ಕವನ | ಸೂರ್ಯಕೀರ್ತಿ ಅವರ ಜಂಗಮರ ಅಕ್ಕ

ಹುಡುಕುತಿದ್ದಲ್ಲ ಇನ್ನೂ ಸಿಗಲಿಲ್ಲವೆ ಅಕ್ಕ!
ಆ ಗುಡ್ಡ ಈ ಗುಡ್ಡ ಮಲ್ಲಿಕಾರ್ಜುನ ಗುಡ್ಡವನೆಲ್ಲ
ತಡಕಾಡಿದ ಮೇಲೆ ಇನ್ನೂ ಸಿಗಲಿಲ್ಲವೆ ಅಕ್ಕ!
ಗಂಡನ ಬಿಟ್ಟೆ,
ಅರಮನೆಯ ಬಿಟ್ಟೆ
ಅತ್ತೆ ಮಾವರ ಬಿಟ್ಟೆ;
ತವರು ಮನೆ ಬಿಟ್ಟು ಈ ಭೂತಾನಾಥನ
ಹುಡುಕುವುದ ಇನ್ನೂ ಬಿಟ್ಟಿಲ್ಲವೆ ಅಕ್ಕ?
ಮನಸ್ಸೆಂಬ ಮರ್ಕಟವ ಬಿಟ್ಟೆ
ದೇಹದ ವಾಚಾಳಿ ಬಿಟ್ಟೆ
ಪಂಚೇಂದ್ರಿಯಗಳ ರುಚಿಯ ಬಿಟ್ಟೆ;
ಇನ್ನು ಕಪಾಲಿಯ ಹುಡುಕುವುದ
ಬಿಟ್ಟಿಲ್ಲವೇ ಅಕ್ಕ ?
ಮರಿ ಮಕ್ಕಳ ಆಸೆಯ ಬಿಟ್ಟೆ,
ಹೊಲ ಗದ್ದೆ ತೋಟಗಳ ಬಯಕೆ ಬಿಟ್ಟೆ,
ಮೈಯ ಬಟ್ಟೆಯನ್ನೇ ಬಿಟ್ಟೆ
ಆದರೂ ಈ ಮಾಯಾವಿ ಸಿದ್ಧನ
ಹುಡುಕುವುದ ಬಿಟ್ಟಿಲ್ಲವೆ ಅಕ್ಕ?
ಅನುಭವದಲ್ಲಿ ಹುಡುಕಿದೆ;
ಬಸವಣ್ಣನ ಕೇಳಿದೆ,
ಅಲ್ಲಮನ ಪ್ರಶ್ನಿಸಿದೆ
ಆದರೂ
ಸಿಗಲಿಲ್ಲವೇ ಅಕ್ಕ;
ಆ ಪಶುಪತಿನಾಥ?
ಸಿಕ್ಕವರ ಕೇಳಿದೆ,
ನದಿಯ ಮುಂದೆ ಅತ್ತು ಕರೆದೆ,
ಕಾಡುಗಳ ನಡುವೆ ಹುಡುಕಿ ಹುಡುಕಿ
ನಡೆದಾಡಿದೆ;
ಸಮುದ್ರಗಳ ಜೊತೆ ಅಲೆಗಳಂತೆ
ಆಯಾಸವ ಪಟ್ಟೆ ಆದರೂ;
ಸಿಗಲಿಲ್ಲವೆ ಅಕ್ಕ;
ಆ ರುಂಡಮಾಲ?.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.