ನವದೆಹಲಿ: ಹವಾಮಾನ ಬದಲಾವಣೆಯ ವ್ಯತಿರಿಕ್ತ ಪರಿಣಾಮದಿಂದ ರೈತರ ಆದಾಯದಲ್ಲಿ ಇಳಿಕೆಯಾಗಬಹುದೆಂದು 2017–18ನೇ ಸಾಲಿನ ಆರ್ಥಿಕ ಸಮೀಕ್ಷೆ ಎಚ್ಚರಿಸಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸೋಮವಾರ ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆ ಮಂಡಿಸಿದರು.
ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವುದು, ನೀರಾವರಿಯಲ್ಲಿ ಆಗಬೇಕಾದ ಅಭಿವೃದ್ಧಿ ಹಾಗೂ ನೂತನ ತಂತ್ರಜ್ಞಾನದ ಸಮರ್ಥ ಬಳಕೆ ಕುರಿತು ಆರ್ಥಿಕ ಸಮೀಕ್ಷೆ ಸಲಹೆ ನೀಡಿದೆ.
ಹವಾಮಾನ ಬದಲಾವಣೆಯ ಪರಿಣಾಮದಿಂದ ರೈತರ ವಾರ್ಷಿಕ ಆದಾಯದಲ್ಲಿ ಶೇ 15–18ರಷ್ಟು ಹಾಗೂ ನೀರಾವರಿ ಇರದ ಪ್ರದೇಶದಲ್ಲಿ ಶೇ 20–25ರಷ್ಟು ಇಳಿಕೆಯಾಗುವ ಸಾಧ್ಯತೆ ಇರುವುದಾಗಿ ಹೇಳಿದೆ.
ಅಂತರ್ಜಲ ಮೂಲಗಳು ಬರಿದಾಗುತ್ತಿರುವುದು, ಹೆಚ್ಚುತ್ತಿರುವ ನೀರಿನ ಕೊರತೆಗೆ ಪರಿಹಾರವಾಗಿ ದೇಶದಲ್ಲಿ ನೀರಾವರಿ ಪ್ರದೇಶ ವಿಸ್ತರಿಸುವ ಅಗತ್ಯವಿದೆ.
ಪ್ರಸ್ತುತ ಒಟ್ಟು ಕೃಷಿ ಭೂಮಿಯಲ್ಲಿ ಶೇ 45ರಷ್ಟು ನೀರಾವರಿ ಹೊಂದಿದೆ. ನೀರಾವರಿ ಇರದ ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನ, ಚತ್ತೀಸ್ಗಢ ಹಾಗೂ ಜಾರ್ಖಂಡ್ನ ಕೆಲ ಭಾಗಗಳು ಬಹುಬೇಗ ಹವಾಮಾನ ಬದಲಾವಣೆಯ ಪರಿಣಾಮಕ್ಕೆ ಒಳಗಾಗುತ್ತಿರುವುದಾಗಿ ಪ್ರಸ್ತಾಪಿಸಿದೆ.