ನಿನ್ನ ನೆನೆದರೆ, ನಾನು ಒರಟು ಶಿಲೆಯೆನಿಸುತ್ತದೆ
ಒಳಗೊಳಗೆ ಅಳುಕು ಅಲುಗಾಡಿ ನಾಚುತ್ತೇನೆ
ಹೇಗೆ ಸಾಧ್ಯವಾಯಿತು ನಿನಗೆ ಆ ಪ್ರೀತಿ, ಆ ಶಾಂತಿ?
ಹೀಗೆ ಈಗಿನ ಹಾಗೆ ಇರಲಿಲ್ಲವೆ ಆ ನಿನ್ನ ಕಾಲ?
ಇಲ್ಲ ಇದ್ದಿರಲಾರದು ಈ ಹೊಗೆ, ಈ ಹಗೆ, ಈ ದಗೆ
ನಂಬಿಸಿ ಕರುಳ ಕೊರಳ ಕೊಯ್ವ ಸ್ವಾರ್ಥದ ಈ ಬಗೆ
ಪುರುಷೋತ್ತಮ ರಾಮನೂ ದಾಳವಾಗುತ್ತಾನೆ ಇಲ್ಲಿ
ಶಕುನಿ ಸತ್ಯ ಹರಿಶ್ಚಂದ್ರನ ಅಪರಾವತಾರವಾಗುತ್ತಾನೆ
ಬೀದಿ ಬೀದಿಗಳಲ್ಲಿ, ಸಂದುಗೊಂದುಗಳಲ್ಲಿ ಅವನದೆ ಭಜನೆ
ಚಪ್ಪಾಳೆ, ಕೇಕೆ, ಜ್ಯೋತಿ, ಜಾಗಟೆ, ಶಂಖ, ಪಂಡಿತರ ಪರಾಕು!
ಕೆಸರ ಕಾಸಾರ, ಕಣ್ಣು ಕುರುಡಾಗಿಸುವ ಜವುಗು ಜೊಂಡು