ಬೆಂಗಳೂರು:ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಅಖಿಲ ಭಾರತ ಮಜ್ಲಿಸ್– ಎ– ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಕ್ಕೆ ನಿಲ್ಲಲಿದೆ.
ಹೈದರಾಬಾದ್ನಲ್ಲಿ ಸೋಮವಾರ ಮಾತನಾಡಿದ ಒವೈಸಿ ಈ ವಿಷಯ ತಿಳಿಸಿದ್ದಾರೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಒವೈಸಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
‘ಜೆಡಿಎಸ್ 113 ಸ್ಥಾನದ ಗುರಿ ಮುಟ್ಟಲು ಒವೈಸಿ, ಟಿಎಸ್ಆರ್, ಬಿಎಸ್ಪಿ ಪಕ್ಷಗಳ ಬೆಂಬಲ ಸಹಾಯ ಮಾಡುತ್ತದೆ. ಪ್ರಾದೇಶಿಕ ಪಕ್ಷಗಳು ಅಧಿಕಾರ ಹಿಡಿಯಬೇಕು ಎಂದು ಈ ಪಕ್ಷಗಳು ಭಾವಿಸಿವೆ’ ಎಂದು ಹೇಳಿದ್ದಾರೆ.
‘ಮುಸ್ಲಿಮರಿಗೆ ಭಾವನಾತ್ಮಕವಾಗಿ ಮೋಸ ಮಾಡುವ ಕೆಲಸದಲ್ಲಿ ಕಾಂಗ್ರೆಸ್ ತೊಡಗಿದೆ. ಆದರೆ ಜೆಡಿಎಸ್ ಮುಸ್ಲಿಮರನ್ನು ಸಹೋದರರಂತೆ ನೋಡಿದೆ. ಇದೇ ಕಾರಣಕ್ಕೆ ಒವೈಸಿ ನಮ್ಮ ಪರ ಬಂದಿದ್ದಾರೆ’ ಎಂದು ಕುಮಾರಸ್ವಾಮಿ ಮೈಸೂರಿನಲ್ಲಿ ಹೇಳಿದ್ದಾರೆ.
ಮುಸ್ಲಿಂ ಮತಗಳು ಕಾಂಗ್ರೆಸ್ ಪರ ಧ್ರುವೀಕರಣಗೊಳ್ಳುವುದನ್ನು ತಪ್ಪಿಸಬೇಕು. ಜೆಡಿಎಸ್ಗೆ ಮುಸ್ಲಿಂ ಮತಗಳು ಹೋಗುವುದರಿಂದ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ತಪ್ಪುತ್ತದೆ ಎಂದು ಒವೈಸಿ ಟ್ವೀಟ್ ಮಾಡಿದ್ದಾರೆ.
‘ಸಾಕಷ್ಟು ವಿಚಾರ ಮಾಡಿಯೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನಮ್ಮ ಬೆಂಬಲದಿಂದ ಜೆಡಿಎಸ್ ಅತ್ಯಧಿಕ ಸ್ಥಾನಗಳನ್ನು ಗೆಲ್ಲುತ್ತದೆ. ಇದ
ರಿಂದ ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಟ್ಟಿರುವ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು. ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ಆಡಳಿತ ನಡೆಯಬೇಕು’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘ಎರಡೂ ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ಆದ್ದರಿಂದ ಕರ್ನಾಟಕದ ಜನರು ಜೆಡಿಎಸ್ ಅನ್ನು ಬೆಂಬಲಿಸಲು ತೀರ್ಮಾನಿಸಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ, ಜೆಡಿಎಸ್ ಆಹ್ವಾನಿಸಿದರೆ ಪ್ರಚಾರದಲ್ಲಿ ಭಾಗವಹಿಸಲು ಸಿದ್ಧ’ ಎಂದೂ ಅವರು ಹೇಳಿದ್ದಾರೆ.