ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ಯಾ ಎಲ್ಲಿದ್ದೀಯಪ್ಪ?

Last Updated 26 ಮೇ 2019, 10:42 IST
ಅಕ್ಷರ ಗಾತ್ರ

ನಮ್ಮ ಬಸ್ಯಾ ಭಾಳಾ ಉಡಾಳ ಹುಡುಗರಿ. ಆದರೂ ಎಲ್ಲರಿಗೂ ಬೇಕಾದವ. ಯಾರು ಏನೇ ಕೆಲಸ ಹೇಳಲಿ ಚಾಚೂತಪ್ಪದೆ ಮಾಡವ. ಊರಾಗೆಲ್ಲಾ ನಮ್ಮ ಬಸ್ಯಾ ಅಂದ್ರ ಭಾಳಾ ಫೇಮಸ್ಸು. ಎಲ್ರೂ ಅವನ ಮ್ಯಾಲೆ ಜೋಕ್ ಮಾಡೋವ್ರ. ಆದ್ರೂ ಅವಾ ಬೇಜಾರು ಮಾಡ್ಕೊಳವಲ್ಲ. ಚಿಕ್ಕವರಿಂದ ಹಿಡಿದು ವಯಸ್ಸಾದವರೊಂದಿಗೂ ಒಳ್ಳೆ ಬಾಂಧವ್ಯ ಇಟ್ಕೊಂಡಾವ. ಬಸ್ಯಾ ಊರನವ್ರ ಹತ್ರ ಕೆಲಸ ಮಾಡೋದು ನೋಡಿ ಅವನ ಅಪ್ಪ ಅವ್ವಗ ಸಾಕಾಗಿ ಹೋಗಿತ್ತು. ಮನ್ಯಾಗ ದಿನ ಬೈಸಿಕೊತ್ತಿದ್ದ. ಆದ್ರೂ ಅಪ್ಪ ಅವ್ವಗ ಬಸ್ಯಾ ಅಂದ್ರೆ ಭಾಳ ಪ್ರೀತಿ. ಒಂದಿನ ಅಪ್ಪ ಬೈದ ಅಂತ ಹುಣಸಿಮರದ ಮ್ಯಾಗ ಹೋಗಿ ಕುತ್ಗೊಂಡಿದ್ದ. ಬಾರ್ಲೆ ಕೆಳಗ ಮಗನ ಅಂದ್ರೂ ಒಂದು ದಿನ ಪೂರ್ತಿ ಗಿಡದ ಮ್ಯಾಲ ಇದ್ದ. ಅವನ ಫೇವರಿಟ್ ಬೇಸನ್ ಉಂಡಿ. ಅವ್ವ, ಬೇಸನ್ ಉಂಡಿ ತಂದಿನಿ ಬಾರ್ಲೆ ಅಂದಾಗ ಮರದಿಂದ ಪಟಪಟ ಅಂತ ಕೆಳಗಿಳಿದು ‘‘ಕೊಡುಬೇ ಲಗೂನ’’ ಅಂತ ಬೇಸನ್ ಉಂಡಿ ಕಸಗೊಂಡಿದ್ದ.

ಸಾಲ್ಯಾಗೂ ಬಸ್ಯಾ ಅಂದ್ರೆ ಎಲ್ಲರಿಗೂ ಪಂಚಪ್ರಾಣ. ಉಡಾಳತನ ಇದ್ದರೂ ಮಾಸ್ತರ್ ಹೇಳಿದ ಕೆಲಸ ತಪ್ಪದಂಗ ಮಾಡ್ತಿದ್ದ. ಓದೂದ್ರಾಗ ಭಾಳಾ ಡಲ್. ಓದಾಕ ಕುಂದುರ್ಲೆ ಅಂದ್ರ ಇನ್ನೊಬ್ಬರು ಓದೋದನ್ನು ಕೆಡಸ್ತಿದ್ದ. ಏನಾದ್ರೂ ತರ್ಲೆ ಮಾತಾಡಿ ಯಾರು ಓದಲಾರದಂಗ ಮಾಡ್ತಿದ್ದ. ಇವನ ಕಿಡಿಗೇಡಿತನ ಕಂಡ ಮಾಸ್ತರು ಇವನನ್ನು ಸಪರೇಟ್ ಓದಕ್ಕೆ ಬಿಡ್ತಿದ್ದರು. ಇಲ್ಲಾಂದ್ರೆ ಗಿಡಕ್ಕೆ ನೀರು ಬಿಡು ಹೋಗು ಅಂತ ಕಳಿಸ್ತಿದ್ರು. ಊರಾನ ಗದ್ಯಮ್ಮದೇವಿ ಜಾತ್ರೆ ಬಂತು ಅಂದ್ರ ಕಾಯಿ ಒಡೆಯೋ ಕೆಲಸ ಇವನಿಗೆ ಫಿಕ್ಸ್.

ಹೀಗಿರುವಾಗ ಬಸ್ಯಾ ಈ ವರ್ಷ ಎಸ್ಎಸ್ಎಲ್‌ಸಿ. ಹೆಂಗೋ ಮಾಡಿ ಮಾಸ್ತರ್‌ ಕೃಪಾಕಟಾಕ್ಷದಿಂದ 9ನೇ ತರಗತಿತನ ಪಾಸ್ ಆಗಿ ಎಸ್ಎಸ್ಎಲ್‌ಸಿಗೆ ಬಂದಾನ. ಆ ಊರಿನ ಸಾಲಿ ಫಲಿತಾಂಶ ಪ್ರತಿವರ್ಷ ನೂರಕ್ಕೆ ನೂರು ಆಗ್ತಿತ್ತು. ಈ ವರ್ಷ ಬಸ್ಯಾ ಬಂದನಲ್ಲ, ಅವಾ ಫೇಲಾದ್ರ ಹೆಂಗಪ್ಪ ಅಂತ ಮಾಸ್ತರರಿಗೆ ದಿಗಿಲಾತು. ಆದರೂ ಹೆಂಗಾದ್ರೂ ಸರಿ ಬಸ್ಯಾನ ಓದ್ಸಿ ಪಾಸ್ ಮಾಡಿಸಬೇಕು ಅಂತ ಎಲ್ಲಮಾಸ್ತರ್‌ಗಳು ದೃಢಸಂಕಲ್ಪ ಮಾಡಿದರು. ಮನ್ಯಾಗ ಅಪ್ಪ ಅವ್ವನೂ ಬಡುವ್ರು. ಎಸ್ಎಸ್ಎಲ್‌ಸಿ ಪಾಸಾದ್ರ ಅವನ್ಗ ಏನಾದ್ರೂ ನೌಕರಿ ಸಿಕ್ಕು ಛಲೋ ಆಗತೈತಿ.‌ ಇಲ್ಲಾಂದ್ರ ಹಿಂಗ ಉಡಾಳತನ ಮಾಡ್ಕೋತ ಕಾಲ ಕಳಿತಾನ. ಹೊಲ ಮನಿ ಅಂದ್ರ ಬ್ಯಾಸರ. ಅದಕ್ಕ ಏನಾದರೂ ಮಾಡಿ ಬಸ್ಯಾನ ಎಸ್ಎಸ್ಎಲ್‌ಸಿ ಮಾಡಿಸಬೇಕು ಅಂತ ಮನಸ್ಸು ಮಾಡಿದ್ರು. ಆಗಾಗ ಮಾಸ್ತರನ್ನ ಭೇಟಿ ಆಗಿ, ನಮ್ ಬಸ್ಯಾ ಓದಾಕ ಏನ್ ಬೇಕು ಹೇಳ್ರಿ, ಕೊಡಿಸ್ತೀವಿ. ಅವ ಎಸ್ಎಸ್ಎಲ್‌ಸಿ ಪಾಸ್ ಆಗಬೇಕು ಅಂತ ಅಪ್ಪ-ಅವ್ವ ಹೇಳ್ತಾ ಇದ್ದರು. ಸಾಲಿ ಮಾಸ್ತರರ ಪ್ರೀತಿಯ ಶಿಷ್ಯ ಬಸ್ಯಾ. ಅವ್ನ ಪಾಸ್ ಮಾಡೇ ಮಾಡ್ತೀವಿ, ನೀವು ಚಿಂತೆ ಮಾಡಬ್ಯಾಡ್ರಿ ಅಂದ್ರು. ಆದ್ರೂ ಇವ ಮನ್ಯಾಗ ಕುಂತು ಓದಾವಲ್ಲ. ಮನ್ಯಾಗ ಓದುದಕ್ಕ ಜಬರಿಸಿ ಹಚ್ಚಿದ್ರ, ಓದೋತರ ನಾಟಕ ಮಾಡಿ ಅಪ್ಪ ಹೊರಗೆ ಹೋದ್ರ ಇವ್ನು ಹೊರಗ ಓಡಿ ಬಿಡಾವ. ಅಪ್ಪನಿಂದ ಭಾಳಾ ಸಲ ಬಡತ ತಿಂದಿದ್ದ. ಅವ್ವ ಮಾತ್ರ ಹೊಡಿಬ್ಯಾಡ್ರಿ ಮಗನ್ನ ಅಂತ ಕಣ್ಣೀರು ಹಾಕಿ, ಓದ್ಲೇ ಮಗನ ಚಂದಾಗಿ ಅಂತ ತಾನು ಎರಡು ಏಟು ಹಾಕಿ ಊಟ ಮಾಡಿಸ್ತಿದ್ಲು.

ಇವ ಭಾಳಾ ಕಿತಬಿ ಅದಾನ ಅಂತ ಗೆಳೆಯರು ಯಾರೂ ಓದೋ ಟೈಮ್‌ನಾಗ ಇವನನ್ನ ತಮ್ಮ ಜೋಡಿ ಸೇರಿಸ್ಕೊತಿದ್ದಿಲ್ಲ. ಆಟಕ್ಕ, ಊರು ಕೇರಿ ತಿರುಗಾಕ ಮಾತ್ರ ಮನಿಗೆ ಬಂದು ಕರ್ಕೊಂಡು ಹೋಗ್ತಿದ್ರು. ಆದ್ರ ಅವ್ರಿಗೂ ಬಸ್ಯಾನ ಹೆಂಗಾದ್ರೂ ಮಾಡಿ ಪಾಸ್ ಮಾಡಿಸ್ಬೇಕು ಅಂತ ಅವಾಗವಾಗ ಓದೋಕ ಕರ್ಕೋಂಡು ಹೋಗ್ತಿದ್ರು. ಇವ ಜೋಕು ಮಾಡೋದು, ತರ್ಲೆ ಮಾಡೋದು ನೋಡಿ ‘ಬಸ್ಯಾ, ನಿಮ್ಮವ್ವ ಬೇಸನ್ ಉಂಡಿ ಕೊಡ್ತಾಳಂತ ಹೋಗ್ಲೆ’ ಅಂತ ಅಂದ ಕೂಡ್ಲೆ ಮನಿಗೆ ಓಡಿ ಹೋಗಾಂವ. ಬಸ್ಯಾನ ಗೆಳೆಯರು ಮಲ್ಯಾ ಮತ್ತು ಸೋಮ್ಯಾ. ಬಸ್ಯಾಗ ಸಣ್ಣ ಪುಟ್ಟ ಪ್ರಶ್ನೋತ್ತರ ಹೇಳಿ ಕೊಡ್ತಿದ್ರು. ಇಂಥವರನ್ನ ಬಸ್ಯಾ ಮರಿತಿದ್ದಿಲ್ಲ. ಬಾಯಿಪಾಠ ಮಾಡ್ಲೆ ಅಂದ್ರ ಮಾಡಿಬಿಡಾಂವ. ‘ಎಲ್ಲರ ಬಾಯಲ್ಲೂ ಬಸ್ಯಾ, ಎಲ್ಲಿದಿಲೇ ಓದಾಕ ಕುತ್ಗೋ ಬಾ’’ ಅನ್ನೋದ ಮಾತು. ಸಾಲಿ ಮಾಸ್ತರ್ರು ಭಾಳಾ ಕಷ್ಟ ಪಟ್ರು, ಬಸ್ಯಾಗೋಸ್ಕರ. ಪ್ರತಿವರ್ಷ ಸಾಲಿ ರಿಜಲ್ಟ್ ನೂರಕ್ಕ ನೂರು ಆಗಾಕ ಹತೈತಿ. ಬಸ್ಯಾನಿಂದ ಆ ಕ್ರೆಡಿಟ್ ಎಲ್ಲಿ ಹಾಳಾಗ್ತೈತಿ ಅಂತ ಸಾಲಿ ಮಾಸ್ತರು ಎಲ್ರೂ ಇವನಿಗೋಸ್ಕರ ಸ್ಪೆಷಲ್ ಕ್ಲಾಸ್ ತಗೋತಿದ್ರು. ಆದ್ರೂ ಮಗ ತರ್ಲೆ ಮಾಡೋದು ಬಿಡ್ತಿದ್ದಿಲ್ಲ. ಗಣಿತ ಮಾಸ್ತರಂತೂ ಈ ಪರಿ ಹೊಡಿತಿದ್ರಂದ್ರ ಅವ್ರಿಗ ಮಾತ್ರ ಬಸ್ಯಾ ಹೆದರ್ತಿದ್ದ. ಸುಮ್ನ ಓದ್ಕೋತ ಕುತ್ಗೊತಿದ್ದ. ಬಸ್ಯಾಗ ಓದಸಾಕ ಹೋಗಿ ಅವನ ಜೊತೆಗೆ ಇರೋರೆಲ್ಲರಿಗೂ ಎಸ್ಎಸ್ಎಲ್‌ಸಿ ಸಿಲೆಬಸ್ ಎಬಿಸಿಡಿ ತರ ಬಾಯಿಪಾಠ ಆಗಿ ಬಿಟ್ಟಿತ್ತು. ಇವ್ನ ಬಗ್ಗೆ ಎಲ್ರೂ ಕಾಳಜಿ ತಗೊಳೋದು ನೋಡಿ, ಊರಾನ ಜನರೆಲ್ಲ ಬಸ್ಯಾ ಈ ವರ್ಷ ಸಾಲಿಗೆ ಟಾಪ್ ಬರ್ತಾನ ಅಂತ ಮಾತಾಡ್ತಿದ್ರು. ಊರಾನ ಗೌಡ್ರಂತೂ ಬಸ್ಯಾ ಎಸ್ಎಸ್ಎಲ್‌ಸಿ ಪಾಸ್ ಆದ್ರ ಛಲೋ ಸೈಕಲ್ ಕೊಡಿಸ್ತೀನಿ ಅಂತ ಆಸೆ ತೋರಿಸಿದ್ರು. ಪಕ್ಕದ ಮನಿ ಯಂಕಜ್ಜಿ ‘ಬಸ್ಯಾ ಪಾಸ್ ಆದ್ರ ನಾನ ಅವ್ನ ಮದುವಿ ಆಗ್ತಿನಿ’ ಅಂತ ನಗಸ್ಯಾಟಿ ಮಾಡ್ತಿದ್ಲು.

ಅಂತೂ ಇಂತೂ ಪರೀಕ್ಷೆ ಬರೆದು ಬಂದ ಕೆಲ ದಿನಗಳ ನಂತ್ರ ರಿಜಲ್ಟ್ ಬಂದೇ ಬಿಡ್ತು. ಊರಾನ ಜನಕ್ಕ, ಮಕ್ಕಳ ಅಪ್ಪ ಅವ್ವಗ, ಸಾಲಿ ಮಾಸ್ತರಿಗೂ ಒಂದೇ ಟೆನ್ಷನ್ನು. ‘ಬಸ್ಯಾ ಪಾಸಾದ್ನಾ ಇಲ್ಲಾ ? ದಾರ‍್ಯಾಗ ಹೋಗುವಾಗ ಮಾಸ್ತರಿಗೆ ಊರಾನ ಜನ ‘ಸರ, ಬಸ್ಯಾ ಏನಾದ್‌ನ್ರೀ?’ ಅಂತ ಕೇಳ್ತಿದ್ರು. ಮಾಸ್ತರಿಗೆ ಮಾತ್ರ ಇನ್ನೂ ರಿಜಲ್ಟ್ ಕೈಗೆ ಬಂದಿಲ್ಲ ಇರ್ರೆಪ ಅಂತ ಉತ್ತರ ಕೊಟ್ಟು ಕೊಟ್ಟು ಸಾಕಾಗಿತ್ತು. ಬಸ್ಯಾನ ಅಪ್ಪ ಅವ್ವಗೂ ಭಾಳಾ ಟೆನ್ಷನ್ ಆಗಿತ್ತು. ಅಪ್ಪ ಮಾತ್ರ ‘ಮಗನ ನೀ ಪಾಸಾಗ್ಲಿಲ್ಲ ಅಂದ್ರ ಕಾಲ ಮುರೀತೀನಿ’ ಅಂತ ಬಸ್ಯಾಗ ಆವಾಜ್ ಹಾಕಿದ್ದ. ಅವ್ವ, ಬಸ್ಯಾ ಪಾಸಾಗ್ಲಿ ಅಂತ ಮನಿ ಜಗಲಿ ಮ್ಯಾಲಿನ ದೇವ್ರಿಗೆ ದೀಪ ಹಚ್ಚಿದ್ಲು. ಬಸ್ಯಾಗ ಮಾತ್ರ ಯಾವದೇ ಟೆನ್ಷನ್ ಇರಲಿಲ್ಲ. ಬೆಳಿಗ್ಗೆ ಎದ್ದು ಊರಾಗ ತಿರುಗಾಕ ಹೋದಾವ ಪತ್ತೇನೆ ಇಲ್ಲ.

ಅಂತೂ ರಿಜಲ್ಟ್ ಮಾಸ್ತರ್ ಕೈಗೆ ಬಂದಿತ್ತು. ಎಲ್ಲರ ಮುಖದಾಗ ನಗು. ಸಾಲಿ ರಿಜಲ್ಟ್ ನೂರಕ್ಕೆ ನೂರು ಆಗೈತಿ. ಅಂದ್ರ ಬಸ್ಯಾನೂ ಪಾಸಾಗ್ಯಾನ. ಮಾಸ್ತರರೆಲ್ಲರಿಗೂ ಖುಷಿನೋ ಖುಷಿ. ಹೆಡ್ ಮಾಸ್ತರ್ರು ಸಿಹಿ ತರಿಸಿ ಎಲ್ಲರಿಗೂ ಹಂಚಿದ್ರು. ಮಾಸ್ತರ್ರು ಹುಡುಗುರ್ರು ಎಲ್ರೂ ಸೇರಿ ಪಟಾಕಿ ಹೊಡೆದ್ರು, ಸಾಲಿ ರಿಜಲ್ಟ್ ನೂರಕ್ಕ ನೂರು ಬಂದಿದ್ದಕ್ಕಲ್ಲ; ಬಸ್ಯಾ ಪಾಸಾಗಿದ್ದಕ್ಕ. ಹುಡುಗುರೆಲ್ಲಾ ಖುಷಿಯಾಗಿ ತಮ್ಮ ರಿಜಲ್ಟ್‌ಗಿಂತ ಬಸ್ಯಾನ ರಿಜಲ್ಟ್ ಊರಾಗ ಹೇಳಾಕ ಓಡಿ ಹೋದ್ರು. ಅಂತೂ ಇಂತೂ ಬಸ್ಯಾ ಪಾಸಾದ. ಊರಾನ ಗೌಡ್ರು ಸೈಕಲ್ ಅಂಗಡಿ ಮಾಬುಸಾಬಗ ಒಂದು ಛಲೋ ಸೈಕಲ್ ಖರೀದಿ ಮಾಡಾಕ ಹೇಳಿದ್ರು. ಪಕ್ಕದ ಮನಿ ಯಂಕಜ್ಜಿ ಬಸ್ಯಾನ ಮದುವಿ ಆಗಾಕ ಭಾಳಾ ಚಂದಾಗಿ ರೆಡಿ ಆದ್ಲು. ಎಲ್ರೂ ಯಂಕಜ್ಜಿನ ನಗಸ್ಯಾಟಿ ಮಾಡೋವ್ರ. ಆದ್ರ ಬಸ್ಯಾ ಮಾತ್ರ ಎಲ್ಲೂ ಕಾಣಾವಲ್ಲ. ‘ಬಸ್ಯಾ ಎಲ್ಲಿದಿಯಪ್ಪಾ?’ ಅಂತ ಎಲ್ರೂ ಹುಡುಕೊದಕ್ಕ ಶುರು ಮಾಡಿದ್ರು. ಬಸ್ಯಾನ ಚೆಡ್ಡಿ ದೋಸ್ತ್ರು ಎಲ್ಲ ಕಡೆ ‘ಬಸ್ಯಾ ಎಲ್ಲಿದಿಯಪ್ಪಾ?’ ಅಂತ ಹುಡುಕಾಟ ಪ್ರಾರಂಭ ಮಾಡಿದ್ರು. ತಮ್ಮ ತಮ್ಮ ಸೀಕ್ರೆಟ್ ಸ್ಥಳಗಳಿಗೆಲ್ಲ ಹೋಗಿ ಹುಡುಕಿದ್ರೂ ಬಸ್ಯಾ ಸಿಗಲಿಲ್ಲ. ಈ ನನ್ನ ಮಗ ಎಲ್ಲಿ ಹೋದ ಅಂತ ಅಪ್ಪ ಖುಷಿಯಿಂದ ಹುಡುಕಾಟ ನಡೆಸಿದ. ಫೆಲಾಗೇನಿ ಅಂತ ಮತ್ತೆನಾದ್ರೂ ಕೆರೆಕಡೆ, ಬಾವಿಕಡೆ ಏನಾದ್ರೂ ಹೋದ್ನಾ ಅಂತ ಎಲ್ಲರ ಮನದಾಗ ಸಣ್‌ ವಿಚಾರ ಶುರುವಾತು. ಅವ್ವ ಅಂತೂ ಕೈಯಾಗ ನಾಲ್ಕು ಬೇಸನ್ ಉಂಡಿ ಹಿಡಿದು ‘ಬಸ್ಯಾ ಎಲ್ಲಿದಿಯಪ್ಪಾ ?’ ಅಂತ ಹುಡುಕಾಟ ಶುರು ಮಾಡಿದ್ಲು. ಕೊನೆಗೂ ಬಸ್ಯಾ ತನ್ನ ಹಳೆ ಚಾಳಿಯಂಗ ಹುಣಸಿ ಗಿಡದ ಮ್ಯಾಲ ಹೋಗಿ ಕುತ್ಗೊಂಡಿದ್ದ. ಅವ್ವ ‘ಬಸ್ಯಾ ಎಲ್ಲಿದಿಯಪ್ಪಾ? ನಿಂಗ ಬೇಸನ್ ಉಂಡಿ ತಂದೀನಿ ಬಾಪ್ಪಾ’ ಅಂತ ಗಿಡದ ಹತ್ತಿರ ಬಂದಾಗ ಬಸ್ಯಾ ‘ನಾನು ಇಲ್ಲಿದಿನಿ ಬೇ’ ಅಂತ ಸಣ್ಣ ಧ್ವನಿಲೆ ಅಂದ. ಅವ್ವ ಖುಷಿಯಿಂದ ‘ಬಾರೋ ನನ್ನ ಮಗನ, ನೀ ಪರೀಕ್ಷೆದಾಗ ಪಾಸಾಗಿ. ತಗೋ ಬಾ ಬೇಸನ್ ಉಂಡಿ’ ಅಂತ ಅಂತಿದ್ದಂಗ ಸರಸರ ಅಂತ ಮರದಿಂದ ಕೆಳಗಿಳಿದು ಬೇಸನ್ ಉಂಡಿ ಇಸ್ಗೊಂಡ. ಬಸ್ಯಾಗ ಪಾಸಾಗಿದ್ದು ಖುಷಿ ಇದ್ದಿಲ್ಲ. ಅವ್ವ ಬೇಸನ್ ಉಂಡಿ ಕೊಟ್ಟಿದ್ದು ಖುಷಿ ಇತ್ತು. ಚಡ್ಡಿ ದೋಸ್ತುರೆಲ್ಲಾ ಬಂದು ‘ಬಸ್ಯಾ ನೀ ಇಲ್ಲಿದಿಯೇನ್ಲೆ ನೀ ಪಾಸಾಗಿಲೇ’ ಅಂತ ಬಸ್ಯಾನ ಎತ್ತಿಕೊಂಡು ಕುಣಿದಾಡಿದ್ರು. ಬಸ್ಯಾ ಮಾತ್ರ ಅವ್ವ ಕೊಟ್ಟ ಬೇಸನ್ ಉಂಡಿ ತಿಂತಾ ಇದ್ದ. ಅಂತೂ ಜಸ್ಟ್ ಪಾಸ್ ಆದ್ರೂ ಬಸ್ಯಾನ ಫ್ಯಾನ್ಸಿಗೆಲ್ಲಾ ಬಸ್ಯಾ ಫಸ್ಟ್ ರ‍್ಯಾಂಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT