ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಿ ನುಡಿಸಿದರೆ ಝೇಂಕಾರ

Last Updated 19 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಬಡಾವಣೆಯ ದೂರದ ಮನೆಯೊಂದರಲ್ಲಿ ವಾದ್ಯ ಮೇಳವೊಂದು ಹಾದಿಯಲ್ಲಿ ಹೋಗುವವರ ಮನಸೆಳೆದು ಜೀವನವೇ ಕೂಡಿ ನುಡಿಸುವ ಅನೇಕ ವಾದ್ಯಗಳ ಒಂದು ಮೇಳ ಎಂದು ಸಾರುತ್ತಿದೆ -ಡಬ್ಲ್ಯು.ಎಚ್. ಓಡನ್

ಬೆಂಗಳೂರಿನ ಮಲ್ಲೇಶ್ವರ ಬಡಾವಣೆಯ 15ನೆಯ ತಿರುವಿನ ಮನೆಯೊಂದರಲ್ಲಿ ಆಗಾಗ ಕೇಳಿಸುವ ಸಿತಾರಗಳ ಝೇಂಕಾರ ಇಂಗ್ಲಿಷ್ ಕವಿ ಡಬ್ಲ್ಯು.ಎಚ್. ಓಡನ್ ಅವರ ಕವನದ ಸಾಲುಗಳನ್ನು ನೆನಪಿಸುತ್ತಿತ್ತು. ಜೀವನವೆಂದರೆ ಎಲ್ಲರೂ ಕೂಡಿ ನುಡಿಸುವ ಅನೇಕ ವಾದ್ಯಗಳ ಮೇಳ ಎಂದು ಹೇಳುವ ಕವಿಯ ಕವನಗಳ ಸಾಲುಗಳ ನೈಜ ಅರ್ಥವನ್ನೇ ಈ ಮನೆಯ ಝೇಂಕಾರ ಧ್ವನಿಸುತ್ತಿತ್ತು.

ಆ ಮನೆಯ ಯಜಮಾನ ಅನಂತ ಸತ್ಯ ಸಂಜೀವರಾವ್‌ ಪ್ರಸಿದ್ಧ ಸಿತಾರ ವಾದಕರು. ಅವರ ಮಗಳು, ಅಳಿಯ, ಮೊಮ್ಮಕ್ಕಳು ಎಲ್ಲರೂ ಸಿತಾರವಾದನ ಕಲಾವಿದರು. ಮನೆಯ ವಿಶಾಲ ಕೋಣೆಯಲ್ಲಿ ಅವರೆಲ್ಲ ಸೇರಿ ಸಂಜೀವರಾವ್‌ ಅವರ ಮಾರ್ಗದರ್ಶನದಲ್ಲಿ ಎಲ್ಲರೂ ಸಿತಾರ ನುಡಿಸಿದಾಗ ಮನೆಯ ಸುತ್ತ ಓಡಾಡುವವರು ತುಸುಹೊತ್ತು ಈ ಝೇಂಕಾರದ ಅಲೆಯಲ್ಲಿ ಮುಳುಗಿ ಮುಂದೆ ಸಾಗುತ್ತಿದ್ದರು. ಈ ಝೇಂಕಾರ ನಾದ ಒಂದು ಗಂಟೆಯವರೆಗೂ ನಡೆಯುತ್ತಿತ್ತು. ಮಗ, ಮಗಳು, ಪತ್ನಿ, ಸೊಸೆ, ಅಳಿಯ, ಮೊಮ್ಮಕ್ಕಳು ಎಲ್ಲರೂ ಸಂಗೀತಪ್ರಿಯರೇ. ಮನೆಯ ಕೆಲಸದಲ್ಲಿ ತೊಡಗಿದಾಗ ಎಲ್ಲರೂ ಒಂದಿಲ್ಲ ಒಂದು ರೀತಿಯ ರಾಗಗಳ ಗುಂಗಿನಲ್ಲಿ ಗುನುಗುನಿಸುತ್ತಲೇ ಇರುವವರು. ಕೆಲಸದ ನಿಮಿತ್ತ ಕುಟುಂಬದ ಸದಸ್ಯರು ಈಗ ಬೇರೆ ಬೇರೆ ಊರುಗಳಲ್ಲಿ ನೆಲೆಸಿದ್ದರೂ ಸಿತಾರವಾದನದ ಪರಿಪಾಟವನ್ನು ಯಾರೂ ಬಿಟ್ಟಿಲ್ಲ.

ಇಡೀ ಕುಟುಂಬಕ್ಕೆ ಸಂಗೀತದ ಪ್ರೀತಿ ಮೈಗೂಡಿರುವುದು ಸಂಜೀವರಾವ್‌ ಅವರಿಗೆ ಖುಷಿ ತಂದಿದೆ. ತಮ್ಮಂತೆ ಮನೆ ಮಂದಿಯೂ ಸಿತಾರ ವಾದಕರಾಗಬೇಕು ಎನ್ನುವ ಅವರ ಬಯಕೆಯೂ ಈಡೇರಿದೆ. ಮನೆಯ ಮಂದಿ ಸಿತಾರ ಕಲಿಕೆಯನ್ನು ಆರಂಭಿಸಿದ ದಿನಗಳನ್ನು ಮೆಲುಕುಹಾಕುವ ಅವರು, ‘ಮಗ ಮತ್ತು ಮಗಳಿಗೆ ಸಿತಾರ ವಾದನದ ರುಚಿ ಹಚ್ಚಿಸಿದ್ದು ಒಂದು ಸಾಹಸವೇ ಸರಿ’ ಎನ್ನುತ್ತಾರೆ.

ಮಗನಿಗೆ ಸಿತಾರಕ್ಕಿಂತ ಸರೋದದ ಮೇಲೆ ಬಹಳ ಪ್ರೀತಿ. ಹೀಗಾಗಿ ರಾಜೀವ ತಾರಾನಾಥರ ಹತ್ತಿರ ಸರೋದ ಕಲಿಯಲು ಹೋದ. ತಾರಾನಾಥರ ತರಬೇತಿ ಸ್ವಲ್ಪ ಕಠಿಣವಾದದ್ದರಿಂದ ಮಗನಿಗೆ ಮುಂದುವರಿಸಲಾಗಲಿಲ್ಲ. ಆದರೆ, ತಂತಿವಾದ್ಯದ ಗೀಳು ಬಿಡಲಿಲ್ಲ. ಸ್ವಲ್ಪ ಕಾಲ ತಬಲಾ ವಾದನ ಕಲಿತು ಮುಂದೆ ತಂದೆಯ ಹತ್ತಿರವೇ ಸಿತಾರ ಕಲಿಯಲು ಆರಂಭಿಸಿದರು. ಅವರಿಗೆ ಮೈಸೂರಿನಲ್ಲಿ ಕೆಲಸ.

ಸಂಜೀವರಾವ್‌ ಬೇರೆ ಊರಲ್ಲಿ ಇದ್ದರೂ ವಾಟ್ಸ್‌ ಆ್ಯಪ್, ಮೇಲ್‌ ಮೂಲಕ ರಾಗಗಳ ಧ್ವನಿಮುದ್ರಣ ಕಳಿಸಿ ಕಳಿಸಿ ಮಗನಿಗೆ ಆರಂಭಿಕ ತರಬೇತಿ ನೀಡಿದರು. ಸೊಸೆ ಸಹ ಇವರಿಂದ ಪ್ರಭಾವಿತಳಾಗಿ ಸಿತಾರವಾದನ ಕಲಿತು ಪರೀಕ್ಷೆ ಪಾಸು ಮಾಡಿದರು. ಹೀಗಾಗಿ ಸಂಜೀವರಾವ್‌ ಅವರ ಮಗ–ಸೊಸೆ ಇಬ್ಬರೂ ಸಿತಾರ ವಾದಕರಾದರು. ಮಗಳು ಮನೆಗೆ ಬಂದಾಗ ಮೊಮ್ಮಗಳಿಗೆ ಮಿರಜ್‌ನಿಂದ ಪುಟ್ಟ ಸಿತಾರ ತರಿಸಿಕೊಟ್ಟು ಮೊಮ್ಮಗಳಿಗೆ ಸಿತಾರ ಕಲಿಸಿದರು. ಮಗಳು ಸಿತಾರ ನುಡಿಸುವುದನ್ನು ನೋಡಿ ಪ್ರೇರಿತಳಾಗಿ ಸಂಜೀವರಾವ್‌ ಅವರ ಮಗಳು ತಾವೂ ಸಿತಾರ ಕಲಿಯತೊಡಗಿದರು. ‘ಇದು ಮೊಮ್ಮಗಳಿಂದ ಮಗಳಿಗೆ ದೊರೆತ ಪ್ರೇರಣೆ’ ಎಂದು ಸಂಜೀವರಾವ್‌ ಹೇಳುತ್ತಾರೆ. ತಾಯಿ ಮಗಳು ಇಬ್ಬರೂ ಸಿತಾರವಾದನದಲ್ಲಿ ಸಂಗೀತ ವಿಶಾರದ ಪರೀಕ್ಷೆಗೆ ಕೂಡುವವರಿದ್ದಾರೆ.

ತಮ್ಮ ಇಡೀ ಕುಟುಂಬವನ್ನು ಸಿತಾರಗಳ ಝೇಂಕಾರದಲ್ಲಿ ಮುಳುಗಿಸಿದ ಸಂಜೀವರಾವ್‌ ಅವರ ಬಗ್ಗೆ ಹೇಳಲೇಬೇಕು. ಅವರು ವೃತ್ತಿಯಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಆಗಿದ್ದರು. ಆಗಾಗ ಆಗುತ್ತಿದ್ದ ವರ್ಗಾವಣೆಯಿಂದಾಗಿ ಅವರ ಸಿತಾರ ಕಲಿಯುವಿಕೆಗೆ ತೊಂದರೆ ಆಗುತ್ತಿತ್ತು. ಧಾರವಾಡದ ಸುಪ್ರಸಿದ್ಧ ಸಿತಾರ ವಾದಕ ಬಾಲೇಖಾನರ ಹತ್ತಿರ ಸಿತಾರ ಕಲಿಯಲು ಪ್ರಾರಂಭಿಸಿದರು. ಹುಬ್ಬಳಿಯಲ್ಲಿ ಕೆಲಸದಲ್ಲಿ ಇದ್ದಾಗ ಧಾರವಾಡಕ್ಕೆ ಹೋಗಿ ರಾತ್ರಿ 9ರಿಂದ 12ರವರೆಗೆ ಸಿತಾರ ಕಲಿಯುತ್ತಿದ್ದರು. ಬಾಲೇಖಾನ್ ಅವರಂತಹ ಗುರುಗಳು ನನಗೆ ಸಿಕ್ಕಿದ್ದು ನನ್ನ ಪುಣ್ಯ ಎಂದು ನೆನಪಿಸಿಕೊಳ್ಳುವ ಸಂಜೀವರಾವ್‌ ಸತತ 15 ವರುಷ ಸಿತಾರವಾದನವನ್ನು ಶಾಸ್ತ್ರೀಯವಾಗಿ ಕಲಿತರು. ಮುಂಬೈಯ ಗಂಧರ್ವ ಮಹಾವಿದ್ಯಾಲಯದಲ್ಲಿ ಸಿತಾರ ವಾದನದಲ್ಲಿ ‘ಸಂಗೀತ ವಿಶಾರದ’ ಪದವಿಯನ್ನೂ ಪಡೆದರು. 1977ರಲ್ಲಿ ದೊಡ್ಡಬಳ್ಳಾಪುರದಲ್ಲಿ ಮೊದಲ ಸಾರ್ವಜನಿಕ ಕಛೇರಿಯನ್ನು ಅವರು ನೀಡಿದರು. ಅಲ್ಲಿಂದ ಮುಂದಕ್ಕೆ ಸುದೀರ್ಘ ನಾಲ್ಕು ದಶಕಗಳ ಸಂಗೀತಯಾನ ಅವರದು.

ಬಾಲೇಖಾನ್ ಅವರ ಶೈಲಿ, ನೈಪುಣ್ಯ, ವಿಲಾಯತ್‌ ಖಾನ್‌ ಅವರಿಗೆ ಹೋಲುತ್ತದೆಂದು ಸಂಜೀವರಾವ್‌ ಹೆಮ್ಮೆಯಿಂದ ಹೇಳುತ್ತಾರೆ. ಮಾತು ಮದುವೆಯ ವಿಷಯದ ಕಡೆಗೆ ತಿರುಗಿದಾಗ ಮುಖ ಕೆಂಪೇರಿಸಿಕೊಂಡ ಈ ಸಿತಾರ ವಾದಕರು ಕೊಡುವ ವಿವರ ಮತ್ತೂ ರೋಚಕ. ‘ನಮ್ಮ ತಂದೆ ಒಬ್ಬ ಜಮೀನದಾರ ಮನೆತನದ ಹುಡುಗಿಯನ್ನು ಗೊತ್ತು ಮಾಡಿದ್ದರು. ಆಗ ನಾನು ನನಗೆ ಸಂಗಿತ ಕಲಿತ ಹುಡುಗಿಯೇ ಬೇಕೆಂದು ಹಟ ಹಿಡಿದೆ. ಆಗ ಸುಂದರಾಚಾರ್ಯ ಎಂಬ ಸಂಗೀತ ಶಿಕ್ಷಕರಲ್ಲಿ ದಕ್ಷಿಣಾದಿ ಸಂಗೀತ ಕಲಿಯುತ್ತಿದ್ದ ಹುಡುಗಿಯನ್ನು ಗೊತ್ತುಮಾಡಿ ಮದುವೆ ಮಾಡಿದರು. ಈಗ ನನ್ನ ಪತ್ನಿ ಹಾರ್ಮೋನಿಯಂ ನುಡಿಸುತ್ತಾಳೆ ಎಂದು ಅವರು ವಿವರಿಸುತ್ತಾರೆ.

ಸಂಜೀವರಾವ್‌ ಅವರ ಸಂಗೀತ ಪ್ರೇಮ ಅದಮ್ಯವಾದುದು. ರಾಗಗಳಿಗೂ ಸೂರ್ಯಕಿರಣಗಳಿಗೂ ಇರುವ ಸಾಮ್ಯತೆ ಬಗ್ಗೆ ಅವರು ಅಭ್ಯಸಿಸಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ದಶಕಗಳ ಹಿಂದೆಯೇ ಮಂಗಳೂರಿನ ಹಿಂದೂಸ್ತಾನಿ ಸಂಗೀತ ಸಭಾ’ ಜನ್ಮ ತಳೆಯುವಲ್ಲಿ ಪ್ರಮುಖ ಕಾರಣಕರ್ತರಾಗಿದ್ದವರು ಇವರಾಗಿದ್ದಾರೆ. ಅವರ ಮನೆಯಲ್ಲಿಯ ಈ ಸಿತಾರಗಳ ಝೇಂಕಾರ ಕೇಳಿದಾಗ ಸಹಬಾಳುವೆಯ ಮಂತ್ರ ಪಠಿಸಿದಂತಾಗುತ್ತದೆ. ಯಜುರ್ವೇದದ ಶಾಂತಿಮಂತ್ರದಂತೆ ‘ಸಹನಾವವತು ಸಹನೌಭುನಕ್ತು ಸಹವೀರ್ಯಂ ಕರವಾವಹೈ’ ಎಂಬ ಸಂದೇಶ ಸಾರುತ್ತದೆ. ಸಂಜೀವರಾವ್‌ ಹೇಳುತ್ತಾರೆ: ‘ಕೂಡಿ ಸಿತಾರ ನುಡಿಸುತ್ತಿರುವಾಗ ನಾವೆಲ್ಲ ಒಂದು ರೀತಿಯ ಆತ್ಮದ ಸ್ನಾನ ಮಾಡಿದಂತಾಗುತ್ತದೆ...’

ಸಂಜೀವರಾವ್‌ ಅವರ ಕುಟುಂಬ ಈಗ ಮಂಗಳೂರು ಹತ್ತಿರದ ಹೊಸಬೆಟ್ಟು ಗ್ರಾಮಕ್ಕೆ ಸ್ಥಳಾಂತರಗೊಂಡಿದೆ. ಅವರ ಮಗಳು ಮಂಗಳೂರಿನಲ್ಲಿ ನೆಲೆಸಿದ್ದಾರೆ. ಆದರೆ, ಅವರ ಮನೆಯಲ್ಲಿ ಸಿತಾರ ವಾದನದ ಝೇಂಕಾರ ಮಾತ್ರ ಎಂದಿಗೂ ನಿಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT