ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯದ ಅಭಿನಯದ ನಾಟಕ: ತೀನ್ ಕಂದೀಲು

Last Updated 3 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ರಂಗಭೂಮಿಗೆ ಸಂಬಂಧಪಟ್ಟ ಅನೇಕ ಸಂಸ್ಥೆಗಳು, ಶಾಲೆಗಳು, ತರಬೇತಿ ಕೇಂದ್ರಗಳು ಮತ್ತು ಸಮುದಾಯಗಳು ರಂಗ ಚಟುವಟಿಕೆಗಳನ್ನು ನಡೆಸುತ್ತಿರುವುದು ಗಮನಾರ್ಹ. ಇಂತಹ ಸಂಸ್ಥೆಗಳಂತೆ ರಾಯಚೂರು ಸಮುದಾಯವು ಕೂಡ ತನ್ನ ಕ್ರಿಯಾಶೀಲತೆಯನ್ನು ಕಾಯ್ದುಕೊಂಡು ಬಂದಿದೆ ಎನ್ನುವುದಕ್ಕೆ ಮೊನ್ನೆ ರಾಯಚೂರಿನ ಜಂಬಲದಿನ್ನಿ ರಂಗಮಂದಿರದಲ್ಲಿ ಸಮುದಾಯ ಅಭಿನಯಿಸಿದ ನಾಟಕಕ್ಕೆ ಕಿಕ್ಕಿರಿದು ಸೇರಿದ ಪ್ರೇಕ್ಷಕರೆ ಸಾಕ್ಷಿಯಾಗಿತ್ತು.

ಒಂದು ಕಾಲದಲ್ಲಿ ರಾಯಚೂರು ಸಮುದಾಯ ತನ್ನ ಗೌರವ ಘನತೆ ಕಾಯ್ದುಕೊಂಡಿತ್ತು. ಆದರೆ ಇಂದು ನಾಟಕದ ಬಗ್ಗೆ ನಮ್ಮ ಭಾಗದ ಜನರ ಧೋರಣೆಗಳು ಬದಲಾದಾಗ ಇನ್ನು ನಮ್ಮ ಭಾಗದಲ್ಲಿ ರಂಗಭೂಮಿ ಬೆಳೆಯುವುದಕ್ಕೆ ಸಾಧ್ಯವಾಗಬಹುದು. ನಾಟಕ ಎಂದರೆ ಮೂಗು ಮುರಿಯುವ ಜನ ನಮ್ಮವರು.

'ಅಯ್ಯ ನಾಟಕ ಮಾಡ್ತಳಂತ? ಮನ್ಯಗೇನು ಯಾರು ಹೇಳವ್ರು ಇಲ್ಲ ಕೇಳವ್ರು ಇಲ್ಲ ಆ ಪೋರಿಗೆ? ನಾಟಕದಾಗ ಗಂಡ್ಸ್ರ ಕೈ ಮುಟ್ಟದು ಮೈ ಮುಟ್ಟದು ಮಾಡ್ತಾಳ ಎನಾ ಯವ್ವ ಅಸಂಯ?’ ಅನ್ನುವಂತ ಮನಸ್ಸುಗಳು ಬದಲಾದಾಗ ರಂಗಭೂಮಿ ಮತ್ತು ರಂಗ ಸಮುದಾಯಗಳು ಬೆಳೆಯಲು ಸಾಧ್ಯವಾಗಬಹುದು. ಕೆಲವೊಬ್ಬರನ್ನು ಬಿಟ್ಟರೆ ಯಾರೂ ವೃತ್ತಿಪರ ಕಲಾವಿದರಲ್ಲ, ಆದರೂ ಆ ವಿದ್ಯಾರ್ಥಿಗಳನ್ನು ಕರೆದುಕೊಂಡು ಒಂದು ಟೀಮ್ ಕಟ್ಟಿ ಒಂದು ಹೊಸ ಪ್ರಯೋಗಗಳ ಮೂಲಕ ರಾಯಚೂರು ಸಮುದಾಯವು ಕ್ರಿಯಾಶೀಲವಾಗಿದೆ. ಯಶಸ್ಸಿನ ಎಲ್ಲಾ ಶ್ರೇಯಸ್ಸು ಈ ನಾಟಕ ನಿರ್ದೇಶಕರಾದ ಪ್ರವೀಣ್ ರೆಡ್ಡಿ ಗುಂಜಳಿಯವರಿಗೆ ಸಲ್ಲಬೇಕು.

ಈ ನಾಟಕದ ತಲೆ ಬರಹ ‘ತೀನ್ ಕಂದೀಲು’ ಈ ಪದ ಮೇಲ್ನೋಟಕ್ಕೆ ಇದರಲ್ಲಿ ಏನೋ ವಿಭಿನ್ನವಾದ ಒಳ ಅರಿವು, ವಿಷಯ ವಸ್ತು, ಅಥವಾ ಇತಿಹಾಸನೇನೋ ಹೇಳಲು ಹೊರಟಿರಬೇಕು ಎಂದು ಪ್ರೇಕ್ಷಕರಿಗೆ ಕುತೂಹಲ ಕೆರಳಿಸುತ್ತದೆ. ಇಲ್ಲಿ ‘ತೀನ್ ಕಂದೀಲು’ ಎನ್ನುವ ನಾಟಕದ ತಲೆಬರಹ ರಾಯಚೂರಿನಲ್ಲಿರುವ, ಬಡವರ, ಕೂಲಿ ಕಾರ್ಮಿಕರ, ವ್ಯಾಪಾರಸ್ಥರ, ಹೊಟ್ಟೆ ತುಂಬಿಸುವ ಒಂದು ಪ್ರದೇಶದ ಹೆಸರು. ಒಟ್ಟಿನಲ್ಲಿ ಇದು ರಾಯಚೂರಿನ ಹೃದಯ ಭಾಗ ಎಂದರೆ ತಪ್ಪಾಗಲಾರದು.

ನಾಟಕಕಾರರು ಇದೇ ಪ್ರದೇಶದಲ್ಲಿ ತುಂಬ ಒಡನಾಟ ಇರುವುದರಿಂದ ಅಲ್ಲಿನ ಬಡವರ ಬದುಕು, ಅವರ ಸ್ಥಿತಿಗತಿಗಳು, ಜಾತಿ, ಧರ್ಮ, ಹಿಂಸೆ, ಕೊಲೆ, ಅತ್ಯಾಚಾರ, ಮೋಸ, ವಂಚನೆ ಮರ್ಯಾದೆಗೇಡು ಹತ್ಯೆ ಹೀಗೆ ಎಷ್ಟೋ ವರ್ಷಗಳ ಕಾಲದ ಧರ್ಮಸಂಕಟವನ್ನು ಹೇಳಿಕೊಳ್ಳಲಾಗದೆ ನಿಜಾಮರ ಕೋಟೆಗಳಲ್ಲಿ ಕಳೆದುಹೋದದ್ದು ಈಗ ಇತಿಹಾಸ.

ಕಳೆದು ಹೋದ ಜೀವಗಳಿಗೆ ರಮೇಶ ಅರೋಲಿಯವರು ಪಾತ್ರದ ರೂಪ ಕೊಟ್ಟು ಪ್ರೇಕ್ಷಕರ ಮನಸ್ಸು ಗೆದ್ದಿರುವುದು, ವಾಸ್ತವ ಬದುಕಿನ ಒಂದು ರೋಚಕವಾದ ಸಂಗತಿ. ನಾಟಕ ಆರಂಭವಾಗುವುದೇ ಗಾರೆ ಕೆಲಸಗಾರರು ಕೆಬ್ಬ್ಣಬುಟ್ಟಿ ಹಿಡಿದುಕೊಂಡು ಕೆಲ್ಸ ಮಾಡುವುದು, ನಂತರ ಅನೇಕ ಸಣ್ಣ ಪುಟ್ಟ ವ್ಯಾಪಾರಸ್ಥರು,(ತಳ್ಳುವ ಬಂಡಿ) ಚಹಾ ಹೋಟೆಲ್ ನಂತರ ಮೂರು ದಾರಿ ಕೂಡುವ(ಸರ್ಕಲ್)ನಲ್ಲಿ ಮೂರು ವಿವಿಧ ಬಣ್ಣದಿಂದ ಕೂಡಿರುವ ಕಂದೀಲಿನ ಬೆಳಕಿನ ಕಂಬ ಹೀಗೆ ಅನೇಕ ರಂಗ ಪರಿಕರಗಳು ರಂಗದ ಮೇಲೆ ಪ್ರವೇಶ ಮಾಡಿಸಿರುವುದು ನಿರ್ದೇಶಕರ ಸೂಕ್ಷ್ಮತೆ ತೋರುತ್ತದೆ.

ಈ ನಾಟಕದ ಕೇಂದ್ರ ಬಿಂದು ದಲಿತ ಹುಡುಗ ಹುಸೇನಿ ಮತ್ತು ಮೇಲ್ಜಾತಿಯ ಹುಡುಗಿ ಶಾಂತಿ ಯುವ ಪ್ರೇಮಿಗಳಾದರೂ ಇಡೀ ನಾಟಕಕ್ಕೆ ನಾಯಕನಾಗಿ ನಿಲ್ಲುವುದು ಯಲ್ಲಯ್ಯ ಅಜ್ಜ. ಯುವ ಪ್ರೇಮಿಗಳನ್ನು ಒಂದು ಮಾಡುವ ಒದ್ದಾಟದ ಜೊತೆಗೆ ಪ್ರಸ್ತುತ ದೇಶದಲ್ಲಿ ನಡೆಯುವ ಘಟನೆಗಳು ನಾಟಕದುದ್ದಕೂ ಟೀಕೆಗೆ ಗುರಿಯಾಗುತ್ತಾ ಹೋಗುತ್ತವೆ.

‘ಈ ದೇಶದಲ್ಲಿ ಬಡವರ, ದಲಿತರ, ಪರ ಮಾತಾಡಬೇಡಿ. ನೀವು ಕೂಡ ನಗರ ನಕ್ಸಲೈಟ್ ಎಂಬ ಪಟ್ಟ ಕಟ್ಟಿ ಜೈಲಿಗೆ ಕಳಿಸುತ್ತಾರೆ. ಕಾಯುವವರೇ ಕೊಲ್ಲಲು ಬಂದಾಗ ಯಾರ ಮುಂದ ದೂರು ಕೊಡತೀರಿ’ ಎಂದು ಪರೋಕ್ಷವಾಗಿ ರಾಜಕೀಯ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುವುದು. ಹೀಗೆ ಇಂತಹ ಅನೇಕ ಪ್ರಶ್ನೆಗಳು ನಾಟಕದುದ್ದಕೂ ಎತ್ತುತ್ತ ಹೋಗುತ್ತಾನೆ ಯಲ್ಲಯ್ಯ. ಯುವ ಪ್ರೇಮಿಗಳ ಪ್ರೀತಿಯನ್ನು (ಶಾಂತಿ ಮತ್ತು ಹುಸೇನ) ಒಂದು ಮಾಡಲು ಯಲ್ಲಯ್ಯ ಎಷ್ಟೇ ಪ್ರಯತ್ನಪಟ್ಟರೂ ಮತ್ತು ಇಲ್ಲಿ ಶಾಂತಿ ಎಷ್ಟೇ ಗಟ್ಟಿಗಿತ್ತಿ ಹುಡುಗಿಯಾಗಿದ್ದರೂ ಮನೆಯಲ್ಲಿ ಪ್ರತಿರೋಧ ಒಡ್ಡಿದಾಗ ಜಾತಿವಾದಿಗಳ ಗುಂಪು ಕೊನೆಗೆ ಶಾಂತಿಯ ಹತ್ಯೆ ಮಾಡುತ್ತದೆ.

ನಾಟಕದಲ್ಲಿ ಅನೇಕ ರೂಪಕಗಳು ಬಳಸಿರುವುದು ವಿಶೇಷ. ಧರ್ಮ ವಿರೋಧಿಗಳು ಹುಸೇನಿಗೆ ಹೊಡೆಯುವಂತಹ ಸಂದರ್ಭದಲ್ಲಿ ಕೋಲಿನ ನಾದದ ಜೊತೆಗೆ ಆ ಕೆಂಪಾದ ಫೋಕಸ್ ಲೈಟಿನಲ್ಲಿ ಪಾತ್ರಗಳು ಸುತ್ತಲೂ ತಿರುಗುವುದು ವಿಶೇಷ ಅನಿಸುತ್ತದೆ. ಇನ್ನೊಂದು ವಿಶೇಷವೆಂದರೆ ಈ ಯಲ್ಲಯ್ಯನ ಪಾತ್ರವೇ ನಾಟಕದುದ್ದಕೂ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದು. ಈ ನಾಟಕಕ್ಕೆ ಅನೇಕ ಪಾತ್ರಗಳು ಜೊತೆಯಾಗಿವೆ. ಯಲ್ಲಯ್ಯ ಮುದುಕನ ಪಾತ್ರದಲ್ಲಿ ಲಕ್ಷ್ಮಣ ಮಂಡಲಗೇರಾ ಅವರ ಅಭಿನಯ ಮೆಚ್ಚುವಂತಹದ್ದು. ಈ ನಾಟಕದಲ್ಲಿ ಯುವತಿಯ ಹತ್ಯೆಯನ್ನು ತಡೆಯದೆ ದೇಶದ ಆರಕ್ಷಕರು ಹೇಗೆ ಕರ್ತವ್ಯ ನಿರ್ವಹಣೆ ಮಾಡುತ್ತಾರೆ ಎನ್ನುವುದು ಗೊತ್ತಾಗುತ್ತದೆ.

ನಾಟಕಕ್ಕೆ ಬೆಳಕಿನ ವಿನ್ಯಾಸ ಕಡಿಮೆ ಇತ್ತು. ಹಿನ್ನೆಲೆ ಗಾಯನ ನಾಟಕಕ್ಕೆ ಅನುಕೂಲವಾಗುವ ರೀತಿಯಲ್ಲಿ ಇತ್ತು. ಕೆಲವೊಂದು ಪಾತ್ರಗಳು ಬಂದಾಗ ಅನವಶ್ಯಕವಾಗಿ ಚೀರುವಂತೆ ಕಂಡು ಬಂದಿತು. ಅದರ ಜೊತೆಗೆ ಪ್ರೇಕ್ಷಕ ವರ್ಗವೂ ಚೀರಿದಾಗ ಕೆಲ ರಂಗಪ್ರಿಯರಿಗೆ ಮತ್ತು ಶಾಂತತೆಯಿಂದ ಕುಳಿತು ನೋಡುವವರಿಗೆ ಇರಿಸುಮುರಿಸು ಆದುದೂ ಉಂಟು. ಈ ಮೈಸೂರು ಮತ್ತು ಧಾರವಾಡ ರಂಗಪ್ರೇಕ್ಷಕರು ನಾಟಕ ನೋಡುವ ವಿಧಾನ ಬೇರೆ ರೀತಿಯಾಗಿರುತ್ತದೆ.

ಯಾವತ್ತೂ ನಟರಿಗೆ ತೊಂದರೆ ಕೊಡುವ ಕೆಲಸ ಮಾಡುವುದಿಲ್ಲ. ಏನಾದರೂ ನಟರ ಬಾಯಿಯಿಂದ ಹಾಸ್ಯ ಅಥವಾ ಗಂಭೀರ ಮಾತುಗಳು ಬಂದರೆ ಅದಕ್ಕೆ ಒಂದಿಷ್ಟು ಚಪ್ಪಾಳೆ ಕೊಟ್ಟು ಹುರಿದುಂಬಿಸುತ್ತಾರೆ. ಆದರೆ ನಮ್ಮ ರಾಯಚೂರಿನ ಯುವ ಪ್ರೇಕ್ಷಕರು ನಾಟಕವನ್ನು ನೋಡುವ ದೃಷ್ಟಿಕೋನ ಬದಲಾಯಿಸಿಕೊಂಡರೆ ರಾಯಚೂರಿನಲ್ಲೂ ರಂಗಸಂಸ್ಥೆಗಳನ್ನು ಕಟ್ಟುವುದರಲ್ಲಿ ಸಂಶಯವಿಲ್ಲ. ಅದೇ ಇಲ್ಲಿನ ರಂಗಪ್ರಿಯರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT