ಬೆಂಗಳೂರು: ಬಿಜೆಪಿ ಮುಖಂಡ ವಿ.ಸೋಮಣ್ಣಗೆ ಚಾಮರಾಜನಗರ ಜಿಲ್ಲೆ ಹನೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೈತಪ್ಪಿದ್ದು, ಮಾಜಿ ಶಾಸಕಿ ಪರಿಮಳಾ ನಾಗಪ್ಪ ಪುತ್ರ ಪ್ರೀತಂ ನಾಗಪ್ಪ ಕಣಕ್ಕಿಳಿಯುವುದು ಬಹುತೇಕ ಖಚಿತ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಭಾನುವಾರ ರಾತ್ರಿ ನಡೆದ ಸಭೆಯಲ್ಲಿ ಸೋಮಣ್ಣ, ಪರಿಮಳಾ, ಪ್ರೀತಂ ಪಾಲ್ಗೊಂಡಿದ್ದರು. ಹನೂರಿನಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಸಭೆಯಿಂದ ಹೊರ ಬಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸೋಮಣ್ಣ, ‘ಹನೂರು ಕ್ಷೇತ್ರದ ಟಿಕೆಟ್ ಅನ್ನು ಪ್ರೀತಂಗೆ ನೀಡಲು ನಿರ್ಧರಿಸಲಾಗಿದೆ. ಟಿಕೆಟ್ ಹಂಚಿಕೆ ಕುರಿತು ಯಡಿಯೂರಪ್ಪ ಮತ್ತು ಪಕ್ಷ ಕೈಗೊಂಡ ನಿರ್ಧಾರಕ್ಕೆ ನಾನು ಬದ್ಧ’ ಎಂದು ಸ್ಪಷ್ಪಪಡಿಸಿದರು.
‘ಮಗನಿಗೆ ಟಿಕೆಟ್ ನೀಡುವುದನ್ನು ಪಕ್ಷದ ನಾಯಕರು ಖಚಿತಪಡಿಸಿದ್ದಾರೆ’ ಎಂದು ಪರಿಮಳಾ ತಿಳಿಸಿದರು.
‘ಹನೂರು ಕ್ಷೇತ್ರದಲ್ಲಿ ನನ್ನ ಗೆಲುವು ಖಚಿತ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ’ ಎಂದು ಪ್ರೀತಂ ಹೇಳಿದರು.
ಗೋವಿಂದರಾಜನಗರದಿಂದ ಟಿಕೆಟ್?:
ಸೋಮಣ್ಣಗೆ ಗೋವಿಂದರಾಜನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆಯಿದೆ. ಕೇಂದ್ರ ಸಚಿವ ಅನಂತಕುಮಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಈ ಭರವಸೆ ನೀಡಲಾಗಿದೆ ಎಂದು ಗೊತ್ತಾಗಿದೆ.
** ‘ಮುಂದೈತೆ ಮಾರಿಹಬ್ಬ’
ಹನೂರು ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಕೈತಪ್ಪಿದ್ದರಿಂದ ಕುಪಿತರಾದ ಸೋಮಣ್ಣ, ತಮ್ಮ ಬೆಂಬಲಿಗನ ಮೇಲೆ ಹರಿಹಾಯ್ದರು.
‘ಏ ನನ್ನ ಮುಂದೆ ನಿಲ್ಲಬೇಡ, ಇಲ್ಲಿಂದ ನಡೀ, ನಿಮ್ಮಂಥವರಿಂದಲೇ ಹೀಗಾಗಿದೆ. ಮುಂದೈತೆ ನಿನಗೆ ಮಾರಿಹಬ್ಬ’ ಎಂದು ಕಿಡಿ ಕಾರಿದರು.