ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರದ ಪಂಜರ

ಅಕ್ಷರ ಗಾತ್ರ

ಆಕೆ ಚೆಂದುಳ್ಳಿ ಚೆಲುವೆಯಂಥಾ ರಾಜಕುಮಾರಿ. ಅರಮನೆಯೊಳಗೆ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಸುಕುಮಾರಿ. ಒಮ್ಮೆ ಅವಳು ವಿಹಾರ ಮಾಡುತ್ತಾ ಅರಮನೆಯ ಉದ್ಯಾನವನದಲ್ಲಿದ್ದಾಗ ಅವಳಷ್ಟೇ ಚೆಂದವಾದ ಗಿಳಿಯೊಂದು ಅವಳ ಕಣ್ಣಿಗೆ ಬಿತ್ತು. ಖುಷಿಯಿಂದ ಗಿಳಿಯ ಅಂದ ಚೆಂದವನ್ನು ನೋಡುತ್ತಾ ಅವಳು ನಿಂತಲ್ಲೇ ನಿಂತಳು. ಹೀಗೆ ನಿಂತ ರಾಜಕುಮಾರಿಯನ್ನು ‘ಏನ್ ರಾಜ್ಕುಮಾರಿ ಚೆನ್ನಾಗಿದ್ದೀರಾ’ ಎಂದು ಆ ಗಿಳಿ ಪ್ರಶ್ನಿಸಿತು. ಗಿಳಿ ಮಾತನಾಡುವುದನ್ನು ಕಂಡು ರಾಜಕುಮಾರಿಗೆ ಅಚ್ಚರಿಯಾಯಿತು.

ಆ ಗಿಳಿಯ ಮಾತಿಗೆ ಮನಸೋತು ಒಂದು ಕ್ಷಣ ಬಿಟ್ಟ ಕಣ್ಣು ಬಿಟ್ಟಂತೆಯೇ ಮೌನವಾದಳು ರಾಜಕುಮಾರಿ. ಮಾತನಾಡುವ ಗಿಳಿಯನ್ನು ದಿಟ್ಟಿಸಿದಳು. ಮೌನವಾಗಿ ತನ್ನನ್ನೇ ನೋಡುತ್ತಿದ್ದ ರಾಜಕುಮಾರಿಯನ್ನು ಕಂಡು ‘ಏನ್ ರಾಜ್ಕುಮಾರಿ ಚೆನ್ನಾಗಿದ್ದೀರಾ ತಾನೆ’ ಎಂದು ಗಿಳಿ ಮತ್ತೆ ಕೇಳಿತು.

ಆಗ ರಾಜಕುಮಾರಿ ತನ್ನ ಸುಕೋಮಲ ಕೈಗಳಿಂದ ಆ ಗಿಳಿಯನ್ನು ಹಿಡಿದು ಮುದ್ದಿಸುತ್ತಾ ‘ಏನ್ ಚೆಂದಾನೋ ಏನೋ ನನಗಂತೂ ಗೊತ್ತಿಲ್ಲ ಗಿಳಿ. ಅದೇ ಅರಮನೆ, ಅದೇ ನಮ್ಮಪ್ಪ ಮಹಾರಾಜ, ಅದೇ ನಮ್ಮಮ್ಮ ಮಹಾರಾಣಿ, ಅದೇ ಸಿಂಹಾಸನ, ಅದೇ ದರ್ಬಾರು, ಅದೇ ಸೈನಿಕರು, ಅದೇ ಸೇವಕ-ಸೇವಕಿಯರು, ಅದೇ ಸಖಿಯರು, ಅದೇ ಮುಖಗಳು, ಅದೇ ಸ್ಥಳಗಳು, ಅದೇ ರಾಜೋಪಚಾರದ ತಿಂಡಿ ತಿನಿಸುಗಳು, ನನಗಂತೂ ಅವನ್ನೇ ನೋಡಿ ನೋಡಿ ಬೇಜಾರಾಗಿ ಹೋಗಿದೆ’ ಎಂದು ರಾಜಕುಮಾರಿ ಬೇಸರದಿಂದ ಹೇಳಿದಳು. ಅವಳ ಬೇಸರದ ಮಾತು ಕೇಳಿದ ಗಿಳಿ ‘ಅಯ್ಯಯ್ಯೋ, ಮಾರಾಜ್ರ ಒಬ್ಳೇ ಮಗ್ಳು ನೀವು ರಾಜ್ಕುಮಾರಿ. ಬಾಳ ಸುಖವಾಗಿದ್ದೀರಾ ಅನ್ಕೊಂಡಿದ್ದೆ. ನಿಮ್ಗೂ ಇಷ್ಟೊಂದ್ ಬೇಸ್ರನಾ’ ಎಂದು ಅನುಕಂಪ ತೋರಿಸಿತು ಗಿಳಿ.

‘ನಿಮ್ಗೆ ಬೇಸ್ರ ಕಳಿಯಕ್ಕೆ ನಾನು ದಿನಾಲು ಒಂದು ಕಥೆ ಹೇಳ್ಕೊಡ್ತೀನಿ ಸರಿನಾ’ ಅಂತ ರಾಜಕುಮಾರಿಗೆ ಗಿಳಿ ಬಹು ಪ್ರೀತಿಯಿಂದ ಮಾತು ಕೊಟ್ಟಿತು.

ಅದರಂತೆ ಗಿಳಿ ಉದ್ಯಾನವನಕ್ಕೆ ಪ್ರತಿದಿನ ಬಂದು ರಾಜಕುಮಾರಿಯೊಡನೆ ಮಾತನಾಡುತ್ತಾ ಕಥೆ ಹೇಳುತ್ತಿತ್ತು. ಇದರಿಂದ ರಾಜಕುಮಾರಿಯ ಬೇಸರ ದೂರವಾಗಿ ಆಕೆ ಸಂತಸ ಪಡಲು ಆರಂಭಿಸಿದಳು. ರಾಜ–ರಾಣಿಯರ ಕಥೆ, ನರಿ-ಸಿಂಹಗಳ ಕಥೆ, ಕಾಗಕ್ಕ-ಗೂಬಕ್ಕನ ಕಥೆ, ಕಳ್ಳ-ಸುಳ್ಳರ ಕಥೆ, ಬಡವ-ಬಲ್ಲಿದರ ಕಥೆ, ಒಳ್ಳೆಯವರು-ಕೆಟ್ಟವರ ಕಥೆಗಳನ್ನೆಲ್ಲ ಹೇಳುತ್ತ ಮಾತನಾಡುವ ಗಿಳಿಯು ರಾಜಕುಮಾರಿಗೆ ಬಹಳ ಆತ್ಮೀಯವಾಯಿತು. ಹೀಗೆ ಗಿಳಿ ಮತ್ತು ರಾಜಕುಮಾರಿಯ ಸ್ನೇಹ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಾ ಹೋಯಿತು. ಕೊನೆಗೆ ಬಿಡಿಸಲಾಗದ ಬಂಧವಾಯಿತು. ಆ ಗಿಳಿ ಬರುವುದು ಒಂದು ಕ್ಷಣ ತಡವಾಯಿತೆಂದರೆ ರಾಜಕುಮಾರಿ ತಳಮಳ ಪಡುತ್ತಿದ್ದಳು. ಅಷ್ಟು ಗಾಢವಾಗಿ ಅವಳು ಗಿಳಿಯನ್ನು ಹಚ್ಚಿಕೊಂಡಿದ್ದಳು. ಅದನ್ನು ಮೆಚ್ಚಿಕೊಂಡಿದ್ದಳು.

‘ಮಾತನಾಡುವ ಈ ಗಿಳಿ ಈಗೇನೋ ಪ್ರತಿದಿನ ತಪ್ಪದೆ ಬಂದು ಕಥೆ ಹೇಳಿ ನನ್ನನ್ನು ಖುಷಿಪಡಿಸುತ್ತಿದೆ. ಆದರೆ ಮುಂದೆ ಅದು ಬಾರದೇ ಹೋದರೆ’ ಎಂಬ ಅನುಮಾನ ರಾಜಕುಮಾರಿಯ ತಲೆಗೆ ಬಂತು. ಆಗ ತಕ್ಷಣವೇ ಅವಳು ಗಿಳಿಗೆ ಒಂದು ಚೂರೂ ಸುಳಿವು ಕೊಡದೆ ರಾಜಭಟರಿಗೆ ಹೇಳಿ ಆ ಗಿಳಿಯನ್ನು ಹಿಡಿದು ಬಂಗಾರದ ಪಂಜರದಲ್ಲಿ ಪ್ರೀತಿಯಿಂದಲೇ ಬಂಧಿಸಿಟ್ಟಳು. ಎಲ್ಲಾ ತರಹದ ರಾಜೋಪಚಾರದ ಹಣ್ಣು ಹಂಪಲುಗಳನ್ನು, ತಿಂಡಿ ತಿನಿಸುಗಳನ್ನು ಕೊಟ್ಟು ಗಿಳಿಯನ್ನು ಉಪಚರಿಸತೊಡಗಿದಳು. ಹೀಗಿರುವಾಗ ಕೆಲವು ದಿನಗಳು ಮಾತ್ರ ಗಿಳಿಯು ಬಂಗಾರದ ಪಂಜರದೊಳಗಿನಿಂದಲೇ ರಾಜಕುಮಾರಿಗೆ ಕಥೆಗಳನ್ನು ಹೇಳಿತು. ಆದರೆ ಮುಂದಕ್ಕೆ ಅದು ಕಥೆಗಳನ್ನು ಹೇಳಲಾರದೆ ಮುದುಡಿಕೊಂಡು ಪಂಜರದೊಳಗೆ ಮೌನವಾಗಿ ಕುಳಿತುಬಿಟ್ಟಿತು.

ಕಥೆ ಹೇಳದೆ ಮೌನವಾದ ಗಿಳಿಯನ್ನು ಕಂಡು ‘ಏಕೆ ಗಿಳಿ ಮೌನವಾಗಿಬಿಟ್ಟೆ? ನಿನ್ನನ್ನು ಬಂಗಾರದ ಪಂಜರದಲ್ಲಿಟ್ಟು, ನಿನಗೆ ಬೇಕಾದ್ದೆಲ್ಲವನ್ನೂ ಕೊಟ್ಟು ನಾನು ಪ್ರೀತಿಯಿಂದ ನಿನ್ನನ್ನು ಸಾಕುತ್ತಿರುವೆ’ ಎಂದು ಕಥೆ ಹೇಳುವಂತೆ ಗಿಳಿಗೆ ರಾಜಕುಮಾರಿ ಒತ್ತಾಯಿಸಿದಳು. ಆಗ ಗಿಳಿ ಬಾಯಿಬಿಟ್ಟಿತು. ‘ಹೌದು ರಾಜ್ಕುಮಾರಿ ನೀನು ನನಗೆ ಎಲ್ಲವನ್ನೂ ಕೊಟ್ಟು ಬಂಗಾರ್ದ ಪಂಜ್ರದಲ್ಲಿಟ್ಟೆ. ಆದ್ರೆ ಪಂಜ್ರ ಬಂಗಾರ್ದೆ ಆದ್ರೂ ಅದು ಬಂಧನವೇ. ಇಂಥಾ ಬಂಧನದಲ್ಲಿ ನಾನ್ಯಾವ ಕಥೆ ಹೇಳಲಿ’ ಎಂದು ಗಿಳಿ ನೊಂದು ನುಡಿಯಿತು. ರಾಜಕುಮಾರಿಗೆ ಆಗ ಅರ್ಥವಾಯಿತು. ತಕ್ಷಣವೇ ಗಿಳಿಯನ್ನು ಬಂಗಾರದ ಪಂಜರದಿಂದ ಹೊರಕ್ಕೆ ಬಿಟ್ಟಳು. ಜೈಲಿನಿಂದ ಬಿಡುಗಡೆಯಾದ ಕೈದಿಯ ಮುಖದಂತೆ ಬಂಧ ಮುಕ್ತವಾದ ಗಿಳಿಯ ಮುಖ ಸಂತಸದಿಂದ ಅರಳಿತು. ಅದನ್ನು ಗಮನಿಸಿದ ರಾಜಕುಮಾರಿ ‘ಇಂಥಾ ಸಂತಸಕ್ಕೆ ಯಾವ ಅರಮನೆಯ ಸುಖ ಸಾಟಿಯಾದೀತು’ ಎಂದುಕೊಂಡಳು.

‘ರಾಜ್ಕುಮಾರಿ ನೀನು ಅರ್ಮನೆ ಎಂಬ ಬಂಗಾರ್ದ ಪಂಜ್ರದಲ್ಲಿ ಬಂಧಿಯಾಗಿರುವೆ. ಅಲ್ಲಿಂದ ಹೊರ್ಬಂದು ಜಗತ್ತನ್ನು ನೋಡು. ಆಗ ಕಷ್ಟ– ಸುಖ ಅಂದ್ರೆ ಏನೂ ಅಂತ ನಿನಗೆ ಗೊತ್ತಾಗುತ್ತೆ’ ಎಂದು ರಾಜಕುಮಾರಿಗೆ ಹೇಳಿದ ಗಿಳಿ ಪಟಪಟನೆ ರೆಕ್ಕೆ ಬಡಿಯುತ್ತಾ ತನ್ನ ಸ್ವತಂತ್ರ ಬದುಕಿನತ್ತ ಹಾರಿಹೋಯಿತು. ಆದರೆ ತಾನು ಮಾತು ಕೊಟ್ಟಂತೆ ಪ್ರತಿದಿನ ಅರಮನೆ ಉದ್ಯಾನಕ್ಕೆ ಬಂದು ರಾಜಕುಮಾರಿಗೆ ಕಥೆ ಹೇಳುವುದನ್ನು ಮಾತ್ರ ಅದು ಎಂದೂ ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT