ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿತಾ ಪಿ.ತಾಕೊಡೆ ಬರೆದ ಕವಿತೆ: ಕಲ್ಲಾದವರು

Last Updated 19 ಜೂನ್ 2021, 19:30 IST
ಅಕ್ಷರ ಗಾತ್ರ

ಋತುಮಾನದ ಅದಲು ಬದಲಿಗೂ
ಸುಳಿ ಸುಳಿದು ಹರಿವ ನೀರಿನ ಸೆಲೆಗೂ
ಒಡ್ಡಿಕೊಂಡು ಹಿಗ್ಗಾಮುಗ್ಗ ಥಳಿಸಿಕೊಂಡರೂ
ಅಳುಕದೆ ಎದೆಯೊಡ್ಡಿ ನಿಂತ ಕಲ್ಲುಗಳನ್ನು ಕಂಡಾಗಲೆಲ್ಲ
ಕೆಲವೊಮ್ಮೆ ಹೀಗೂ ಅನಿಸಿದ್ದುಂಟು
ಇಲ್ಲೂ ಇರಬಹುದೇ...? ಅಹಲ್ಯೆಯಂತೆ ಇನ್ಯಾರೋ!

ಅದೇ ಚಿಂತನೆಯಲೆಗಳು ಭಾರವಾದಾಗಲೆಲ್ಲ
ಕಲ್ಲಿನ ದೊರಗು ಮೈಯಿಂದ ಸರಿದು
ಸವೆದು ನುಣ್ಣಗಾಗಿರುವಲ್ಲಿ ಕೂತು
ಒಂದೊಂದು ಕಲ್ಲಿನ ಬಿರುಕಿನಲಿರುವ
ನೋವಿನ ತೀವ್ರತೆಯ ಆಳವನ್ನು ಅರಿಯುತಿದ್ದೆ

ಅಲ್ಲಿ ಕ್ಷೀಣದನಿಯಲ್ಲಿ ಕೇಳಿ ಬರುವ
ನಿಟ್ಟುಸಿರಿನ ಬಿಸುಪಿನ ಏರಿಳಿತವನು ಆಲಿಸಿದಾಗ
ಇಲ್ಲ, ಇಲ್ಲಿ ಕಲ್ಲಾದವರ ಪಾಡು ಅಹಲ್ಯೆಯಂತಿಲ್ಲ
ಇರಬಹುದು ಅವಳಂತೆಯೇ ಇನ್ಯಾರೋ ನೊಂದವರು

ಹಾಗೆ ನೋಡಿದರೆ
ಯಾವ ಕಲ್ಲೂ ಖಾಲಿಯಾಗಿಲ್ಲ ಇಲ್ಲಿ
ಪ್ರೇಮ ಬರಹದ ಕೈಗೆ ಸಿಲುಕಿ ಗೀಚಿಸಿಕೊಂಡವುಗಳು
ವಿರಹದ ಬೇಗೆಯಿಂದ ನಲುಗಿದವುಗಳು
ನೆತ್ತರಿನ ಹನಿಗಳನ್ನು ತನ್ನ ಬಣ್ಣಕ್ಕೆ ಹೊಂದಿಸಿಕೊಂಡವುಗಳು
ಯಾರದೋ ಆತ್ಮಾಹುತಿಗೆ ಪಾದವೂರಲು
ಕೊಟ್ಟ ಅವಕಾಶದ ಸಲುವಾಗಿ ಪರಿತಪಿಸುತಿರುವ ಕೆಲವೊಂದು

ಇಲ್ಲಿ ಇರುವುದೆಲ್ಲವೂ ಹೀಗೆಯೇ
ಯಾರ ವ್ಯಾಮೋಹಕೋ ಕಡು ನಿಂದನೆಗೋ
ಒಳಗಾಗಿರಬೇಕು
ಮೋಸದ ಅಂತರಂಗವನ್ನು ಅರಿಯಲಾಗದೆ
ಅಹಲ್ಯೆಯಂತೆ ಕಳೆದು ಹೋಗಿರಬೇಕು
ಕಲ್ಲಾಗಿಸುವವರ ಮುಂದೆ
ರಾಮನಂಥವರ ಸೌಮ್ಯಭಾವ ಸ್ಪರ್ಶವಿಲ್ಲದೆ
ಮತ್ತೆದ್ದು ಬಾರದಂತೆ ಕಲ್ಲಾಗಿರಬೇಕು

ಕಲ್ಲಾಗಿದ್ದು ಅಹಲ್ಯೆಯೋ ಅವಳ ಮನಸ್ಸೋ...!
ನಾನೂ ಬರುತ್ತೇನೆ ಎಂದಿನಂತೆ
ಬಂದು ಖಾಲಿ ಕಲ್ಲುಗಳ ಹುಡುಕುತ್ತೇನೆ
ಕಲ್ಲಾಗುವುದಕ್ಕಲ್ಲ...!
ಎಲ್ಲಿಗೂ ಸಲ್ಲದ ಮನಸ್ಸಿಗೆ ಒಲ್ಲದವುಗಳನು
ಮತ್ತೆ ಕಾಣಿಸದಂತೆ
ಹಗಲು ಮುಗಿಯುವ ಮೊದಲು ಅಳಿಸಿಬಿಡಲು

ಸಾವಿರಾರು ವರ್ಷ ಕಲ್ಲಾಗಿ ಕಾದಿರುವ ಅಹಲ್ಯೆಯಂತೆ
ಕಲ್ಲಾಗಬಾರದು ಎಂದೂ
ಹೊರಗಿನ ಊನವನು ಗೆದ್ದುಕೊಂಡು
ನೋವು ನಲಿವುಗಳ ಹಾದಿಯನು ಇದ್ದಂತೆ ಒಪ್ಪಿಕೊಂಡು
ಪ್ರೀತಿಯ ಜೋಕಾಲಿಯನು ಜೀಕಬೇಕು
ಒಳಗಿನ ಕಶ್ಮಲಗಳನು ಅಂದಂದಿಗೆ ತೊಳೆದು
ನಿತ್ಯ ನಿರ್ಮಲವಾಗಬೇಕು ಹರಿವ ತೊರೆಯಂತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT