ಅಡುಗೆ ಕೋಣೆಗೆ ಬೀಗ ಬಿಸಿಯೂಟ ಬಂದ್
ಕವಿತಾಳ: ಅಡುಗೆಯವರ ಬದಲಾವಣೆಗೆ ಆಗ್ರಹಿಸಿ ಕೆಲ ಸಂಘಟನೆ ಯುವಕರು ಬಿಸಿಯೂಟದ ಅಡುಗೆ ಕೊಠಡಿಗೆ ಬೀಗ ಹಾಕಿದ್ದರಿಂದ ಕಳೆದ ನಾಲ್ಕಾರು ದಿನಗಳಿಂದ ಸಮೀಪದ ಚಿಂಚಿರಿಕಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟ ಇಲ್ಲದಂತಾಗಿದೆ.
ಬಿಸಿಯೂಟದ ಸಾಮಗ್ರಿಗಳನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗುತ್ತಿದ್ದ ಅಡುಗೆಯವರನ್ನು ಸಾಮಗ್ರಿ ಸಹಿತ ಹಿಡಿದಿದ್ದಾಗಿ ಹೇಳುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಬಿಎಸ್ಪಿ ಪಕ್ಷದ ಯುವಕರು ಅಡುಗೆಯವರ ಬದಲಾವಣೆಗೆ ಒತ್ತಾಯಿಸಿ ಕಳೆದ ಅ. 7ರಂದು ಅಡುಗೆ ಕೊಠಡಿಗೆ ಬೀಗ ಹಾಕಿದ್ದಾರೆ.
ದಸರಾ ರಜೆ ಮುಗಿದ ನಂತರ ಅಡುಗೆಯವರ ಬದಲಾವಣೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಇಲಾಖೆ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಅಡುಗೆ ಕೊಠಡಿಗೆ ಹಾಕಿದ ಬೀಗ ತೆರವುಗೊಳಿಸಿಲ್ಲ ಹೀಗಾಗಿ ಮಕ್ಕಳಿಗೆ ಬಿಸಿಯೂಟ ಇಲ್ಲದಾಗಿದೆ.
ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಸಂಘಟನೆ ಯುವಕರು ವಾರದೊಳಗೆ ಬೇರೆ ಅಡುಗೆಯವರನ್ನು ನೇಮಿಸದಿದ್ದರೆ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡುವುದಾಗಿ ರಕ್ಷಣಾ ವೇದಿಕೆಯ ಅಧ್ಯಕ್ಷ ದಸ್ತಗಿರಿಸಾಬ್, ಅಜ್ಮೀರ್ಪಾಶಾ, ನಾಗರಾಜ, ಲಾಲಹ್ಮದ್, ಹುಸೇನಸಾಬ್, ಹನುಮಂತ, ಮೌನೇಶ, ದೇವರಾಜ, ಬಸವರಾಜ, ಸುರೇಶ, ದುರುಗೇಶ ಮತ್ತು ಬಹುಜನ ಸಮಾಜ ಪಕ್ಷದ ಗ್ರಾಮ ಘಟಕದ ಅಧ್ಯಕ್ಷ ಹನುಮಂತ್ರಾಯ ಆಗ್ರಹಿಸಿದ್ದಾರೆ.
ಮುಖ್ಯಗುರು, ಎಸ್ಡಿಎಂಸಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿಗೆ ಬಿಸಿಯೂಟದ ಅಡುಗೆಯವರನ್ನು ನೇಮಕ ಮತ್ತು ವಜಾ ಮಾಡುವ ಅಧಿಕಾರ ಇದ್ದು ಸದ್ರಿ ವಿಷಯ ನನ್ನ ಗಮನಕ್ಕೆ ಇಲ್ಲ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಸೂಕ್ತ ಕ್ರಮಕ್ಕೆ ಸಿಆರ್ಪಿಗೆ ಸೂಚಿಸುವುದಾಗಿ ಬಿಇಒ ಎನ್.ವಿ,ಸ್ವಾಮಿ ಪತ್ರಿಕೆಗೆ ತಿಳಿಸಿದ್ದಾರೆ.
ಬುಧವಾರ ತಾತ್ಕಾಲಿಕ ವ್ಯವಸ್ಥೆ ಮಾಡಿ ಬಿಸಿಯೂಟ ಆರಂಭ ಮಾಡುವುದಾಗಿ ಸಂಪನ್ಮೂಲ ವ್ಯಕ್ತಿ ಬಸವಂತಪ್ಪ ಮತ್ತು ಮುಖ್ಯಗುರು ಹನುಮಂತಪ್ಪ ಹೀರಾ ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.