ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರು ಕೊಟ್ಟಿದ್ದು?

Last Updated 24 ನವೆಂಬರ್ 2018, 19:31 IST
ಅಕ್ಷರ ಗಾತ್ರ

ಸೌಮ್ಯಾಳಿಗೆ ಇಂದು ನಿದ್ದೆ ಬರುತ್ತಿಲ್ಲ. ಅದಕ್ಕೆ ಕಾರಣ ಇದೆ.

ನಾಳೆ ಅವಳ ಹುಟ್ಟಿದ ದಿನ. ಶಾಲೆಯಲ್ಲಿ ಹುಟ್ಟಿದ ದಿನದಂದು ಮುಂಜಾನೆಯ ಪ್ರಾರ್ಥನಾ ವೇಳೆಯಲ್ಲಿ ಶುಭಾಶಯ ಹೇಳುತ್ತಾರೆ. ಆಮೇಲೆ ಸರ್, ಅವಳಿಗೆ ಒಂದು ಪೆನ್ನನ್ನು ಉಡುಗೊರೆಯಾಗಿ ಕೊಡುತ್ತಾರೆ. ಇದೆಲ್ಲಾ ಖುಷಿಯೇ. ಆದರೆ ಹುಟ್ಟುಹಬ್ಬ ಆಚರಿಸಿಕೊಳ್ಳುವವರು ನಂತರ ಎಲ್ಲರಿಗೂ ಒಂದೊಂದು ಚಾಕಲೇಟ್‌ ಹಂಚುತ್ತಾರೆ. ಈಗೀಗ ಅದು ಒಂದು ಸಂಪ್ರದಾಯ ಆಗಿಬಿಟ್ಟಿದೆ.

ಸೌಮ್ಯಾ ಅಜ್ಜಿಗೆ ಹೇಳಿದ್ದಳು, ‘ನಾಳೆ ನನ್ನ ಹುಟ್ಟಿದ ದಿನ. ಜಾತ್ರೆಯಲ್ಲಿ ತಂದ ಹೊಸ ಅಂಗಿ ಹಾಕಿಕೊಂಡು ಶಾಲೆಗೆ ಹೋಗುತ್ತೇನೆ. ಶಾಲೆಯಲ್ಲಿ ನಾಳೆ ಚಾಕಲೇಟ್‌ ಹಂಚಬೇಕು. ಹಾಗಾಗಿ ಒಂದುನೂರು ರೂಪಾಯಿ ಬೇಕು’ ಅಂತ. ‘ಮಗಾ ನೀನು ಹೊಸ ಅಂಗಿ ಹಾಕ್ಕೊಂಡು ಹೋಗು. ಆದರೆ ನಾನು ಒಂದು ನೂರು ರೂಪಾಯಿ ಎಲ್ಲಿಂದ ತರಲಿ..? ನಿನ್ನ ಅಪ್ಪ ನಿನ್ನನ್ನು ನನ್ನ ಹತ್ತಿರ ಬಿಟ್ಟು ಎಲ್ಲಿ ಹೋಗಿದ್ದಾನೋ. ಅಮ್ಮನಿಗೆ ಆರಾಮ ಇಲ್ಲದೇ ಇರುವುದೇ ಹೆಚ್ಚು. ಚಾಕಲೇಟ್‌ ಕೊಡದಿದ್ರೆ ಏನೂ ಆಗುವುದಿಲ್ಲ. ನಾವು ಬಡವರು ಅಂತ ಗೊತ್ತಾಗ್ಲಿ ಬಿಡು’ ಎಂದು ಹೇಳುತ್ತಿದ್ದರೆ ಸೌಮ್ಯಾಳಿಗೆ ಅಳು ಬಂದಿತ್ತು. ಅಜ್ಜಿ ‘ಈಗ ಸುಮ್ಮನಿರು, ನಾಳೆ ಬೆಳಿಗ್ಗೆ ಏನಾಗ್ತದೆ ನೋಡೋಣ’ ಎಂದಳು.

ಸೌಮ್ಯಳಿಗೆ ಹಾಗಾಗಿಯೇ ನಿದ್ದೆ ಬರ್ತಾಇಲ್ಲ. ಅಜ್ಜಿ ದುಡ್ಡು ಕೊಡುತ್ತಾಳೋ ಇಲ್ಲವೋ ಎಂದು ಚಿಂತೆ. ಅವಳಿಗೆ ಯಾವಾಗ ನಿದ್ದೆ ಬಂತು ಅಂತ ತಿಳಿಯಲಿಲ್ಲ. ಕಾಗೆ ಕೂಗಿದ್ದು ಕೇಳಿದಾಗ ಎಚ್ಚರ ಆಯ್ತು. ದಡಕ್ಕನೆ ಎದ್ದು ಬಚ್ಚಲ ಒಲೆಯ ಹತ್ತಿರ ಹೋದಳು. ಮಳೆಯ ಹೊಡೆತಕ್ಕೆ ಕಟ್ಟಿಗೆಯೆಲ್ಲ ಒದ್ದೆಯಾಗಿತ್ತು. ‘ಅಮ್ಮ, ಬೆಂಕಿ ಹೊತ್ತಿಸ್ತೀಯಾ’ ಎಂದು ಅಮ್ಮನನ್ನು ಕೇಳಿದಳು.

‘ಒಲೆಗೇ ಬೆಂಕಿ ಹೊತ್ತಿಸಲು ಆಗ್ತಾ ಇಲ್ಲ. ಇನ್ನು ನೀರ ಒಲೆಗೆ ಹೇಗೆ ಹೊತ್ತಿಸುವುದು? ಹಾಗೇ ಕೈಕಾಲು ಮುಖ ತೊಳೆದುಕೊಂಡು ಶಾಲೆಗೆ ಹೋಗು’ ಎಂದಳು. ಸೌಮ್ಯಾ ಹಂಡೆಯಲ್ಲಿದ್ದ ತಣ್ಣೀರನ್ನೇ ಬಡ ಬಡ ಮೈಮೇಲೆ ಸುರುವಿಕೊಂಡು ಸ್ನಾನ ಮುಗಿಸಿದಳು. ಅಜ್ಜಿ ಕಾಣಲಿಲ್ಲ. ತನಗೆ ಹಣ ಹೊಂದಿಸಿಕೊಂಡು ಬರಲು ಹೋಗಿದ್ದಾಳೆ ಅನಿಸಿತು. ಖುಷಿಖುಷಿಯಾಗಿ ಕೂದಲು ಬಾಚಿ ಎರಡು ಜಡೆ ಹೆಣೆದುಕೊಂಡು ಮಸುಕಾದ ಆ ಕನ್ನಡಿಯಲ್ಲಿ ಮುಖ ನೋಡಿಕೊಂಡು ನಕ್ಕಳು.

ಅಜ್ಜಿ ಬಂದಿದ್ದೇ ಸೌಮ್ಯಾ ಹೊರಗೆ ಓಡಿ ಬಂದಳು. ಅಜ್ಜಿಯ ಮುಖ ಬೆಳಗಿನ ಬೆಳಕಿನಲ್ಲೂ ತುಂಬಾ ಕಪ್ಪಾಗಿತ್ತು. ‘ಮಗಾ ಯಾರ ಹತ್ರನೂ ದುಡ್ಡಿಲ್ಲಂತೆ. ನಾನು ಈ ದಿನ ನಿನಗೆ ಹೇಗಾದರೂ ಮಾಡಿ ದುಡ್ಡು ಕೊಡಲೇಬೇಕು ಅಂದುಕೊಂಡಿದ್ದೆ. ನಾಲ್ಕೈದು ಮನೆಗಳಿಗೆ ಹೋಗಿ ಬಂದೆ. ಎಲ್ಲೂ ಸಿಗಲಿಲ್ಲ. ಏನು ಮಾಡುದು?’ ಎನ್ನುತ್ತಿದ್ದಂತೆ ರಾತ್ರಿ ಸುರಿದ ಮಳೆಯಂತೆಯೇ ಸೌಮ್ಯಾಳ ಕಣ್ಣಲ್ಲಿ ನೀರು ಸುರಿಯಿತು. ತನ್ನ ಹೊಸ ಅಂಗಿಯನ್ನು ತೆಗೆದುಹಾಕಿದಳು. ಶಾಲೆಯ ಸಮವಸ್ತ್ರ ಹಾಕಿಕೊಂಡು ಪುಸ್ತಕದ ಚೀಲ ಹಾಗೂ ಕೊಡೆ ತೆಗೆದುಕೊಂಡು ಶಾಲೆಗೆ ಹೊರಟಳು.

ಶಾಲೆಗೆ ಹೋದಾಗ ‘ಸೌಮ್ಯಾ ನಿನ್ನ ಹುಟ್ಟುಹಬ್ಬ ಅಲ್ವೆನೇ?’ ಎನ್ನುತ್ತ ಮೂರು ನಾಲ್ಕು ಗೆಳೆತಿಯರು ಬಂದರು. ಸೌಮ್ಯಾ ‘ಈ ದಿನ ನನ್ನ ಹುಟ್ಟುಹಬ್ಬ ಅಲ್ಲ. ಅದು ರಜೆಯಲ್ಲಿಯೇ ಮುಗಿದು ಹೋಗಿದೆ’ ಎಂದು ಸುಳ್ಳು ಹೇಳಿದಳು. ಯಾರೋ ‘ಸರ್, ಈ ದಿನ ಸೌಮ್ಯಾ ತನ್ನ ಹುಟ್ಟುಹಬ್ಬ ಅಲ್ಲ ಅಂತ ಸುಳ್ಳು ಹೇಳ್ತಾ ಇದ್ದಾಳೆ’ ಎಂದು ಕೂಗಿದ್ದು ಕೇಳಿಸಿತು. ಅಷ್ಟರಲ್ಲಿ ರಂಜಿತಾ ಝರಿ ಲಂಗ ಹಾಕಿಕೊಂಡು ಖುಷಿ ಖುಷಿಯಾಗಿ ಬಂದಳು. ಗೆಳತಿಯರು ರಂಜಿತಾ ‘ಹ್ಯಾಪಿ ಬರ್ತ್‌ಡೇ’ ಎನ್ನುತ್ತ ಅವಳ ಕಡೆ ಹೊರಟರು.

ಪ್ರಾರ್ಥನಾ ಮಂತ್ರಿ ಪ್ರಾರ್ಥನೆ ಮುಗಿಯುತ್ತಿದ್ದಂತೆಯೆ ಇಂದು ರಂಜಿತಾಳ ಹುಟ್ಟು ಹಬ್ಬ, ಸೌಮ್ಯಾ ತನ್ನ ಹುಟ್ಟು ಹಬ್ಬ ಅಲ್ಲ ಅಂತ ಹೇಳಿದ್ದಾಳೆ ಎಂದು ಸರ್ ಹತ್ತಿರ ಹೇಳಿದ. ಸರ್, ರಂಜಿತಾಳ ಜೊತೆಗೆ ಸೌಮ್ಯಾಳನ್ನು ಕರೆದಾಗ ಸೌಮ್ಯಾಳಿಗೆ ಮುಜುಗರವಾಯಿತು. ಆದರೆ ಹೋಗದೆ ಉಳಿಯುವಂತಿರಲಿಲ್ಲ. ಸರ್ ಇಬ್ಬರ ತಲೆಯನ್ನೂ ನೇವರಿಸಿ ಇಬ್ಬರಿಗೂ ಒಂದೊಂದು ಪೆನ್ನು ನೀಡಿ ಶುಭ ಕೋರಿದರು. ಮಕ್ಕಳೆಲ್ಲ ‘ಹುಟ್ಟಿ ದಿನದ ಶುಭಾಶಯ ಶುಭಾಶಯ’ ಎಂದು ರಾಗವಾಗಿ ಹೇಳುತ್ತ ಚಪ್ಪಾಳೆ ತಟ್ಟಿದರೆ ಸೌಮ್ಯಾ ಕಣ್ಣಲ್ಲಿ ನೀರು ತುಂಬಿಕೊಂಡು ನಿಂತಿದ್ದಳು.

ಪ್ರಾರ್ಥನೆ ಮುಗಿದು ಎಲ್ಲರೂ ತರಗತಿಗೆ ಹೋದಮೇಲೆ ಚಾಕಲೇಟ್‌ ಹಂಚುವುದು. ಸೌಮ್ಯಾ ನಿಧಾನವಾಗಿ ಹೆಜ್ಜೆ ಹಾಕುತ್ತ ತರಗತಿ ಕಡೆಗೆ ನಡೆದಾಗ ಹಿಂದಿನಿಂದ ರಂಜಿತಾ ಅವಳ ಹೆಗಲ ಮೇಲೆ ಕೈ ಹಾಕಿದ್ದಳು. ಸೌಮ್ಯಾ ತಿರುಗಿದಾಗ ‘ನನ್ನ ಜೊತೆಗೆ ಬಾ. ನಾನೂ ನೀನೂ ಒಟ್ಟಿಗೆ ಚಾಕಲೇಟ್‌ ಹಂಚೋಣ. ನಾನು ಜಾಸ್ತಿ ತಂದಿದ್ದೀನಿ. ನಿನಗೂ ಹಂಚಲು ಕೊಡ್ತೀನಿ’ ಅಂದಳು. ಆದರೆ ಸೌಮ್ಯಾ ಹೋಗಲಿಲ್ಲ. ರಂಜಿತಾ ಚಾಕಲೇಟ್‌ ಪ್ಯಾಕ್‌ ತೆಗೆದುಕೊಂಡು ಹಂಚಲು ನಡೆದಳು.

ಸೌಮ್ಯಾ ತನ್ನ ಬೆಂಚಿನಮೇಲೆ ಕುಳಿತು ಪುಸ್ತಕ ತೆಗೆಯಲು ಚೀಲಕ್ಕೆ ಕೈಹಾಕಿದಳು. ಕೈಗೆ ಏನೋ ತಾಗಿದಂತಾಗಿ ಚೀಲದ ಬಾಯಿ ಅಗಲಿಸಿ ನೋಡಿದರೆ ಚೀಲದಲ್ಲಿ ಒಂದು ಚಾಕಲೇಟ್‌ ಪ್ಯಾಕ್‌ ಇತ್ತು. ರಂಜಿತಾಳ ಒಟ್ಟಗೇ ಕ್ಲಾಸಿನ ಒಳಗೆ ಬಂದಿದ್ದಳು. ಅವಳಿಗೆ ಏನೂ ತಿಳಿಯದೆ ಪ್ಯಾಕೆಟ್‌ ತೆಗೆದುಕೊಂಡು ಸರ್ ಕೋಣೆಗೆ ಹೋದಳು. ಸರ್ ಹತ್ತಿರ ಹೋಗಿ ‘ನನ್ನ ಚೀಲದಲ್ಲಿ ಯಾರೋ ಇದನ್ನು ಹಾಕಿದ್ದಾರೆ. ಇದು ನನ್ನದಲ್ಲ’ ಎಂದಳು. ‘ನಿನ್ನ ಚೀಲಕ್ಕೆ ಹಾಕಿದ್ದಾರೆ ಅಂದರೆ ನಿನ್ನದೇ... ಏನೇ ಇರಲಿ, ಎಲ್ರಿಗೂ ಹಂಚಿಬಿಡು’ ಎಂದು ಮುಗುಳುನಕ್ಕರು. ತನ್ನ ಚೀಲಕ್ಕೆ ಇದು ಹೇಗೆ ಬಂತು ಎಂದು ಯೋಚಿಸುತ್ತ ಸೌಮ್ಯ ಚಾಕಲೇಟ್‌ ಹಂಚಲು ನಡೆದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT