ಎಲ್ಲ ನದಿಗಳು ಬಂದು ನಿನ್ನ ಸೇರುವುದು ಇಷ್ಟವಾಗದು ನನಗೆ ಎಲ್ಲದಕ್ಕೂ ಜಾಗ ಕೊಟ್ಟು ಹೃದಯ ಖಾಲಿ ಎಂದು ಕಂಡ ಕಂಡ ಪಾದಗಳಿಗೆ ಮುತ್ತಿಕ್ಕಿ ಒದ್ದೆ ಮಾಡುವ ನಿನ್ನ ಖಯಾಲಿ ಬೇಷರತ್ತಾಗಿ ಒಪ್ಪಲಾರೆ
ಆಗಾಗ ಚಂಡಮಾರುತ ಸುನಾಮಿಯ ಹೆಸರಲ್ಲಿ ನೀ ಇದ್ದಕ್ಕಿದ್ದಲ್ಲೆ ಉಕ್ಕೇರುವುದು ಚೂರು ಸಹಿಸೆ ನಾ
ಅಕಾಲದಲ್ಲಿ ಮಳೆ ತಂದು ಗಿರಿಗಿಟ್ಲೆಯಂತೆ ಇದ್ದ ಗಿಡಗಳನ್ನೆಲ್ಲ ತಿರುಗಿಸಿ ಎಸೆದು ಮಜಾಭಾರತ ಸೃಷ್ಟಿಸುವ ನಿನ್ನ ಉಮೇದಿಯ ನಾ ಒಪ್ಪೆ
ಕಲ್ಲಂಗಡಿ ಗದ್ದೆಯಲ್ಲೆಲ್ಲ ಕರಿನೀರ ತುಂಬಿ ಕಣ್ಣೀರ ಇಡಿಸಿ ಉಪಟಳ ಕೊಟ್ಟವನ ನಂಬುವುದಾದರೂ ಹೇಗೆ
ಎತ್ತಿನ ಗಾಡಿಯಲಿ ಗೊಬ್ಬರ ತುಂಬಿ ತೀರ ಗುಂಟ ಗಾಡಿ ಹೊಡೆದು ಗದ್ದೆಗೆ ಮುಟ್ಟಿಸುವ ತಮ್ಮಾಣಿ ಕಣ್ಣರೆಪ್ಪೆ ಮಿಟುಕಿಸುವುದರೊಳಗೆ ಗಾಡಿ ಚಕ್ರದ ಸುತ್ತೆಲ್ಲ ದೊಡ್ಡ ಅಲೆ ತುಂಬಿಸಿ ತೆರೆ ಹಾಯ್ದು ಇಂವ ನಡುಗಿ ಗೊಬ್ಬರ ನೀರಿಗೆಸೆದು ಎತ್ತಿನ ಜೋಡಿ ಗುಡ್ಡಕ್ಕೆ ಹೊಡೆದು ಪ್ರಾಣ ಉಳಿಸಿಕೊಂಡಿದ್ದು ದೊಡ್ಡ ಕತೆ
ಮರೆತಿಲ್ಲ ನಾ
ತೀರಕೆ ತಂದಿಟ್ಟ ದೋಣಿ ಪಾದಕ್ಕೂ ನಿನ್ನಿರುವ ತೋರಿಸಿ ಸೆಳೆತಕೆ ಎಳೆದೊಯ್ಯವ ಭೀತಿ ಹರಿಸಿ ಸುರಿವ ಮಳೆಯಲ್ಲೆ ನಿನ್ನಾಟವ ಅರಿತು ಲಗುಬಗೆಯಲಿ ದೋಣಿಯನ್ನೆತ್ತಿ ಎತ್ತರದ ಜಾಗದಲಿ ಕಟ್ಟಿ ದೋಣಿ ಮುಳುಗುವುದನು ತಪ್ಪಿಸಿಕೊಂಡ ಕಾರ್ವಿಗಳು ಕಣ್ಣೆದುರಿರುವಾಗ ಮಳ್ಳನಂತೆ ಬಿದ್ದುಕೊಂಡ ನಿನ್ನ ನಂಬೆ ನಾ
ನನ್ನವರನ್ನೆಲ್ಲ ಕಳೆದುಕೊಂಡು ಬಳಗ ಬಿಟ್ಟು ಬೆಳೆಯಲಾರೆ ಹಾಗಾಗಿ ಪ್ರೀತಿಸಲಾರೆ ನಿನ್ನ ಬೇನೆ ಬೇಸರಿಕೆಗೆ ಮದ್ದಾಗಲಾರೆ
ಒಮ್ಮೊಮ್ಮೆ ತಣ್ಣನೆ ಹರಿದು ಮನ ಸೆಳೆದು ನೋಡಿದಷ್ಟು ತೀರದ ಬಯಕೆ ಹುಟ್ಟಿಸುವ ನೀನು ಮಗುದೊಮ್ಮೆ ಉಕ್ಕೇರಿ ದಂಡೆ ನುಂಗಿ ತೀರದ ಮನೆ ನಿನ್ನ ಆಸ್ತಿ ಎಂಬಂತೆ ಎಲ್ಲ ಬಳಿದು ಬಿಡುವ ನಿನ್ನ ದೊಡ್ಡಸ್ತನ ಸಹಿಸೆ
ಮಾತಿನ ಮಹಾನದಿಗಳನ್ನೆಲ್ಲ ನುಂಗುವ ನೀನು ಮರೆತೆ ಹೋಗದ ಕತೆ ಹಂಬಲವುಂಟು ಅದಕೆ ನಿನ್ನ ಮೊರೆತ ಕೇಳುವಷ್ಟು ಹತ್ತಿರವಿದ್ದರೂ ಬಳಿ ಹೋಗೆ ನಾ
ಅಪ್ಪಂತವನಂತೆ ಕಂಡರೂ ಎಂದೆಂದೂ ನೀ ನನಗೆ ಕರೆಕರೆಯ ಕಡಲೇ ಆಗಿರುವೆ