ಕಳ್ಳರ ದುರಾಸೆಗೆ ವಾಸ್ತುಶಿಲ್ಪ ವಿರೂಪ

ಧರ್ಮಪುರ: ಐತಿಹಾಸಿಕ ಹಾಗೂ ಪೌರಾಣಿಕವಾಗಿ ಪ್ರಸಿದ್ಧಿ ಹೊಂದಿರುವ ಧರ್ಮಪುರ, ತನ್ನ ಸುತ್ತಮುತ್ತ ಅನೇಕ ವಾಸ್ತುಶಿಲ್ಪ ಕುರುಹುಗಳನ್ನು ಹೊಂದಿದೆ. ‘ಹೇಮಾವತಿ’ಯನ್ನು ರಾಜಧಾನಿ ಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದ ನೊಳಂಬರು ಧರ್ಮಪುರ ವನ್ನು ತಮ್ಮ ಪಶ್ಚಿಮ ಪ್ರಾಂತ್ಯದ ಕೇಂದ್ರ ವನ್ನಾಗಿ ಮಾಡಿಕೊಂಡಿದ್ದು ಇತಿಹಾಸ.
ಧರ್ಮಪುರ, ಸಕ್ಕರ, ವೇಣುಕಲ್ಲು ಗುಡ್ಡ, ಖನಜನಹಳ್ಳಿ, ಅರಳೀಕೆರೆ, ಅಬ್ಬಿನಹೊಳೆ ಮುಂತಾದ ಕಡೆ ನುರಾರು ಶಿಲ್ಪಾಕೃತಿಗಳು, ಶಾಸನಗಳು, ಏಕಶಿಲಾ ವಿಗ್ರಹಗಳು, ಮಾಸ್ತಿಕಲ್ಲು, ವೀರಗಲ್ಲು ಗಳನ್ನು ಇಂದಿಗೂ ಕಾಣಬಹದು.
ನೂರಾರು ಶಿಲ್ಪಾಕೃತಿಗಳ ಕಣಜ ವಾಗಿರುವ ಧರ್ಮಪುರದಲ್ಲಿ ಅಂತರ ರಾಜ್ಯ ಕಳ್ಳರು ನಿಧಿ ಆಸೆಗಾಗಿ ಆಗಾಗ್ಗೆ ದೇವಾಲಯಗಳಲ್ಲಿನ ಗರ್ಭಗುಡಿ ಅಗೆದು ಮೂರ್ತಿ, ಶಿಲ್ಪಗಳನ್ನು ವಿರೂಪ ಗೊಳಿಸುತ್ತಿದ್ದಾರೆ ಎಂದು ಗ್ರಾಮದ ನಾಗರಾಜರಾವ್ ಹೇಳಿದರು.
ಇಲ್ಲಿನ ಪಂಚಲಿಂಗ ದೇವಾಲಯ ದಲ್ಲಿ ಆಕರ್ಷಕವಾಗಿರುವ ಶಿವಲಿಂಗ ಗಳನ್ನು ಅಗೆದು ತೆಗೆದುಕೊಂಡು ಹೋಗುವ ಪ್ರಯತ್ನಗಳು ನಡೆದಿವೆ. ಈಚೆಗೆ ಪಿ.ಡಿ.ಕೋಟೆ ಗ್ರಾಮದ ಎಂಜಿನಿಯರ್ ರಂಗಪ್ಪ ಅವರ ಜಮೀನಿ ನಲ್ಲಿದ್ದ ಚಾಮುಂಡಿ ವಿಗ್ರಹವನ್ನು ಕಳ್ಳರು ಕೊಂಡೊಯ್ದಿದ್ದಾರೆ. ಇದೇ ರೀತಿ ಇಲ್ಲಿಯ ದೇವಾಲಯಗಳಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ ಎಂದು ಪಿ.ಡಿ.ಕೋಟೆಯ ಎಚ್.ಎಲ್.ಗುಣ್ಣಯ್ಯ ತಿಳಿಸಿದರು.
ಧರ್ಮಪುರದ ಹೊರ ವಲಯ ದಲ್ಲಿರುವ ಬೆನಕನಹಳ್ಳಿ ರಸ್ತೆಗೆ ಹೊಂದಿ ಕೊಂಡಿರುವ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದ ಹಿಂಬದಿಯಲ್ಲಿನ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿನ ಗರ್ಭಗುಡಿಯಲ್ಲಿ ಆಳವಾದ ಗುಂಡಿ ತೋಡಿದ್ದಾರೆ. ಅಲ್ಲದೇ, ನಿಧಿ ಆಸೆಗಾಗಿ ಕುರಿ ಬಲಿ ನೀಡಿದ್ದಾರೆ. ಎರಡು ಮೂರು ಕಡೆ ಆಳವಾದ ಗುಂಡಿ ಅಗೆದಿರುವ ಗುರುತುಗಳೂ ಇವೆ.
ಇತ್ತೀಚೆಗೆ ಭೀಮರಾಯನ ದೇವಸ್ಥಾನದ ನಂದಿ ವಿಗ್ರಹ ಮತ್ತು ಚಾಮುಂಡಿ ವಿಗ್ರಹ ಕಳವಾಗಿವೆ. ಅದರ ನೆನಪು ಮಾಸುವ ಮುನ್ನವೇ ಇಂತಹ ಘಟನೆ ನಡೆದಿರುವುದು ಸಾರ್ವಜನಿಕ ರಲ್ಲಿ ಆತಂಕ ಮೂಡಿದೆ. ಇನ್ನಾದರೂ ನಮ್ಮ ಐತಿಹಾಸಿಕ ಆಕರಗಳನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಇಲಾಖೆ ವಹಿಸಿಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
– ವಿ.ವೀರಣ್ಣ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.