ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ: ಅಲೆಮಾರಿಯ ಸ್ವಗತ

Last Updated 12 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಓಹ್ ಮಣ್ಣು ಒಡಲುಗಳು ಪಾತ್ರೆಗಳೇ ನಿಚ್ಚಳ,
ಮೋಹ ಪಡದಿರು
ಹೌದಲ್ಲ! ಮತ್ತೇಕೆ?
ಹತ್ತಿರ ಸುಳಿಯದಿರು ಎಂಬೋ ಅವಳ ಅಮಾನುಷ ಹೇಳಿಕೆ!
ಎಷ್ಟು ಸರಿ ನಂಬಿಕೆ?
ಅಪ್ರಾಕೃತಿಕ ಪರಿಧಿಯ ವ್ಯಾಪ್ತಿಯೇ
ಸಮಾಪ್ತಿಗೊಂಡಿದೆ

ಕರುಳು ಹಿಂಡುವ ಕಡು ದುಃಖಕೆ
ಜಿನುಗಿದ ಕಂಬನಿ ಹನಿ ಮತ್ತು ವಿಸ್ಕಿಯ ಬೆರಕೆಯ ನಶೆ
ಬಾಯಲಿ ಹೊಮ್ಮಿದ ವಿಸ್ಕಿ ಹಬೆಯ ಘಮಟು
ಧಮನಿಗಳಲಿ ಹರಿದಾಡೋ
ದ್ರಾಕ್ಷಿ ಹುಳಿ
ಕುದಿಕುದಿದು ಹೊಮ್ಮಿದ ಅಮಲಿನ ಧೂಮ ಕರಗಿತು
ಕಾಮದಲಿ
ಮಾಸಿದ ಗೆರೆಗಳು ಬಣ್ಣ ತುಂಬಲು
ಹವಣಿಸಿ ಕಾದಿವೆ
ಕಲಾವಿದ ಮಾತ್ರ ನಾಪತ್ತೆ!

ಎದೆಯಲಿ ಕೊಳೆತ ಅವಳ ಒಲವ ಹುಳಿ ದ್ರಾಕ್ಷಿಯ ವೈನ್
ಬಟ್ಟಲು ಭರ್ತಿ ತುಂಬಾ ಕಮಟು ಸವಿಯು
ಹೇಗೆ ಕುಡಿಯಲಿ?
ಅನಾಥ ನಾನು. ಮೂಗನೂ ನಿಜ
ನಾಲುಗೆ ಕತ್ತರಿಸಲಾಗಿದೆ

ಹಕ್ಕಿಯ ಸೆರೆ ಹಿಡಿಯಲು
ಕಾಳು ಹಾಕುವ ಶಿಕಾರಿ, ಜಾಗ್ರತೆ!
ಬೀಸಿರುವನು ಬಹುದೊಡ್ಡ ಬಲೆಯ ಜಾಲವ

ಎದೆಯಲಿ ಒಲವ ಗೂಡನು ಹೆಣೆದ ಹೆಣ್ಣು ಹಕ್ಕಿ ನಿರಾಳವಲ್ಲ
ಅನ್ನ-ದಾಹ ಅರಸಿ ಹೋದ ಗಂಡು ಹಕ್ಕಿಗಾಗಿ ತಾಳ್ಮೆಯೂ ಇಲ್ಲ

ಓಹ್ ದೇವರೆ...
ಗೊರಲು ಕಟ್ಟಿದ ಮಣ್ಣಿನ ಹುತ್ತಕೆ ಹಾವು ಹೊಂಚು ಹಾಕಿ
ಕುಳಿತಿದೆ ಏಣಿಯಾಟಕೆ
ಕಾಲ ಮತ್ತು ಅವಕಾಶಗಳ ಕಲ್ಲೆದೆಯ ಭಾರ ಹೊತ್ತು ಅಲೆವ ಅಲೆಮಾರಿ ಭಿಕ್ಷುಕ ನಾನು

ಕಂಬನಿ ಹನಿಯ ಉಪ್ಪು ರುಚಿ ಕರಗಿ ಆವಿಯಾಯಿತು
ವಿಸ್ಕಿಯ ಒಗರು ಕಹಿ ಕಳೆದು
ಅಮಲಿಳಿಯಿತು

ಅವಳ ಗದರು ನುಡಿ ಮಾತ್ರ ಇನ್ನೂ ಹಾಗೆಯೇ ಇದೆ
ಹತ್ತಿರ ಶುಳಿಯಬೇಡ ಎಂಬೋ
ಅಮಾನುಷ ಹೇಳಿಕೆ!
ಇರುವೆ ದೂರ
ನಾನೊಬ್ಬ ಅಲೆಮಾರಿ ಅನಾಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT