ಪಟ್ನಾ: ಭಾಗಲ್ಪುರದಲ್ಲಿ ಇತ್ತೀಚೆಗೆ ಸಂಭವಿಸಿದ ಕೋಮು ಘರ್ಷಣೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರ ಪುತ್ರ ಅರಿಜಿತ್ ಶಾಶ್ವತ್ ಅವರನ್ನು ಭಾನುವಾರ ಪೊಲೀಸರು ಬಂಧಿಸಿ, 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
‘ಪಟ್ನಾ ಜಂಕ್ಷನ್ದಲ್ಲಿರುವ ಹನುಮಾನ್ ದೇವಸ್ಥಾನದ ಹತ್ತಿರ ಶಾಶ್ವತ್ ಇರುವ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ, ಪೊಲೀಸರ ತಂಡ ಅಲ್ಲಿಗೆ ತೆರಳಿ ಅವರನ್ನು ಬಂಧಿಸಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನು ಮಹಾರಾಜ್ ತಿಳಿಸಿದ್ದಾರೆ.
ಮಾರ್ಚ್ 24ರಂದು ಬಂಧನದ ವಾರಂಟ್ ಹೊರಡಿಸಿದ್ದ ಭಾಗಲ್ಪುರ ನ್ಯಾಯಾಲಯ, ಶಾಶ್ವತ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ಎ.ಆರ್.ಉಪಾಧ್ಯಾಯ ಅವರ ನಿವಾಸದಲ್ಲಿ ಶಾಶ್ವತ್ ಅವರನ್ನು ಹಾಜರುಪಡಿಸಿ, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಮಾರ್ಚ್ 17ರಂದು ಶಾಶ್ವತ್ ನೇತೃತ್ವದಲ್ಲಿ ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಇದಕ್ಕೆ ಅನುಮತಿ ಪಡೆದಿರಲಿಲ್ಲ. ಈ ಸಂದರ್ಭದಲ್ಲಿ ಕೋಮು ಘರ್ಷಣೆ ನಡೆದು ಕಲ್ಲು ತೂರಾಟ, ಗುಂಡಿನ ದಾಳಿ ನಡೆದಿತ್ತು. ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದರು.