ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಕಾದರ ಮಂದೆಯ ಕಥೆವ್ಯಥೆ

Last Updated 26 ಜನವರಿ 2019, 19:30 IST
ಅಕ್ಷರ ಗಾತ್ರ

ಸುಮಾರು ನೂರು ಮನೆಗಳಿದ್ದ ಗ್ರಾಮ. ಹೆಚ್ಚಿನ ಮನೆಗಳು ತೆಂಗಿನಗರಿಗಳಿಂದ ನಿರ್ಮಿಸಿದವು. ಒಂದೇ ಸಮುದಾಯದ ಜನರು ಇಲ್ಲಿ ವಾಸಿಸುತ್ತಿದ್ದರು. ಈ ಗ್ರಾಮದ ಜನರು ಏನೇ ಕೆಲಸ ಮಾಡಿದರೂ ದೇವರ ಅನುಮತಿ ಕೆಳಬೇಕಿತ್ತು. ಗುಡಿಯಲ್ಲಿರುವ ದೇವರಿಗೆ ನೀರಿನಲ್ಲಿ ಹೂವುಗಳನ್ನು ಅದ್ದಿ ಅಂಟಿಸುತ್ತಿದ್ದರು. ನಂತರ ಪೂಜೆ ಸಲ್ಲಿಸಿ, ದೇವರ ಎದುರಿಗೆ ಕುಳಿತು ತಾವು ಮಾಡುವ ಕೆಲಸಕ್ಕೆ ಅಪ್ಪಣೆ ಕೇಳುತ್ತಿದ್ದರು. ಆದ್ದರಿಂದಲೇ ಎನೋ ಈ ಊರು ದೇವರಹಟ್ಟಿ ಎಂದೇ ಹೆಸರಾಗಿದೆ.

ಈ ಗ್ರಾಮದಲ್ಲಿ ಮುಟ್ಟಾದ ಪ್ರತಿಯೊಬ್ಬ ಹೆಣ್ಣು, ಮೂರು ದಿನಗಳ ಕಾಲ ಊರಿನ ಹೊರಗೆ ಇರಬೇಕಿತ್ತು. ಇದಕ್ಕಾಗಿಯೇ ಊರಿನ ಹೊರಭಾಗದಲ್ಲಿ ಒಂದು ಗುಡಿಸಲನ್ನು ನಿರ್ಮಾಣ ಮಾಡಲಾಗಿತ್ತು. ಈ ಮನೆಯನ್ನು ಊರಿನ ಜನರೆಲ್ಲಾ ‘ಹೊರಕಾದರ ಮಂದೆ’ ಎಂದು ಕರೆಯುತ್ತಿದ್ದರು. ಈ ಮನೆಯ ಅಕ್ಕಪಕ್ಕ ಹಾಗೂ ಹಿಂಭಾಗದಲ್ಲಿ ಮುಳ್ಳಿನ ಗಿಡ, ಮರಗಳು ಬೆಳೆದು ನಿಂತಿದ್ದವು. ಆ ಗಿಡ, ಮರಗಳ ಕೆಳಗೆ ಎಷ್ಟೋ ದಿನಗಳಿಂದ ಬಿದ್ದಿದ್ದ ಒಣಗಿದ ರೆಂಬೆ, ಕೊಂಬೆ, ಎಲೆಗಳ ರಾಶಿಯಿತ್ತು. ಇದಕ್ಕೆ ಹೊಂದಿಕೊಂಡು ಅಗಲೊ ಈಗಲೊ ಕೆಳಗೆ ಬೀಳುವಂತಿತ್ತು ಆ ಹೂರಕಾದರ ಮಂದೆ. ಈ ಮನೆಯ ನೆರಳಾಗಲಿ ಅಥವಾ ಹೆಂಗಸರ ನೆರಳಾಗಲಿ ಹಟ್ಟಿಯ ಗಂಡಸರ ಮೇಲೆ ಬೀಳಬಾರದಾಗಿತ್ತು. ಅದಕ್ಕಾಗಿ ಆ ಮನೆಯ ಮುಂದೆ ಸಾಲಾಗಿ ಕಲ್ಲುಗಳನ್ನು ಹಾಕಲಾಗಿತ್ತು. ಈ ಕಲ್ಲುಗಳನ್ನು ದಾಟಿ ಹೆಂಗಸರು ಮೂರು ದಿನಗಳ ಕಾಲ ಊರಿನ ಒಳಗೆ ಬರುವಂತಿರಲ್ಲಿಲ್ಲ. ಬಂದರೆ ಗ್ರಾಮ ದೇವರ ಶಿಕ್ಷೆಗೆ ಗುರಿಯಾಗಬೇಕಿತ್ತು. ಆದ್ದರಿಂದ ಊರಿನ ಹೆಣ್ಣುಮಕ್ಕಳಿಗೆ ದೇವರು ಎಂದರೆ ಭಯ.

ಇಂತಹ ಗ್ರಾಮದಲ್ಲಿ ಕೆಂಚಮ್ಮ ಎಂಬ ಮಹಿಳೆ ತನ್ನ ಎರಡು ಮುದ್ದಾದ ಮಕ್ಕಳು ಮತ್ತು ಗಂಡ ದಾಸಣ್ಣನ ಜೊತೆಯಲ್ಲಿ ಜೀವನ ನಡೆಸುತ್ತಿದ್ದಳು. ಇರುವ ಒಂದು ಎಕರೆ ಜಮೀನಿನಲ್ಲಿ ಕೂಲಿಗಾರರನ್ನು ಇಟ್ಟುಕೊಳ್ಳದೇ ತಾವೇ ಎಲ್ಲಾ ಕೆಲಸ ಮಾಡಿಕೊಳ್ಳುತ್ತಿದ್ದರು. ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂದು ಇಬ್ಬರೂ ಇನ್ನಿಲ್ಲದ ಕಷ್ಟಪಡುತ್ತಿದ್ದರು.

ಒಂದು ದಿನ ಬೆಳಿಗ್ಗೆ ಕೆಂಚಮ್ಮ ಬೇಗ ಅಡುಗೆ ಮಾಡಿ ಹೊಲಕ್ಕೆ ಹೋಗಲು ಸಿದ್ಧಳಾಗುತ್ತಿದ್ದಳು. ಇದ್ದಕ್ಕಿದ್ದಂತೆ ಅವಳಿಗೆ ಮುಟ್ಟಾಗುವ ಸೂಚನೆ ಅರಿವಿಗೆ ಬಂತು. ಅ ಕ್ಷಣ ಕೈಯಲ್ಲಿದ್ದ ಪಾತ್ರೆಯನ್ನು ಅಲ್ಲಿಯೇ ಕೆಳಗಿಟ್ಟು, ಹೊರಕಾದರ ಮಂದೆಯ ಕಡೆಗೆ ಹೊರಟಳು. ಸ್ವಲ್ಪ ಸಮಯದ ನಂತರ ಗಂಡ ದಾಸಣ್ಣನಿಗೆ ಹೆಂಡತಿ ಮುಟ್ಟಾದ ವಿಷಯ ತಿಳಿಯಿತು. ದಾಸಣ್ಣನಿಗೆ ಚಿಂತೆ ಹುಟ್ಟಿಕೊಂಡಿತು. ಹೊಲದಲ್ಲಿ ಹರಡಿದ್ದ ಜೋಳದ ತೆನೆಯನ್ನು ಒಂದೆಡೆ ಹಾಕಬೇಕಿತ್ತು. ಮಳೆಗಾಲವಾದ್ದರಿಂದ ಎಲ್ಲಿ ಜೋಳದ ತೆನೆ ನೆನೆದು ಹಾಳಾಗುತ್ತದೋ ಎಂಬ ಭಯ ಅವನದ್ದು.

ಆತ ಒಂದು ನಿರ್ಧಾರ ತೆಗೆದುಕೊಂಡನು. ಮಕ್ಕಳಿಗೆ ಊಟಕ್ಕೆ ಬಡಿಸಿ ಶಾಲೆಗೆ ಕಳಿಸಿದನು. ತಾನೂ ಊಟ ಮಾಡಿ ಹೊರಕಾದರ ಮಂದೆಯ ಕಡೆಗೆ ಹೊರಟನು. ದೂರದಲ್ಲಿಯೆ ನಿಂತು ಹೆಂಡತಿಗೆ ಹೊಲಕ್ಕೆ ಬರುವಂತೆ ಕೂಗಿ ಹೇಳಿದನು. ಮನೆಗೆ ಬಂದವನೇ ಒಂದು ಪಾತ್ರೆಯಲ್ಲಿ ಊಟ ತುಂಬಿಕೊಂಡು ಪಕ್ಕದ ಮನೆಯ ಮಡ್ನಕ್ಕನ ಕೈಗಿಟ್ಟು ತನ್ನ ಹೆಂಡತಿಗೆ ಹಾಕಿಬರುವಂತೆ ಕೇಳಿಕೊಂಡನು. ತಾನು ಮುಟ್ಟಾದಾಗ ಕೆಂಚಮ್ಮ ಊಟ ಹಾಕುತ್ತಿದ್ದುದರಿಂದ ಇಲ್ಲ ಎನ್ನದೆ ತೆಗೆದುಕೊಂಡು ಹೋದಳು. ಕೆಂಚಮ್ಮ ಊಟ ಮುಗಿಸಿಕೊಂಡು ಮಂದೆಯಿಂದ ತನ್ನ ಜಮೀನಿನತ್ತ ಹೊರಟಳು.

ಜಮೀನು ಊರಿನಿಂದ ಸುಮಾರು ಎರಡು ಕಿಲೋಮೀಟರ್ ದೂರವಿತ್ತು. ಇವಳು ಹೋಗುತ್ತಿದ್ದ ದಾರಿಯಲ್ಲಿ ಜನರು ಓಡಾಡುತ್ತಿದ್ದುದರಿಂದ ಯಾರ ಮೇಲೂ ಇವಳ ನೆರಳು ಬೀಳಬಾರದಾಗಿತ್ತು. ಆದ್ದರಿಂದ ರಸ್ತೆಯ ದೂರದ ಬದಿಯಲ್ಲಿ ಸಾಗುತ್ತಿದ್ದಳು. ಮುಳ್ಳನ್ನು ತುಳಿದು ನೋವನ್ನು ಸಹಿಸಿಕೊಳ್ಳುತ್ತ ತಮ್ಮ ಜಮೀನನ್ನು ಸೇರಿದಳು. ಅದಾಗಲೇ ಗಂಡ ದಾಸಣ್ಣ ಜೋಳದ ತೆನೆಯನ್ನು ಒಂದೆಡೆ ಹಾಕುತ್ತಿದ್ದನು.

ಕೆಂಚಮ್ಮ ಸ್ವಲ್ಪ ದೂರದಲ್ಲಿಯೇ ದಾಸಣ್ಣನ ಮೇಲೆ ನೆರಳು ಬೀಳದಂತೆ ತೆನೆಯನ್ನು ಒಂದೆಡೆ ಹಾಕುತ್ತಿದ್ದಳು. ಇಬ್ಬರೂ ಜೋಳದ ತೆನೆಯನ್ನು ಎರಡು ಗುಡ್ಡೆಗಳಾಗಿ ಸೇರಿಸಿದರು. ಕೆಂಚಮ್ಮ ಜೋಳದ ತೆನೆಯನ್ನು ಮುಟ್ಟಿಕೊಂಡು ಒಂದೆಡೆ ಹಾಕಿದ್ದರಿಂದ ಅಲ್ಲಿಯೇ ಚಿಲುಮೆಯಲ್ಲಿದ್ದ ನೀರನ್ನು ತೆಗೆದುಕೊಂಡು ಚಿಮುಕಿಸಿ ಸೂತಕ ತೆಗೆದನು. ನಂತರ ಮಳೆಯಲ್ಲಿ ನೆನೆಯದಂತೆ ಪ್ಲಾಸ್ಟಿಕ್ ಹೊದಿಸಿದನು. ಅಷ್ಟೊತ್ತಿಗಾಗಲೇ ಮೋಡ ಕಪ್ಪಾಗುತ್ತಿತ್ತು. ಮಳೆಯ ಸೂಚನೆಯನ್ನರಿತ ಇಬ್ಬರೂ ಮನೆಯ ಕಡೆಗೆ ಹೋಗಲು ಸಿದ್ಧರಾದರು.

ಜೋರಾಗಿ ಹೆಜ್ಜೆ ಹಾಕುತ್ತ ಅರ್ಧ ದಾರಿಯನ್ನು ಕ್ರಮಿಸಿದ್ದರು. ಮಳೆಯ ಹನಿಗಳು ರಭಸವಾಗಿ ಅಪ್ಪಳಿಸತೊಡಗಿದವು. ಗುಡುಗು, ಸಿಡಿಲಿನ ಆರ್ಭಟ ಹೆಚ್ಚಾಯಿತು. ದಾಸಣ್ಣ ಹೊಲದಲ್ಲಿ ವಾಸಮಾಡುತ್ತಿದ್ದ ತಿಮ್ಮಣ್ಣನ ಮನೆಯನ್ನು ಸೇರಿಕೊಂಡ. ಆದರೆ ಕೆಂಚಮ್ಮ ಜನರು ವಾಸಮಾಡುವ ಯಾವ ಸ್ಥಳಕ್ಕೂ ಹೋಗುವಂತಿಲ್ಲ. ಹೊರಕಾದರ ಮಂದೆಗೆ ಹೋಗಬೇಕಿತ್ತು. ಅಲ್ಲಿಗೆ ಹೋಗಲು ಇನ್ನೂ ದೂರ ದಾರಿ ಕ್ರಮಿಸಬೇಕಿತ್ತು.

ಮಳೆಯ ಹನಿಗಳ ರಭಸವಾಗಿ ಬೀಳುತ್ತಿದ್ದುದಕ್ಕೋ ಗುಡುಗು, ಸಿಡಿಲಿನ ಭಯಕ್ಕೊ ಸೆರಗನ್ನು ತಲೆಯ ಮೇಲೆ ಹಾಕಿಕೊಂಡು ಕೆಂಚಮ್ಮ ಅಲ್ಲಿಯೇ ಪಕ್ಕದಲ್ಲಿದ್ದ ದೊಡ್ಡ ಮರದ ಬುಡದಲ್ಲಿ ಕುಳಿತಳು. ಮಳೆ ಕಡಿಮೆಯಾಗುತ್ತಿರಲಿಲ್ಲ. ಇನ್ನೂ ವೇಗ ಪಡೆದುಕೊಳ್ಳುತ್ತಿತ್ತು. ಜೊತೆಗೆ ಗಾಳಿಯೂ ಬಿಸಲು ಪ್ರಾರಂಭಿಸಿತು. ಕೆಂಚಮ್ಮ ಇಷ್ಟೆಲ್ಲಾ ಭಯ ಹೊತ್ತು ನಡುಗುತ್ತ ಕುಳಿತಿರಬೇಕಾದರೆ ಸಿಡಿಲು ಆ ಮರಕ್ಕೆ ಬಡಿಯಿತು. ಮರದ ಕೊಂಬೆಗಳು ಸೀಳಿಕೊಂಡು ಮುರಿದು ಕೆಂಚಮ್ಮಳ ಮೇಲೆ ಬಿದ್ದವು. ಆ ಮಳೆ, ಗಾಳಿ, ಗುಡುಗು- ಸಿಡಿಲಿನ ಶಬ್ದದೊಟ್ಟಿಗೆ ಕೆಂಚಮ್ಮ ಕಿರುಚಿದ್ದೂ ಸೇರಿಕೊಂಡಿತು.

ಸುಮಾರು ಒಂದು ತಾಸು ಕಳೆದ ನಂತರ ಮಳೆಯ ಆರ್ಭಟ ನಿಂತಿತ್ತು. ಆ ಮನೆಯಿಂದ ಹೊರಗೆ ಬಂದು ಹೆಂಡತಿಯನ್ನು ಜೋರಾಗಿ ಕೂಗಿದನು. ಯಾವ ಕಡೆಯಿಂದಲೂ ಶಬ್ದ ಬರಲಿಲ್ಲ. ಹೆಜ್ಜೆ ಹಾಕುತ್ತಾ, ಮುಂದೆ ಸಾಗುತ್ತಾ, ಹೋಗುತ್ತಿರಬೇಕಾದರೆ ಮರವೊಂದರ ರೆಂಬೆ- ಕೊಂಬೆಗಳು ಮುರಿದು ನೆಲಕ್ಕೆ ಬಿದ್ದಿರುವುದು ಕಂಡಿತು. ಹತ್ತಿರ ಹೋಗುತ್ತಿದ್ದಂತೆ ಹೆಂಡತಿಯ ಸೀರೆಯ ಭಾಗ ದೊಡ್ಡ ಕೊಂಬೆಯ ಕೆಳಗೆ ಕಾಣಿಸಿತು. ನಿಧಾನವಾಗಿ ನೆಲಕ್ಕೆ ಕುಸಿದು ಬಿದ್ದನು. ಇಡೀ ಪರಿಸರ ಮೌನವಾಯಿತು. ಕೆಂಚಮ್ಮ ಹೊರಕಾದರ ಮಂದೆಯಿಂದ ಶಾಶ್ವತವಾಗಿ ದೂರವಾದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT