ಉರುಳಿದ ಬುಲೆಟ್ ಟ್ಯಾಂಕರ್, ಅನಿಲ ಸೋರಿಕೆ
ವಳಾಲು(ಉಪ್ಪಿನಂಗಡಿ): ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಮಂಗಳವಾರ ಮುಂಜಾನೆ ಬುಲೆಟ್ ಟ್ಯಾಂಕರ್ ಉರುಳಿಬಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಅನಿಲ ಟ್ಯಾಂಕರ್ನ ವಾಲ್ವ್ ತುಂಡಾಗಿ ಗ್ಯಾಸ್ ಸೋರಿಕೆ ಆಗಲಾರಂಭಿಸಿ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸಂಭವನೀಯ ದುರಂತವನ್ನು ತಪ್ಪಿಸಿದ್ದಾರೆ.
ಟ್ಯಾಂಕರ್ ಚಾಲಕ ತಮಿಳುನಾಡಿನ ಅಟ್ಟೂರು ತಾಲ್ಲೂಕಿನ ಒಡಕ್ಕೂರು ನಿವಾಸಿ ಭಾಸ್ಕರನ್ (26) ಗಂಭೀರವಾಗಿ ಗಾಯಗೊಂಡಿದ್ದು, ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಂಗಳೂರು ಎಂಆರ್ಪಿಎಲ್ನಿಂದ ಬೆಂಗಳೂರು ಕಡೆಗೆ ಹೊಗುತ್ತಿದ್ದ ಟ್ಯಾಂಕರ್ ಚರಂಡಿಗೆ ಉರುಳಿ ಬಿದ್ದಿದೆ. ಟ್ಯಾಂಕರ್ನಲ್ಲಿ ಒಂದು ವಾಲ್ವ್ ತುಂಡಾಗಿ ಅನಿಲ ಸೋರಿಕೆ ಆಗಲಾರಂಭಿಸಿದ್ದು, ತುರ್ತಾಗಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯ ನಡೆಸಿದರು.
ಟ್ಯಾಂಕರ್ನಿಂದ ಸೋರಿಕೆ ಆಗುತ್ತಿದ್ದ ಅನಿಲವನ್ನು ಎಚ್ಪಿಸಿಎಲ್ ಸಂಸ್ಥೆಯಿಂದ ತರಿಸಲಾಗಿದ್ದ ಪ್ರತ್ಯೇಕ ಎರಡು ಕಂಟೈನರ್ ಮೂಲಕ ಅನಿಲವನ್ನು ಸ್ಥಳಾಂತರಿಸಲಾಯಿತು.
ಬೆಳಿಗ್ಗೆಯಿಂದ ಸಂಜೆ 4 ಗಂಟೆ ವರೆಗೆ ಅನಿಲ ಸ್ಥಳಾಂತರ ಕೆಲಸ ನಡೆದ ಬಳಿಕ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ತೆರವುಗೊಳಿಸಲಾಯಿತು. ಈ ಮಧ್ಯೆ 10 ಗಂಟೆಗಳ ಕಾಲ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆ ಉಂಟಾಗಿತ್ತು.
ಪುತ್ತೂರು ಅಗ್ನಿಶಾಮಕ ದಳದ ಠಾಣಾಧಿಕಾರಿ ಲೋಕೇಶ್, ಮಂಗಳೂರು ಅಗ್ನಿಶಾಮಕ ದಳ ಠಾಣಾಧಿಕಾರಿ ಚಂದ್ರನಾಥ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಉಪ್ಪಿನಂಗಡಿ ಉಪ ತಹಸೀಲ್ದಾರ್ ಕೃಷ್ಣ ನಾಯ್ಕಾ, ಬಜತ್ತೂರು ಗ್ರಾಮಕರಣಿಕ ಶೇಷಾದ್ರಿ, ಪುತ್ತೂರು ಎಎಸ್ಪಿ ರೋಹಿಣಿ ಕಟ್ರೋಚಿ, ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ. ಮಂಜಯ್ಯ ಸ್ಥಳಕ್ಕೆ ಭೇಟಿ ನೀಡಿದರು. ಉಪ್ಪಿನಂಗಡಿ ಸಬ್ ಇನ್ಸ್ಪೆಕ್ಟರ್ ಜಿ.ಟಿ. ದಾಸರಿ, ಸಂಚಾರಿ ಎಸ್ಐ. ನಾಗೇಶ್ ಕದ್ರಿ ಮತ್ತು ಸಿಬ್ಬಂದಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.