ಬೆಂಗಳೂರು: ‘ಕಲ್ಲು ಮತ್ತು ಕೆತ್ತನೆಯ ಕೆಲಸ ಇವೇ ನನ್ನ ಜೀವಾಳ. ಒರಟಾದ ಕಲ್ಲನ್ನು ಕೆತ್ತಿ ಶಿಲ್ಪ ಮಾಡಲು ಏಕಾಗ್ರತೆ ಮತ್ತು ಶಕ್ತಿ ಎರಡೂ ಬೇಕು. ನನಗೆ ಆಸಕ್ತಿ ಇದ್ದುದರಿಂದ ನನಗೆ ಕಷ್ಟ ಎನಿಸಲಿಲ್ಲ’ ಎಂದು ಶಿಲ್ಪಕಲಾ ಕಲಾವಿದೆ ಕನಕಾಮೂರ್ತಿ ತಮ್ಮ ಮನದಾಳದ ಮಾತು ಬಿಚ್ಚಿಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಯನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 156ನೇ ‘ಮನೆಯಂಗಳದಲ್ಲಿ ಮಾತುಕತೆ’ಯ ತಿಂಗಳ ಅತಿಥಿಗಳಾಗಿ ಮಾತನಾಡಿದ ಅವರು, ‘ನನಗೆ ಮೊದಲು ಸಂಗೀತದಲ್ಲಿ ಆಸಕ್ತಿ ಇತ್ತು. ಅದನ್ನು ಕಲಿಯಬೇಕೆಂದರೆ ನನ್ನ ಶ್ರೀಮಂತ ತಂದೆಗೆ ಮನಸ್ಸಿರಲಿಲ್ಲ. ಶಿಲ್ಪಕಲೆಯಲ್ಲಿ ಪ್ರಸಿದ್ಧಿ ಪಡೆದಿದ್ದ ವಾದಿರಾಜರ ಪರಿಚಯವಾಯಿತು. ಅವರ ಹತ್ತಿರ ಸುಮಾರು 35 ವರ್ಷಗಳ ಕಾಲ ಕಲ್ಲನ್ನು ಕೆತ್ತಿ ಶಿಲ್ಪವನ್ನು ಮಾಡುವುದನ್ನು ಕಲಿತೆ’ ಎಂದರು.
‘1969ರಲ್ಲಿ ನನ್ನ ಮದುವೆಯಾಯಿತು. ನಮ್ಮ ಮನೆಯವರೂ ಸಹ ಶಿಲ್ಪಕಲೆ ವಿಷಯದಲ್ಲಿ ಅಡ್ಡಿಪಡಿಸಲಿಲ್ಲ. ನಾನು ಸಂಪ್ರದಾಯ ಶಿಲ್ಪಿ ಎಂದೇ ಗುರುತಿಸಿಕೊಂಡಿದ್ದೇನೆ. ನಾವು ಮಾಡುವ ಕೆಲಸವನ್ನು ಪ್ರೀತಿಸಿದರೆ ಮಾತ್ರ ಅಲ್ಲಿ ಬೇರೆ, ಬೇರೆ ದಾರಿಗಳು ಸಿಗುತ್ತವೆ’ ಎಂದು ನುಡಿದರು.
‘ಕಲ್ಲಲ್ಲಿ ಸ್ವರ ಬರಿಸುವ ಶಿಲ್ಪಗಳನ್ನು ಕೆತ್ತುವ ಬಗ್ಗೆ ಆಸಕ್ತಿ ವಹಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ ಎಂಬ ನೋವು ನನಗಿದೆ. ನನಗೀಗ 72 ವರ್ಷ. ಕಲ್ಲಿನ ಜೊತೆಯೇ ಇರುತ್ತೇನೆ ಮತ್ತು ನಾನು ಸಾಯುವ ವರೆಗೂ ಕಲ್ಲುಗಳನ್ನು ಕೆತ್ತುತ್ತ ಇರುತ್ತೇನೆ’ ಎಂದು ನುಡಿದರು.
‘ಶಿಲ್ಪಕಲೆ ಅತ್ಯಂತ ಪ್ರಾಚೀನವಾದ ಕಲೆ. ಸರ್ಕಾರ ಬೇರೆ ಎಲ್ಲ ಕಲೆಯ ಪ್ರಕಾರಗಳಿಗೆ ನೀಡುವ ಸೌಲಭ್ಯಗಳನ್ನು ಈ ಕಲೆಗೆ ಕೊಡುತ್ತಿಲ್ಲ. ಕಲ್ಲಿನ ಬೆಲೆ ಗಗನಕ್ಕೆ ಏರುತ್ತಿದೆ. ಕಲಾವಿದರು ಕಷ್ಟ ಅನುಭವಿಸುತ್ತಿದ್ದಾರೆ. ಅನೇಕ ಬಾರಿ ಮನವಿ ಮಾಡಿಕೊಂಡರೂ ಏನೂ ಪ್ರಯೋಜನವಾಗಿಲ್ಲ. ಇನ್ನಾದರೂ ಸರ್ಕಾರ ಶಿಲ್ಪಕಲೆಯ ಕಲಾವಿದರ ನೆರವಿಗೆ ಬಂದರೆ ನಾಡು ಶಿಲ್ಪಿಗಳ ನಾಡಾದೀತು’ ಎಂದರು.