ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರವೇ ಉಳಿದ ಸಿಂಥೆಟಿಕ್‌ ಟ್ರ್ಯಾಕ್‌!

5 ವರ್ಷವಾದರೂ ಕ್ರೀಡಾ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತ, ಅಸಹಾಯಕತೆ ನಡುವೆಯೇ ಕ್ರೀಡಾಪಟುಗಳ ಅಭ್ಯಾಸ
Last Updated 13 ಏಪ್ರಿಲ್ 2018, 9:20 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲಾ ಕ್ರೀಡಾಂಗಣದಲ್ಲಿ ನೀರು ಕಾಣದೆ ಒಣಗಿರುವ ಅಥ್ಲೆಟಿಕ್ಸ್‌ ಟ್ರ್ಯಾಕ್‌ಗೆ ಬಂದು ಓಡಲಾರಂಭಿಸಿದರೆ ಏಳುವುದು ಕಪ್ಪುದೂಳು. ತೆಳು ಬಣ್ಣದ ಶೂಗಳೂ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಟ್ರ್ಯಾಕ್‌ ಪಕ್ಕದಲ್ಲೇ ಕ್ರಿಕೆಟ್‌ ಆಡುವವರು ಬೀಸುವ ಚೆಂಡು ಯಾವಾಗ ಬಂದು ಬಡಿಯುತ್ತದೋ ಎಂಬ ಭಯದಲ್ಲೇ ನಡೆಯಬೇಕು, ಓಡಬೇಕು. ಅದೇ ವೇಳೆಯಲ್ಲಿ, ಬೈಕ್‌, ಸ್ಕೂಟರ್‌ ಓಡಿಸುವುದನ್ನು ಕಲಿಯುವವರೂ ನುಗ್ಗಿ ಬರುತ್ತಾರೆ. ಅಭ್ಯಾಸ ನಡೆಸುವವರಿಗೆ ನೆರಳಿಲ್ಲ. ನೀರೂ ಇಲ್ಲ.ಇದು ಸದ್ಯದ ಪರಿಸ್ಥಿತಿ. ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಎಲ್ಲ ಯುವಕ–ಯುವತಿಯರೂ ಇಲ್ಲೇ ಅಭ್ಯಾಸ ನಡೆಸಬೇಕು. ಸಮತಟ್ಟಿಲ್ಲದ ಟ್ರ್ಯಾಕ್‌ನಲ್ಲಿ ಓಡುವಾಗ ಗಾಯವಾದರೆ ತಕ್ಷಣಕ್ಕೆ ಚಿಕಿತ್ಸೆ ನೀಡಲು ಹತ್ತಿರದಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆಯೂ ಇಲ್ಲ. ಕತ್ತಲಾದ ಬಳಿಕ ಅಭ್ಯಾಸ ನಡೆಸಲು ದೀಪದ ಸೌಕರ್ಯವಿಲ್ಲ. ಕತ್ತಲಲ್ಲಿ ಅಭ್ಯಾಸ ನಡೆಸಿದರೂ, ಮದ್ಯವ್ಯಸನಿಗಳ ಹಾವಳಿಯನ್ನು ಎದುರಿಸಬೇಕು. ಏಕೆಂದರೆ ಕ್ರೀಡಾಂಗಣಕ್ಕೆ ಕಾಂಪೌಂಡ್‌ ಇಲ್ಲ.

ಎತ್ತರ ಜಿಗಿತ, ದೂರ ಜಿಗಿತಕ್ಕೆ ಬೇಕಾದ ಸೌಕರ್ಯವೂ ಇಲ್ಲಿ ಇಲ್ಲ. ಇರುವ ಒಂದೇ ಅಂಕಣದಲ್ಲಿ ಯುವಜನರು ಬೇಸರ ಕಳೆಯಲು ಪಲ್ಟಿಗಳನ್ನು ಹೊಡೆಯುತ್ತಾರೆ. ಕ್ರೀಡಾಕೂಟಗಳು ನಡೆಯುವ ಸಮಯದಲ್ಲಿ ಮಾತ್ರ ಇಲ್ಲಿ ಕೊಂಚ ಜೀವಕಳೆ ಬರುತ್ತದೆ. ಉಳಿದಂತೆ ಈ ಕ್ರೀಡಾಂಗಣ ಇದ್ದೂ ಇಲ್ಲದಂತೆ. ಆದರೂ ಸುತ್ತಮುತ್ತಲಿನ ನಿವಾಸಿಗಳ ಅಚ್ಚುಮೆಚ್ಚಿನ ವಾಯುವಿಹಾರ ತಾಣ. ಕ್ರೀಡಾಪಟುಗಳ ಅನಿವಾರ್ಯ ಕ್ರೀಡಾಂಗಣ. ಈಗ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿ ನಿರ್ಮಾಣ ಕಾರ್ಯ ನಡೆದಿದೆ.

ಬ್ಯಾಸ್ಕೆಟ್‌ಬಾಲ್‌: ಕ್ರೀಡಾಂಗಣದ ರಸ್ತೆಯಲ್ಲೇ ಅರ್ಧಕ್ಕೆ ಕಟ್ಟಿ ಬಿಟ್ಟ ಬ್ಯಾಸ್ಕೆಟ್‌ಬಾಲ್‌ ಅಂಕಣವಿದೆ. ಅಪೂರ್ಣ ಅಂಕಣದಲ್ಲೇ ಆಟಗಾರರು ಸಂಭ್ರಮಿಸುತ್ತಾರೆ. ಕೋಟೆ ಮಲ್ಲೇಶ್ವರ ಗುಡಿ ರಸ್ತೆಯಲ್ಲಿರುವ ಕ್ರಿಕೆಟ್‌ ಮೈದಾನವೂ ಈಗ ಕಾಪೌಂಡ್ ಕಾಣುತ್ತಿದೆ. ಇದುವರೆಗೆ ಅಲ್ಲಿ ಒತ್ತುವರಿದಾರರದ್ದೇ ಪಾರುಪತ್ಯವಿತ್ತು.

ಕ್ರೀಡಾ ಸಂಕೀರ್ಣ: ಇಂಥ ಸನ್ನಿವೇಶದಲ್ಲೇ, ಕ್ರೀಡಾಂಗಣದ ಸಮೀಪದಲ್ಲೇ ಜಿಂದಾಲ್‌ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ಬಳ್ಳಾರಿ ಕ್ರೀಡಾ ಸಂಕೀರ್ಣ ಕೊಂಚಮಟ್ಟಿಗೆ ಕ್ರೀಡಾ ಸ್ಫೂರ್ತಿಯಿಂದ ಗಮನ ಸೆಳೆಯುತ್ತಿದೆ.ಬ್ಯಾಡ್ಮಿಂಟನ್‌, ಈಜು ಕೊಳ, ಮಲ್ಟಿಜಿಮ್‌ ಹಾಗೂ ಯೋಗಾಭ್ಯಾಸ ಕೇಂದ್ರದಲ್ಲಿ ನೂರಾರು ಮಂದಿ ಅಭ್ಯಾಸ ನಡೆಸುತ್ತಾರೆ, ಅಲ್ಲಿ ನುರಿತ ತರಬೇತುದಾರರೂ ಇರುವುದರಿಂದ ಕ್ರೀಡಾಪಟು ಸ್ನೇಹಿ ವಾತಾವಾರಣ ಕಂಡುಬರುತ್ತದೆ.

ವಸತಿ ಶಾಲೆ: ರೇಡಿಯೊ ಪಾರ್ಕ್‌ ಪ್ರದೇಶದಲ್ಲಿರುವ ಕ್ರೀಡಾ ಇಲಾಖೆಯ ವಸತಿ ಶಾಲೆಯ ಕಟ್ಟಡ ಶಿಥಿಲಗೊಂಡದ್ದು, ಅಲ್ಲಿಯೇ ವಿದ್ಯಾರ್ಥಿಗಳನ್ನಿರಿಸಲಾಗಿದೆ. ಅಲ್ಲಿಂದ ಸುಮಾರು 1 ಕಿ.ಮೀ.ಗೂ ಹೆಚ್ಚಿರುವ ಜಿಲ್ಲಾ ಕ್ರೀಡಾಂಗಣಕ್ಕೆ ವಿದ್ಯಾರ್ಥಿಗಳು ಮುಂಜಾನೆ ಮತ್ತು ಸಂಜೆ ನಡೆದೇ ಬರುತ್ತಾರೆ.

ಸಮಾವೇಶಗಳಿಗೆ: ಕ್ರೀಡಾಂಗಣವನ್ನು ರಾಜಕೀಯ ಸಮಾವೇಶಗಳಿಗೆ ಹಾಗೂ ಪೊಲೀಸ್ ನೇಮಕಾತಿ ಪರೀಕ್ಷೆಗಳಿಗೆ ಬಿಟ್ಟುಕೊಡುವುದರಿಂದ ಕ್ರೀಡಾ
ಭ್ಯಾಸಿಗಳಿಗೆ ತೊಂದರೆ ಉಂಟಾಗುತ್ತದೆ. ಕ್ರೀಡಾಂಗಣವೂ ಕೆಡುತ್ತದೆ ಎಂಬ ಅಹವಾಲನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ ಎನ್ನುತ್ತಾರೆ ಕೌಲ್‌ಬಜಾರ್‌ ನಿವಾಸಿ ಮಹ್ಮದ್‌ ರಿಯಾಜ್‌.

ಹಾಕಿ ಮೈದಾನ ಇಲ್ಲ!

ಬಳ್ಳಾರಿ: ಬಾಲಕಿಯರ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಗಳಲ್ಲಿ ಪಾಲ್ಗೊಂಡ ತಂಡಗಳಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿರುವ ಹಲವರು ನಗರದಲ್ಲಿದ್ದಾರೆ. ಆದರೆ ಅವರಿಗೆ ಸುಸಜ್ಜಿತ ಮೈದಾನವೇ ಇಲ್ಲ. ಅವರೆಲ್ಲರೂ, ಯುವಸಬಲೀಕಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ಶಾಲೆಯ ಮೈದಾನದಲ್ಲೇ ಅಭ್ಯಾಸ ನಡೆಸುತ್ತಿದ್ದಾರೆ. ‘ಪಂದ್ಯಾವಳಿಗಳು ಇದ್ದ ಸಮಯದಲ್ಲಿ ವಸತಿ ಶಾಲೆಯ ಮೈದಾನವೇ ನಮಗೆ ಗತಿಯಾಗಿದೆ. ಜಿಲ್ಲಾ ಕ್ರೀಡಾಂಗಣದ ಮೈದಾನದಲ್ಲಿ ಕ್ರಿಕೆಟ್‌ ಆಡುವವರು ಹೆಚ್ಚಿರುವುದರಿಂದ ಅಲ್ಲಿ ಅವಕಾಶವಿಲ್ಲ’ ಎಂದು ಕ್ರೀಡಾಪಟು ಸುರೇಖಾ ಭಟ್‌ ವಿಷಾದಿಸಿದರು.

ಸೌಕರ್ಯಗಳಿಲ್ಲ: ‘ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವವರಿಗೆ ಶೂ, ಸಮವಸ್ತ್ರ ನೀಡುವ ಪರಿಪಾಠವೂ ಇಲ್ಲಿ ಇಲ್ಲ. ಪ್ರಥಮ ಚಿಕಿತ್ಸಾ ಕಿಟ್ ಅನ್ನೂ ಯಾರೂ ಕೊಡುವುದಿಲ್ಲ. ಹೀಗಾಗಿ ಪೋಷಕರೂ ನಿರುತ್ಸಾಹ ತೋರುತ್ತಾರೆ’ ಎಂದರು.

ಇಲ್ಲಿ ತಾಲ್ಲೂಕು ಕ್ರೀಡಾಂಗಣವೇ ಇಲ್ಲ!

ಬಳ್ಳಾರಿ: ಜಿಲ್ಲೆಯ ತಾಲ್ಲೂಕು ಕ್ರೀಡಾಂಗಣಗಳು ಸುಸಜ್ಜಿತವಾಗಿಲ್ಲ. ವಿಪರ್ಯಾಸವೆಂದರೆ ಸಂಡೂರಿನಲ್ಲಿ ಇದುವರೆಗೆ ತಾಲ್ಲೂಕು ಕ್ರೀಡಾಂಗಣವೇ ಇರಲಿಲ್ಲ. ಇತ್ತೀಚೆಗಷ್ಟೇ ಇಲಾಖೆ ಜಮೀನು ಖರೀದಿ ಮಾಡಿ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ.

ಹಗರಿಬೊಮ್ಮನಹಳ್ಳಿಯಲ್ಲಿ ನಿವೇಶನ ಕೊರತೆಯಿಂದಾಗಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ ನನೆಗುದಿಗೆ ಬಿದ್ದಿದೆ. ಹಡಗಲಿಯಲ್ಲಿರುವ ಕ್ರೀಡಾಂಗಣದ ಅಭಿವೃದ್ಧಿಯೂ ಆಗಿಲ್ಲ. ಅದಕ್ಕಾಗಿ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಶಂಕುಸ್ಥಾಪನೆ ಮಾಡಿದ್ದರು. ಕೂಡ್ಲಿಗಿಯ ಮಹದೇವ ಮೈಲಾರ ಕ್ರೀಡಾಂಗಣವನ್ನು ಇಲಾಖೆಗೆ ಹಸ್ತಾಂತರಿಸಿ ಕೆಲವು ವರ್ಷಗಳಾಗಿವೆ. ಆದರೆ ಅಭಿವೃದ್ಧಿ ಆಗಿಲ್ಲ. ಸಿರುಗುಪ್ಪದಲ್ಲಿಯೂ ತಾಲ್ಲೂಕು ಕ್ರೀಡಾಂಗಣವಿಲ್ಲ. ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲೇ ಕ್ರೀಡಾ ಚಟುವಟಿಕೆಗಳು ನಡೆದಿವೆ. ಹೊಸಪೇಟೆಯಲ್ಲಿ ತಾಲ್ಲೂಕು ಕ್ರೀಡಾಂಗಣದಲ್ಲಿ ಕ್ರೀಡಾ ಸಂಕೀರ್ಣವಿದ್ದು ಈಜುಕೊಳ, ಮಲ್ಟಿಜಿಮ್‌, ಬ್ಯಾಡ್ಮಿಂಟನ್‌, ಟೆನ್ನಿಸ್‌ ಅಂಕಣಗಳಿವೆ.

ಚುನಾವಣೆ ಬಳಿಕ ಅಭಿವೃದ್ಧಿ...!

ಬಳ್ಳಾರಿ: ‘ಚುನಾವಣೆ ಘೋಷಣೆಗೂ ಮುನ್ನವೇ ಕ್ರೀಡಾಂಗಣದಲ್ಲಿ ಗ್ಯಾಲರಿ ನಿರ್ಮಾಣ ಕಾರ್ಯ ಆರಂಭವಾಗಿದೆ. ₹3.50 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಮತ್ತು ಕ್ರೀಡಾಂಗಣದ ಮುಂಭಾಗದ ಸ್ಥಳದಲ್ಲಿ ₹4 ಕೋಟಿ ವೆಚ್ಚದಲ್ಲಿ ಹಾಕಿ ಅಂಕಣವನ್ನು ನಿರ್ಮಿಸಲಾಗುವುದು. ಚುನಾವಣೆ ಬಳಿಕ ಈ ಕಾರ್ಯಗಳು ಆರಂಭವಾಗಲಿವೆ’ ಎಂದು ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ರಹಮತ್‌ ಉಲ್ಲಾ ತಿಳಿಸಿದರು.

ಫುಟ್‌ಬಾಲ್‌ ಅಕಾಡೆಮಿ ಸ್ಥಾಪನೆಗೂ ಸಿದ್ಧತೆ ನಡೆದಿದೆ. ಪೂರ್ಣಾವಧಿ ತರಬೇತುದಾರರನ್ನು ಇಲಾಖೆ ನೇಮಿಸಿದೆ. 25 ವಿದ್ಯಾರ್ಥಿಗಳು ಮತ್ತು ತರಬೇತುದಾರರಿಗೆ ಕ್ರೀಡಾ ಸಂಕೀರ್ಣದಲ್ಲೇ ಊಟ, ವಸತಿ ವ್ಯವಸ್ಥೆ ಮಾಡಲಾಗುವುದು’ ಎಂದರು. ‘ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಎಲ್ಲ ಆಟಗಳ ಅಂಕಣಗಳು ಮತ್ತು ಟ್ರ್ಯಾಕ್‌ ನಿರ್ಮಾಣಕ್ಕೆ ಜಿಂದಾಲ್‌ ಒಪ್ಪಿದೆ. ಅನುಮೋದನೆಯನ್ನೂ ಇಲಾಖೆ ನೀಡಿದೆ. ಕ್ರೀಡಾ ವಸತಿ ಶಾಲೆಯ ಆಧುನೀಕರಣಕ್ಕೆ ಪ್ರಸ್ತಾವ ಸಲ್ಲಿಸಬೇಕಾಗಿದೆ’ ಎಂದರು.

**

ಉಸ್ತುವಾರಿ ಸಚಿವರು ಕ್ರೀಡಾ ಕ್ಷೇತ್ರಕ್ಕೆ ಅಗತ್ಯವಿರುವಷ್ಟು ಉತ್ತೇಜನ ನೀಡಿಲ್ಲ. ಜಿಲ್ಲಾ ಕೇಂದ್ರದಲ್ಲಿರುವ ಕ್ರೀಡಾಂಗಣದಲ್ಲಿ ನೀರು, ಶೌಚಾಲಯ ವ್ಯವಸ್ಥೆ ಇಲ್ಲ – ಎಚ್‌.ಮುರಹರಿಗೌಡ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ.

**

ಈ ಸಲ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಯಾದರೆ ಖಂಡಿತ ಜಿಲ್ಲಾ ಕ್ರೀಡಾಂಗಣ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಸಂಪೂರ್ಣ ಅಭಿವೃದ್ಧಿ ಮಾಡುತ್ತೇವೆ – ಜಿ.ವೆಂಕಟಮರಣ, ಮೇಯರ್‌.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT