ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಡಿತ್ ರಾಜೀವ ತಾರಾನಾಥ: ಸ್ವರಗಳ ಬೆನ್ನತ್ತಿದ ಬೆರಳು.. ವಯಸ್ಸಿನ ಹಂಗಿಲ್ಲದ ಮನಸು

Last Updated 15 ಅಕ್ಟೋಬರ್ 2022, 23:45 IST
ಅಕ್ಷರ ಗಾತ್ರ

ಅದು 1953ನೇ ಇಸ್ವಿ. ಬೆಂಗಳೂರಿನ ಟೌನ್‌ಹಾಲ್. ಆಗಿನ್ನೂ ಹಿಂದೂಸ್ತಾನಿಯ ಅಭಿರುಚಿ ಬೆಳೆಯುತ್ತಿದ್ದ ಕಾಲ. ಆದರೂ ಅಂದಿನ ಸಿತಾರ್-ಸರೋದ್ ಜುಗಲಬಂದಿ ಕಛೇರಿಗೆ ಟೌನ್‌ಹಾಲಿನಲ್ಲಿ ಕಿಕ್ಕಿರಿದು ಸೇರಿದ ರಸಿಕರು. 30ರ ಆಸುಪಾಸಿನಲ್ಲಿದ್ದ ಪಂ. ರವಿಶಂಕರ್ - ಉಸ್ತಾದ್ ಅಲಿ ಅಕ್ಬರ್ ಖಾನ್ ವೇದಿಕೆಯೇರುತ್ತಿದ್ದಂತೆ ಕರತಾಡನ. ಸರೋದ್ ಬಗ್ಗೆ ಅಷ್ಟೇನೂ ಕುತೂಹಲವಿಲ್ಲದಿದ್ದರೂ ಸಿತಾರ್ ತುಂಬ ಇಷ್ಟಪಡುವ 20ರ ಹರೆಯದ ಯುವಗಾಯಕನೊಬ್ಬ ಅಂದಿನ ಕಛೇರಿಗೆ ಬಂದಿದ್ದ. ಆದರೆ ಕಛೇರಿ ಮುಗಿಯುವಷ್ಟರಲ್ಲಿ ಆ ಯುವಕನ ಮೈಮನಸ್ಸನ್ನು ಸರೋದ್ ನಾದದ ಗುಂಗು ಸಂಪೂರ್ಣವಾಗಿ ಆವರಿಸಿತ್ತು.

ಆ ದಿನ ಅಲ್ಲಿ ನೆರೆದಿದ್ದ ಇನ್ನೂ ನೂರಾರು ರಸಿಕರು ಅದೇ ಸಿತಾರ್-ಸರೋದ್ ನಾದವನ್ನು ಆಲಿಸಿದ್ದರು, ಖುಷಿಪಟ್ಟಿದ್ದರು. ಆದರೆ ಅವರ‍್ಯಾರನ್ನೂ ಕಾಡದ, ಆವರಿಸದ ಮಾಯೆಯೊಂದು ಈ ಯುವಕನನ್ನು ಆವರಿಸಿತಲ್ಲ... ಬದುಕಿನಲ್ಲಿ ಇನ್ನು ಕಲಿತರೆ ಸರೋದ್ ಮಾತ್ರ, ಹೇಗಾದರೂ ಮಾಡಿ ಈ ಉಸ್ತಾದರ ಬಳಿ ಹೋಗಲೇಬೇಕೆಂಬ ತಹತಹ ಹುಟ್ಟಿ ಹೆಮ್ಮರವಾಯಿತಲ್ಲ! ಉಸ್ತಾದ್ ಅಲಿ ಅಕ್ಬರ್ ಖಾನ್ ಹೀಗೆ ಎಷ್ಟೆಲ್ಲ ಕಡೆ ಒಬ್ಬರೇ ಕಛೇರಿ ನೀಡಿದ್ದರು, ರವಿಶಂಕರ್ ಜೊತೆಗೂಡಿ ಜುಗಲಬಂದಿ ಕಛೇರಿ ನೀಡಿದ್ದರು... ಆದರೆ ಅವರ ಒಂದೇ ಒಂದು ಕಛೇರಿಯನ್ನು ಕೇಳಿ, ‘ಇರುವುದೆಲ್ಲ ಬಿಟ್ಟು’, ಸರೋದ್ ಕಲಿಯಲೇಬೇಕು ಎಂದು ಬೆನ್ನುಹತ್ತಿ ಬಂದಿದ್ದು ಈ ಯುವಕ ಮಾತ್ರ. ಹಾಗೆ ಸರೋದ್ ಮಾಯೆಯ ಬೆಂಬತ್ತಿ, ಗುರುವನ್ನು ಹುಡುಕಿಕೊಂಡು ಮುಂಬೈಗೆ ಕಾಲಿಟ್ಟ ಆ ಯುವಗಾಯಕನೇ ಪಂಡಿತ್ ರಾಜೀವ ತಾರಾನಾಥ.

ಹಾಗೆ ನೋಡಿದರೆ ಅವರ ಸಂಗೀತ ಪಯಣ ಆರಂಭವಾಗಿದ್ದು ಬೆರಳುಗಳ ಮೂಲಕವೇ. ಮೂರು–ನಾಲ್ಕು ವರ್ಷದ ಬಾಲಕನಾಗಿದ್ದಾಗ, ಎಡಗೈ, ಬಲಗೈ ವ್ಯತ್ಯಾಸ ತಿಳಿಯುವ ಮೊದಲೇ, ಎಳೆಯ ಪುಟ್ಟ ಬೆರಳುಗಳು ತಬಲಾದ ಮೇಲಾಡುತ್ತಿದ್ದವು. ಆಯುರ್ವೇದ ಪಂಡಿತರೂ ಆಗಿದ್ದ ತಂದೆ ತಾರಾನಾಥರು ತುಂಬ ಚಿಕ್ಕ ವಯಸ್ಸಿನಲ್ಲಿಯೇ ಇವರಿಗೆ ತಬಲಾ ಕಲಿಸಿದ್ದರು. ಅದು ಮುಂದೆ ಆಯುರ್ವೇದದಲ್ಲಿ ನಾಡಿ ನೋಡುವುದಕ್ಕೂ ಸಹಾಯವಾಗುತ್ತದೆ ಎಂದು. ರಾಜೀವರು ಹುಟ್ಟಿ ಬೆಳೆದಿದ್ದು ಮಂತ್ರಾಲಯದ ಸಮೀಪದ ತುಂಗಭದ್ರ ಎಂಬ ಊರಿನಲ್ಲಿ. ಹತ್ತೊಂಬತ್ತನೇ ಶತಮಾನದ ಆರಂಭದ ಆ ಕಾಲಘಟ್ಟದಲ್ಲಿ ಕ್ರಾಂತಿಕಾರಿಯೆಂದು ಹೆಸರಾಗಿದ್ದ, ಸಾಹಿತ್ಯ, ಸಂಗೀತ ಹಾಗೂ ಆಯುರ್ವೇದದಲ್ಲಿ ಪರಿಣತಿ ಹೊಂದಿದ್ದ ಪಂಡಿತ ತಾರಾನಾಥ ಮತ್ತು ಪ್ರಗತಿಪರ ನಿಲುವಿನ, ಮಹಿಳೆಯರ ಹಕ್ಕುಗಳ ಕುರಿತು ಅಧಿಕಾರಯುತವಾಗಿ ಮಾತನಾಡುತ್ತಿದ್ದ ಸುಮತೀಬಾಯಿಯವರ ಹಿರಿಯ ಮಗನಾಗಿ ಹುಟ್ಟಿದ ರಾಜೀವರಿಗೆ ಬಾಲ್ಯದಲ್ಲಿಯೇ ದೊಡ್ಡತನದ, ಔತ್ತಮ್ಯದ ಮಾದರಿಗಳು ಕಣ್ಣ ಮುಂದಿದ್ದವು.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕ್ರಮಬದ್ಧವಾಗಿ ಕಲಿಯತೊಡಗಿದ ರಾಜೀವರು ಮೊದಲ ಕಾರ್ಯಕ್ರಮ ನೀಡಿದಾಗ ಕೇವಲ ಒಂಬತ್ತು ವರ್ಷ. ಆಕಾಶವಾಣಿಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದಾಗ ಅವರಿಗೆ ಹತ್ತೊಂಬತ್ತು ವರ್ಷ. ಅಂತರ ಕಾಲೇಜು ಸ್ಪರ್ಧೆಗಳಲ್ಲಿ ಎಲ್ಲ ಗಾಯನ ಸ್ಪರ್ಧೆಗಳಲ್ಲಿ ಮೊದಲ ಬಹುಮಾನ ಕಟ್ಟಿಟ್ಟ ಬುತ್ತಿ. ತಲತ್ ಮಹಮೂದರ ಗಝಲ್ಅನ್ನು ತುಂಬ ಇಷ್ಟಪಡುತ್ತಿದ್ದ ರಾಜೀವರ ಕಣ್ಣಿನಲ್ಲಿ ಹಿನ್ನೆಲೆ ಗಾಯಕರಾಗುವ ಕನಸು ಆಗೀಗ ತೂಗುತ್ತಿತ್ತು. ಆದರೆ ಉಸ್ತಾದ್ ಅಲಿ ಅಕ್ಬರ್ ಖಾನರ ಸರೋದ್ ವಾದನ ಮೈಮನವನ್ನು ತುಂಬಿದ ನಂತರ ಕೊರಳಿಗಿಂತ ಬೆರಳಿನ ಕರೆಯೇ ತೀವ್ರವಾಗಿತ್ತು.

ಸರೋದ್, ಮಾತ್ರವಲ್ಲ ಹೆಚ್ಚುಕಡಿಮೆ ಎಲ್ಲ ತಂತಿವಾದ್ಯಗಳನ್ನು ಚಿಕ್ಕ ವಯಸ್ಸಿನಲ್ಲಿ, ಎಳೆ ಬೆರಳುಗಳನ್ನು ಬೇಕಿದ್ದಂತೆ ಬಾಗಿ, ಬಳುಕಿಸಿ, ಪಳಗಿಸುವ ಕಾಲದಲ್ಲಿ ಕಲಿಯಬೇಕು ಎನ್ನುತ್ತಾರೆ ಅವರು. ಆದರೆ ರಾಜೀವರು ಗುರುಗಳ ಸಂಪರ್ಕ ಸಾಧಿಸಿ, ಅವರ ಬಳಿ ಹೋದಾಗ ಅವರಿಗೆ 23 ವರ್ಷ. ನಂತರ ಬೆರಳುಗಳನ್ನು ಪಳಗಿಸುವುದು ಅಷ್ಟು ಸುಲಭವಲ್ಲ. ಅಷ್ಟು ವರ್ಷ ಕೊರಳಿನಲ್ಲಿ ನೆಲೆಗೊಂಡಿದ್ದ ರಾಗಗಳನ್ನು ಬೆರಳಿಗೆ ದಾಟಿಸುವ ಆ ಸವಾಲು ಕಠಿಣವಿತ್ತು. ಆ ವೇಳೆಗೆ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡು, ಏಕಾಂಗಿಯಾಗಿ ಆ ದುರ್ಗಮ ದಾರಿಯ ಪಯಣ, ತಂದೆಸಮಾನ ಗುರುಗಳಾದ ಖಾನ್ ಸಾಹೇಬರ ಕಲಿಕೆಯ ವಿಧಾನ, ಗುರುವಿನ ಪ್ರೀತಿ, ರಿಯಾಜ್ ಹೇಗಿರಬೇಕು, ಅನುದಿನದ ಹುಡುಕಾಟ, ಗಾಯನದಲ್ಲಿ ಕೊರಳಿನ ಮೂಲಕ ಮೂಡಿಸೋ ಎಲ್ಲ ರಾಗಛಾಯೆಗಳನ್ನು ಸರೋದಿನಲ್ಲಿಯೂ ಹ್ಯಾಗೆ ಪಡಿಮೂಡಿಸಬೇಕು, ಹೀಗೆ ನಾಲ್ಕಾರು ಪ್ರಶ್ನೆಗಳನ್ನು ಇಟ್ಟುಕೊಂಡು ಪಂಡಿತ್ ರಾಜೀವರನ್ನು ಮಾತನಾಡಿಸಿದಾಗ ಹೊರಚಿಮ್ಮಿದ ಮನೋಲಹರಿ ಇಲ್ಲಿದೆ:

****

‘ಗಾಯನದಲ್ಲಿ ಔತ್ತಮ್ಯವನ್ನು ಸಾಧಿಸಿರತೀವಿ, ಕೊರಳಿನ ಸಾಧ್ಯತೆಗಳನ್ನು ಕಂಡುಕೊಂಡಿರತೀವಿ. ಆ ನಂತರ ದೇಹವನ್ನು ಇನ್ನೊಂದಕ್ಕೆ ಸಜ್ಜುಗೊಳಿಸುವುದು ಅಷ್ಟು ಸುಲಭ ಅಲ್ಲ. ಮತ್ತೆ ಇಲ್ಲಿ ಯಾವುದೇ ಶಾರ್ಟ್ ಕಟ್ ಇಲ್ಲ. ದೇಹ, ಬೆರಳು, ಉಗುರು ಎಲ್ಲವನ್ನೂ ಇನ್ನೊಂದು ದುಡಿಮೆಗೆ ಹಚ್ಚಬೇಕು. ಈಗ ತುಸು ಮಟ್ಟಿಗೆ ಪಾಂಡಿತ್ಯವನ್ನು ಗಳಿಸ್ತಾ ಇದ್ದೀನಿ.

ಸಂಗೀತ ಒಂದೇ, ಅದರ ಅವತಾರಗಳು ಬೇರೆ. ಬಹಳ ಸಮೃದ್ಧವಾಗಿ, ಸಂಪೂರ್ಣವಾಗಿ, ಸಂಗೀತದ ಸಿದ್ಧಾಂತಗಳು ಗಾಯನದಲ್ಲಿ ಬರುತ್ತವೆ. ನನ್ನ ಪ್ರಕಾರ ಗಾಯನ ಸಂಗೀತವೇ ಕೇಂದ್ರ. ಅಲ್ಲಿಂದ ಬೇರೆಬೇರೆ ವಾದ್ಯಗಳು… ಅದೇ ಸಂಗೀತವನ್ನು ನುಡಿಸಲು ನೋಡುವುದು. ಒಂದು ವಾದ್ಯದ ಒಕ್ಕಣೆ, ಅದರ ಆಕಾರ, ಇದರ ಮೂಲಕ ಗಾಯನದಲ್ಲಿ ಮಾಡಲಾಗದ ಎಷ್ಟೋ ಸಂಗತಿಯನ್ನು ಮಾಡಬಹುದು, ಹಾಗೆಯೇ ಕೆಲವನ್ನು ಮಾಡೋದಕ್ಕೂ ಆಗುವುದಿಲ್ಲ. ಅಂದರೆ ಪ್ರತೀ ವಾದ್ಯಕ್ಕೂ ಅದರದೇ ಆದ ಸಾಧ್ಯತೆಗಳೂ ಇವೆ, ಮಿತಿಗಳೂ ಇವೆ.

ನಮ್ಮ ಗುರುಗಳು ಮೊದಲು ಹಾಡಿ ತೋರಿಸುತ್ತಿದ್ದರು. ಆಮೇಲೆ ಸರೋದಿನಲ್ಲಿ ನುಡಿಸೋರು. ಖಾನ್‌ಸಾಹೇಬರಿಗೆ ಕಲಿಸುವುದರಲ್ಲಿ ಅಷ್ಟು ಹುರುಪು ಇರುತ್ತಿರಲಿಲ್ಲ. ಸರೋದನ್ನು ಚೆನ್ನಾಗಿ ನುಡಿಸುವುದರಲ್ಲಿ, ಅದರ ಸಾಧ್ಯತೆಗಳನ್ನು ಶೋಧಿಸುವುದರಲ್ಲಿ ಹೆಚ್ಚು ಆಸಕ್ತಿ ಇತ್ತು. ಅನ್ನಪೂರ್ಣ ದೀದಿ, ರವಿಶಂಕರ್ ಇವರಿಬ್ಬರ ಕಲಿಸುವಿಕೆ ಖಾನ್ ಸಾಹೇಬರ ಕಲಿಸುವ ವಿಧಾನಕ್ಕಿಂತ ತುಸು ಭಿನ್ನ. ಅಂದರೆ ಇವರಿಬ್ಬರಿಗೂ ಅವರು ಹೇಳಿದ್ದನ್ನು ಚಾಚೂ ತಪ್ಪದೆ ಮಾಡಿ ತೋರಿಸಬೇಕು. ಮೇಷ್ಟ್ರ ಥರಾ ಇಬ್ಬರೂ.

ಸಂಗೀತದಲ್ಲಿ ಕಲಿಕೆಗಿಂತ ಮೈಗೂಡಿಸಿಕೊಳ್ಳೋದು ಭಾಳ ಇರತದೆ. ಬಾಯಿ ಮಾತಿನಲ್ಲಿ ಎಷ್ಟೂ ಅಂತ ಹೇಳಬಹುದು? ಶಬ್ದಗಳಲ್ಲಿ ಸಂಗೀತವನ್ನು ಹೇಳೋದಕ್ಕೆ ಆಗೋದಿಲ್ಲ. ಗುರುಗಳ ಗಾಯನ ಅಥವಾ ವಾದನ, ಬೇರೆ ದೊಡ್ಡವರ ಸಂಗೀತವನ್ನು ಕೇಳಿಕೇಳಿ ಮೈಗೂಡಿಸಿಕೊಳ್ಳಬೇಕು. ಆ ಸಂಗೀತದೊಳಗೇ ಇದ್ದರೆ, ನೀವು ಮೈಮನಸ್ಸೆಲ್ಲವನ್ನೂ ತೆರೆದುಕೊಂಡಿದ್ದರೆ ಬೇಗ ಬರುತ್ತದೆ. ಇಲ್ಲದಿದ್ದರೆ ಗೋಡೆ ಹಾಯ್ದುಕೊಂಡು ಸಂಗೀತ ನಿಮ್ಮ ತಲುಪೋದು ಕಷ್ಟವಾಗುತ್ತದೆ.

ಗುರುಗಳು ನಮ್ಮ ಮುಂದೆ ದೊಡ್ಡ ಖಜಾನೆಯನ್ನೇ ತೆರೆದು ಇಟ್ಟಿರಬಹುದು. ಆದರೆ ನನ್ನ ಬುಟ್ಟಿ ಆಗ ಸಣ್ಣದಿತ್ತು. ಅದೇ ಬುಟ್ಟಿ ದೊಡ್ಡದಾಗಿದೆ. ಆಗ ಸಮುದ್ರದೆದುರು ನಿಂತಿದ್ದರೂ ನನ್ನ ಬೊಗಸೆ ಚಿಕ್ಕದಿತ್ತು. ಈಗ ಬೊಗಸೆ ದೊಡ್ಡದಾಗಿದೆ. ಕವನವೊಂದನ್ನು ಮತ್ತೆ ಮತ್ತೆ ಓದಿದಾಗ ಬೇರೆ ಅರ್ಥಗಳನ್ನು ಹೊಳೆಯಿಸುತ್ತ ಹೋಗುತ್ತದೆಯಲ್ಲ, ಹಾಗೆ ಈಗ ರಾಗಗಳ ಬೇರೆ ಬೇರೆ ಅರ್ಥ, ಸಾಧ್ಯತೆಗಳ ಹುಡುಕಾಟ ಮಾಡೋದಕ್ಕೆ ಆಗುತ್ತಿದೆ. ಪ್ರತಿದಿನ ಉಜ್ಜಬೇಕು, ತಿಕ್ಕಬೇಕು. ಸುಮ್ಮನೇ ತಿಕ್ಕೋದಲ್ಲ. ಮೈಮನಸು ಪೂರಾ ರಿಯಾಜಿನಲ್ಲೇ ಇರಬೇಕು. ಈಗ ತುಸು ಮಟ್ಟಿಗೆ ಪಾಂಡಿತ್ಯವನ್ನು ಗಳಿಸ್ತಾ ಇದ್ದೀನಿ.

ಸಾಹಿತ್ಯದಲ್ಲಿ ಯಾವುದೇ ಮಾನದಂಡ ಇಲ್ಲ. ಆದರೆ ಸಂಗೀತದಲ್ಲಿ ಹಾಗಲ್ಲ. ಇಲ್ಲಿ ಪ್ರಮಾಣವಿದೆ.

ಖಾನ್‌ಸಾಹೇಬರಿಗೆ ಒಮ್ಮೆ ಯಾರೋ ಕೇಳಿದರು, ನೀವು ಏನು ಮಾಡ್ತಾ ಇದ್ದೀರಿ ಅಂತ. ಅದಕ್ಕೆ ಅವರು ಹೇಳಿದರು, ನಾನು ಏನೂ ಮಾಡ್ತಿಲ್ಲ, ‘ನಿ’ದಿಂದ ‘ಸ’ ಗೆ ಹೋಗೋ ಪ್ರಯತ್ನ ಮಾಡ್ತಾ ಇದ್ದೀನಿ. ತೃಪ್ತಿಯಾಗುವ ಹಾಗೆ, ಪೂರ್ತಿಯಾಗಿ ಹಾಗೆ 3-4 ಸಲ ಹೋಗಿರಬಹುದು ಅಷ್ಟೆ ಅಂತ. ಅದು ನಿಜ. ಹಾಗೆ ‘ನಿ’ದಿಂದ ‘ಸ’ಗೆ ಪೂರ್ತಿಯಾಗಿ ಹೋದಾಗ ಮೈಯೆಲ್ಲ ತುಂಬಿದಂತೆ ಇರುತ್ತಿತ್ತು. ಕೆಲವೊಮ್ಮೆ ನುಡಿಸ್ತಾನೆ ಉಮ್ಮಳಿಸಿ ಬರುತ್ತೆ. ಯಾವುದೋ ನೆನಪಿಗೆ ಇರಬಹುದು ಅಥವಾ ಅದೇ ನುಡಿಸಾಣಿಕೆಯೇ ಉಮ್ಮಳಿಸಿ ಬರುತ್ತದೇನೋ.

‘ನಿಮ್ಮ ಗುರುಗಳು ಎಲ್ಲಿರ್ತಾರೆ, ನಿಮ್ಮ ಹೃದಯದಲ್ಲಿ ಯಾವಾಗ್ಲೂ ಇರ್ತಾರೆಯೇ’ ಅಂತ ಯಾರೋ ಕೇಳಿದರು. ‘ಹೃದಯದಲ್ಲಿ ಗೊತ್ತಿಲ್ಲರೀ, ನನ್ನ ಈ ಮೂರು ಬೆರಳಿನಲ್ಲಿ ಇರತಾರೆ’ ಅಂದೆ. ನಾ ನುಡಿಸಬೇಕಿದ್ದರೆ ಅವರು ಈ ಮೂರು ಬೆರಳಿನಲ್ಲಿ ಇರತಾರೆ. ನಾ ಛಲೋ ಬಾರಿಸಿದರೆ ಅಲ್ಲೇ ಇರತಾರೆ. ಕೆಟ್ಟು ಹೋಯಿತು ಅಂದರೆ ಎದ್ದು ಹೋಗಿರತಾರೆ, ಅಷ್ಟೆ. ಅಲ್ಲಾ ರಖಾ ಅವರ ಮೂರನೆಯ ಮಗ ಇದೇ ಥರ ಅವರ ಅಪ್ಪನ ನೆನಪಿನಲ್ಲಿ ಬರೆದಿದ್ದ ‘ಮೇರೆ ಉಂಗಲಿಯೋ ಮೇಂ ಖುದ್ ಕೋ ರಖಾ ಹೈ ಅಲ್ಲಾ’ ಅಂತ. ಒಳ್ಳೆಯ ಹಾಡು.

ಒಂದು ನದಿ ಉಗಮವಾಗಬೇಕಿದ್ದರೆ ತುಂಬ ಚಿಕ್ಕದಾಗಿರುತ್ತೆ, ಆದರೆ ಮುಂದೆ ಹರೀತಾ ಹರೀತಾ ದೊಡ್ಡದಾಗುತ್ತದೆ. ಕಾವೇರಿ ಉಗಮ ನೋಡಿ, ಚೊಂಬಿನಷ್ಟು ನೀರು ಇರುತ್ತೆ. ಆದರೆ ಮುಂದೆ ಶ್ರೀರಂಗಂನಲ್ಲಿ ಹ್ಯಾಗೆ ದೊಡ್ಡದಾಗಿದೆ. ಹಾಗೆ ರಾಗ ಸೌಖ್ಯದ ಬೇರೆ ಬೇರೆ ಪಕಳೆಗಳು ಸಿಗುತಾ ಹೋಗುತವೆ. ಇದು ದೇಹವೂ ಬೆರೆತುಕೊಂಡ ನಾನ್‌ವರ್ಬಲ್ ಸೌಖ್ಯ. ರಾಗದ ನಡೆ, ಓಟ, ತಾಳದ ನಡೆ, ಅದರ ಒಕ್ಕಣೆ ಇಂಥವುಗಳಿಂದ ತೃಪ್ತಿ, ಸುಖ ಒದಗುತ್ತದೆ. ಸೂರ್ಯಾಸ್ತ ನೋಡಿದಾಗ ಆಹಾ ಎನ್ನಿಸುವ ಭಾವನೆ ತುಂಬಿಕೊಳ್ಳುತ್ತದೆಯಲ್ಲ, ಹಾಗೆ.

ಒಂದಿಷ್ಟು ರಾಗಗಳ ಗುಚ್ಛ ನನ್ನ ಜೊತೆಗೆ ಇರುತ್ತದೆ. ಬೆಳಗ್ಗೆ ಏಳ್ತಾನೆ ಒಂದು ರಾಗ ಗುನಗುನಿಸ್ತಾ ಇರತೀನಿ. ಏನೋ ಒಂದು ರೀತಿಯಲ್ಲಿ ಭಾವನೆಗಳು ಸ್ಥೂಲ ಕೂಡಿ ಬರೋದು, ಮಕ್ಕಳಿಗೆ ಆಗುವಂತೆ, ವಿವರಿಸಲು ಆಗುವುದಿಲ್ಲ. ಇಂಥದ್ದೇ ಕಾರಣ ಅಂತಿಲ್ಲ. ಯಾವುದೋ ಕಾರಣಕ್ಕೆ ಮನಸ್ಸಿನಲ್ಲಿ ಆ ರಾಗ ಬೆಳಗ್ಗೆಯೇ ಮೂಡಿರುತ್ತೆ, ಅದನ್ನೇ ಮಾಡು ಅಂತ ಮುಂದೆ ತಳ್ತಾ ಇರುತ್ತದೆ. ರಿಯಾಜಿನಲ್ಲಿ ಅದನ್ನೇ ಅಭ್ಯಾಸ ಮಾಡ್ತೀನಿ.

ಒಮ್ಮೊಮ್ಮೆ ಹಾಡಿಕೊಂಡಾಗ ತೃಪ್ತಿಕರವಾಗಿರುತ್ತದೆ, ಅಂದ್ರೆ ಧ್ವನಿಗೆ, ಗಂಟಲಿಗೆ ಬಂದಿದ್ದು ಬೆರಳಿಗೆ ಬರೋದಿಲ್ಲ. ಆವಾಗ ರಾತ್ರಿಯೆಲ್ಲ ಅದೇ ಮನಸ್ಸಿನಲ್ಲಿ ಕೊರೆಯುತ್ತ ಇರುತ್ತದೆ, ಅದೇ ಚರ್ಚೆ ನಡೀತಾ ಇರುತ್ತೆ ಒಳಗೆ. ಬಹಳ ಹಿಂದೆ ಮುಂಬೈಯಲ್ಲಿದ್ದಾಗ ಚರ್ಚ್ ಗೇಟಿನಲ್ಲಿ ನಮ್ಮ ಗುರುಗಳ ಕಛೇರಿ ಕೇಳಿದೆ, ಅವರು ಬಾರಿಸಿದ ಒಂದು ಚಲನ್ ತುಂಬ ಮನಸ್ಸಿನಲ್ಲಿ ನಾಟಿಬಿಟ್ಟಿತು. ನನ್ನ ಜೊತೆಗೊಬ್ಬರು ಇದ್ದರು, ಅವರನ್ನು ಒಂದು ಕಡೆ ತಲುಪಿಸಬೇಕಿತ್ತು, ತಲುಪಿಸಿ ನನ್ನ ರೂಮಿಗೆ ಹೋದವನೇ ಅದನ್ನು ಪ್ರಯತ್ನಿಸಿದೆ. ಆವಾಗ ಅಷ್ಟು ಬರಲಿಲ್ಲ. ಆದರೆ ಈಗ ಆ ಚಲನ್ ಸುಮಾರಾಗಿ ಹಂಗೇ ಬಾರಿಸ್ತೀನಿ, ಈಗ ಅದು ಬೆರಳಿಗೆ ಬರುತ್ತಿದೆ.

ಇತ್ತೀಚೆಗೆ ನಾನು ಸಾಹಿತ್ಯ, ಅದೂ ಇದೂ ಮಾತು ಎಲ್ಲ ಬಿಟ್ಟುಬಿಟ್ಟಿದ್ದೀನಿ. ಸಮಯ ಕಡಿಮೆ ಇದೆ ನನಗೆ. ಹಿಂಗಾಗಿ ನನ್ನ ಎಲ್ಲ ಶಕ್ತಿಯನ್ನು ಸರೋದ್ ಬಾರಿಸೋದಕ್ಕೆ ಹಾಕ್ತಿದೀನಿ. ಪ್ರತಿದಿನ ನಸುಕಿನಲ್ಲಿ ಏಳುವಾಗಲೇ ಇವತ್ತೇನು ಬಾರಿಸಬೇಕು, ಯಾವ ರಾಗ, ಅದರ ಸಾಧ್ಯತೆಗಳು, ಅಸಾಧ್ಯತೆಗಳು, ಮನಸ್ಸೊಳಗೆ ಚರ್ಚೆ ನಡೆದೇ ಇರುತ್ತೆ.

****

ಅರೆ… ಎಲ್ಲಿಯ 1932 ಮತ್ತು 2022… ನಡುವೆ 90 ವರ್ಷಗಳು ಕಳೆದು ಹೋದವೇ? ಇಲ್ಲ ಕಳೆದಿಲ್ಲ… ಇದು ಸಂಗೀತ, ಗುರುಭಕ್ತಿ, ಸಾಹಿತ್ಯ, ಚಿತ್ರಕಲೆ, ಮೋಟರ್ ಬೈಕ್ ರಿಪೇರಿ, ಕೋಳಿ ಸಾಕಾಣಿಕೆ, ಅಡುಗೆ, ಹತ್ತು ಹಲವು ಆಸಕ್ತಿಗಳು ಒಳಚೈತನ್ಯವನ್ನು ಪೊರೆಯುತ್ತ ಕೂಡಿದ, ಕಟ್ಟಿದ ಬದುಕು.

ಈ ಸರೋದ್ ತಂತಿಗಳಿಗೆ ತುಕ್ಕು ಹಿಡಿಯುವುದಿಲ್ಲ. ಸ್ವರಗಳು ಬೇಸುರಾ ಆಗುವುದಿಲ್ಲ. ಬೆರಳುಗಳು ರಾಗವನ್ನು ಮರೆಯುವುದಿಲ್ಲ. ಬೆರಳಿನ ಲಾಸ್ಯದೊಳು ರಾಗಗಳು ದಣಿಯುವುದಿಲ್ಲ. ಪರಿಚಿತ ರಾಗಗಳೊಳಗೆ ಮತ್ತೇನೋ ತಡಕಾಟ, ಹುಡುಕಾಟ ಮುಗಿಯುವುದಿಲ್ಲ. ಸ್ವರಗಳ ಬೆನ್ನತ್ತಿದ ಮನಸ್ಸಿಗೆ ವಯಸ್ಸಿನ ಹಂಗಿಲ್ಲ. ಮಾತುಗಳು ಚೂಪು ಲಯವನ್ನು ಕಳೆದುಕೊಳ್ಳುವುದಿಲ್ಲ. ಎಂದೋ ಕೇಳಿದ ಕರೀಂಖಾನರ ಗಾಯನವೂ ಜೀವಕೊರಳಿನೊಳು ಉಸಿರುಪಡೆವುದು. ಮತ್ತೆ ಇಲ್ಲೀಗ ಸರೋದ್ ನಾದವನ್ನಾಲಿಸುತ್ತ ಕಾಲವೂ ಮೆತ್ತಗೆ ನಡೆಯುತ್ತಿದೆ... ಸರೋದ್ ನಾದ ಹೀಗೆಯೇ ಬೆರಳಂಚಿನಿಂದ ಹೊರಹೊಮ್ಮುತಿರಲಿ ಎಂದು ನುಡಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT