂರ್ಣ ವಾಗ್ಗೇಯ ಶಾಸ್ತ್ರಬದ್ಧವಾಗಿಯೂ ಸುಂದರವಾಗಿಯೂ ಇದ್ದರೂ ಹಾಡದಂತಹ ಪರಿಸ್ಥಿತಿಯನ್ನು ನಮಗೆ ನಾವೇ ತಂದುಕೊಂಡುಬಿಟ್ಟಿದ್ದೇವೆ. ಇದನ್ನು ನಾವು ಜನಪ್ರಿಯ ಮಾಡುವ ಗೋಜಿಗೆ ಹೋಗದೆ ಈಗಾಗಲೇ ಜನಪ್ರಿಯವಾದವುಗಳನ್ನೇ ಹಾಡುತ್ತಿದ್ದೇವೆ. ನಮ್ಮ ಎಷ್ಟೋ ವಾಗ್ಗೇಯಕಾರರ ಹೆಸರೂ ತಿಳಿಯದಂತಹ ಪರಿಸ್ಥಿತಿಗೆ ಬಂದುಬಿಟ್ಟಿರುವುದು ವಿಷಾದನೀಯ. ಅದೇ ತಲೆಮಾರಿನ ತಮಿಳುನಾಡಿನ ವಾಗ್ಗೇಯಕಾರರು ಗೊತ್ತು, ನಮ್ಮವರದ್ದು ಇಲ್ಲ.

ಈ ಸಮಯದಲ್ಲಿ ಇಂತಹ ವಾಗ್ಗೇಯ ರಚನೆಗಳನ್ನು ಹೆಕ್ಕಿ ತೆಗೆದು, ಅವುಗಳನ್ನು ನಮ್ಮ ಸಂಗೀತಗಾರರ ಮೂಲಕ ಪ್ರಚಾರಕ್ಕೆ ತರಬೇಕಾಗಿರುವುದು ಆದ್ಯ ಕರ್ತವ್ಯ. ನಾವೇ ಇದನ್ನು ಮಾಡದಿದ್ದಲ್ಲಿ ಇನ್ಯಾರೂ ಇದನ್ನು ಮಾಡದೆ ಕಡೆಗೆ ಮತ್ತೆ ನಾವು ಹದಿನಾರನೇ ಶತಮಾನದಂತೆ ರಚನೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ದಿಕ್ಕಿನಲ್ಲಿ ಬೆಂಗಳೂರಿನ ಬಸವೇಶ್ವರನಗರದಲ್ಲಿರುವ ಸಂಗೀತ ಸಂಸ್ಥೆ ನಿಮಿತ್ತ, ‘ಕರ್ಣಾಟ ವಾಗ್ಗೇಯ ಮಂಜರಿ’ ಎಂಬ ವಿಶೇಷ ಆನ್ಲೈನ್ ಸರಣಿ ಪ್ರಾರಂಭಿಸಿದೆ. ಈ ಸರಣಿಯನ್ನು ನಾನೇ ನಿರ್ದೇಶಿಸುತ್ತಿದ್ದು, ಮೊದಲ ಕಂತನ್ನು ವೆಂಕಟನಾರಾಯಣ ಉಡುಪ ಶಾಸ್ತ್ರಿಗಳು ಎಂಬ ವಾಗ್ಗೇಯಕಾರರ ರಚನೆಗಳನ್ನು ಆಧರಿಸಿ ಮಾಡಲಾಗಿದೆ. ಕಲಾಂಬಿಕಾ ಸಹೋದರಿಯರೆಂದು ಪ್ರಸಿದ್ಧರಾಗಿರುವ ವಿದುಷಿಯರಾದ ಅಂಬಿಕಾದತ್ ಹಾಗೂ ಕಲಾಧರಿ ಭವಾನಿಯವರು ಉಡುಪರ ಶಿಷ್ಯಪರಂಪರೆಯಲ್ಲಿದ್ದು, ವಾಗ್ಗೇಯಕಾರರ ನೇರ ಶಿಷ್ಯ, ಹಿರಿಯ ಸಂಗೀತಗಾರ ಡಾ.ಸಿ.ಎ. ಗುರುದತ್‌ ಅವರ ಮಾರ್ಗದರ್ಶನದಲ್ಲಿ ಅನೇಕ ಕೃತಿಗಳನ್ನು ಸಿದ್ಧಪಡಿಸಿದ್ದಾರೆ. ನಮ್ಮ ರಾಜ್ಯದ, ಅನೇಕ ಮುಂಚೂಣಿಯಲ್ಲಿರುವ ಸಂಗೀತಗಾರರು ಇದರಲ್ಲಿ ಭಾಗವಹಿಸಿದ್ದಾರೆ. ವಾರಕ್ಕೊಂದು ಸಂಚಿಕೆಯಂತೆ ಮೂಡುತ್ತಿರುವ ಈ ಸರಣಿ ವೀಕ್ಷಿಸಲು ಯೂಟ್ಯೂಬ್‌ನಲ್ಲಿ ನೋಡಿ:

Nimitta Bengaluru- https://bit.ly/3iljJqC ಅಥವಾ shorturl.at/owzQ4.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT