ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವನ | ಸೂರ್ಯಕೀರ್ತಿ ಅವರ ಜಂಗಮರ ಅಕ್ಕ

Last Updated 5 ಫೆಬ್ರುವರಿ 2022, 20:30 IST
ಅಕ್ಷರ ಗಾತ್ರ

ಹುಡುಕುತಿದ್ದಲ್ಲ ಇನ್ನೂ ಸಿಗಲಿಲ್ಲವೆ ಅಕ್ಕ!
ಆ ಗುಡ್ಡ ಈ ಗುಡ್ಡ ಮಲ್ಲಿಕಾರ್ಜುನ ಗುಡ್ಡವನೆಲ್ಲ
ತಡಕಾಡಿದ ಮೇಲೆ ಇನ್ನೂ ಸಿಗಲಿಲ್ಲವೆ ಅಕ್ಕ!

ಗಂಡನ ಬಿಟ್ಟೆ,
ಅರಮನೆಯ ಬಿಟ್ಟೆ
ಅತ್ತೆ ಮಾವರ ಬಿಟ್ಟೆ;
ತವರು ಮನೆ ಬಿಟ್ಟು ಈ ಭೂತಾನಾಥನ
ಹುಡುಕುವುದ ಇನ್ನೂ ಬಿಟ್ಟಿಲ್ಲವೆ ಅಕ್ಕ?

ಮನಸ್ಸೆಂಬ ಮರ್ಕಟವ ಬಿಟ್ಟೆ
ದೇಹದ ವಾಚಾಳಿ ಬಿಟ್ಟೆ
ಪಂಚೇಂದ್ರಿಯಗಳ ರುಚಿಯ ಬಿಟ್ಟೆ;
ಇನ್ನು ಕಪಾಲಿಯ ಹುಡುಕುವುದ
ಬಿಟ್ಟಿಲ್ಲವೇ ಅಕ್ಕ ?

ಮರಿ ಮಕ್ಕಳ ಆಸೆಯ ಬಿಟ್ಟೆ,
ಹೊಲ ಗದ್ದೆ ತೋಟಗಳ ಬಯಕೆ ಬಿಟ್ಟೆ,
ಮೈಯ ಬಟ್ಟೆಯನ್ನೇ ಬಿಟ್ಟೆ
ಆದರೂ ಈ ಮಾಯಾವಿ ಸಿದ್ಧನ
ಹುಡುಕುವುದ ಬಿಟ್ಟಿಲ್ಲವೆ ಅಕ್ಕ?

ಅನುಭವದಲ್ಲಿ ಹುಡುಕಿದೆ;
ಬಸವಣ್ಣನ ಕೇಳಿದೆ,
ಅಲ್ಲಮನ ಪ್ರಶ್ನಿಸಿದೆ
ಆದರೂ
ಸಿಗಲಿಲ್ಲವೇ ಅಕ್ಕ;
ಆ ಪಶುಪತಿನಾಥ?

ಸಿಕ್ಕವರ ಕೇಳಿದೆ,
ನದಿಯ ಮುಂದೆ ಅತ್ತು ಕರೆದೆ,
ಕಾಡುಗಳ ನಡುವೆ ಹುಡುಕಿ ಹುಡುಕಿ
ನಡೆದಾಡಿದೆ;
ಸಮುದ್ರಗಳ ಜೊತೆ ಅಲೆಗಳಂತೆ
ಆಯಾಸವ ಪಟ್ಟೆ ಆದರೂ;
ಸಿಗಲಿಲ್ಲವೆ ಅಕ್ಕ;
ಆ ರುಂಡಮಾಲ?.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT