ಕಾದಾಟ, ಹಸಿವು: 2 ಹುಲಿ ಸಾವು

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ 2 ಹುಲಿಗಳು ಸಾವನ್ನಪ್ಪಿವೆ.
ಹುಣಸೂರು ವರದಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮತ್ತಿಗೋಡು ಗಸ್ತಿಗೆ ಸೇರಿದ ಆನೆಚೌಕೂರು ವಲಯದ ಮಾವಿನಮರದಹಳ್ಳ ಎಂಬಲ್ಲಿ ಒಂದು ವಾರದ ಹಿಂದೆ ಸಾವನ್ನಪ್ಪಿದ 7 ವರ್ಷದ ಗಂಡು ಹುಲಿಯ ಕಳೆಬರ ಬುಧವಾರ ಸಿಕ್ಕಿತು.
ಅಲ್ಲದೆ, ಹುಣಸೂರು ವಲಯದ ತಟ್ಟೆಹಳ್ಳದ ಪಾರೆ ಎಂಬಲ್ಲಿ ಮಂಗಳವಾರ ಸಾವನ್ನಪ್ಪಿರುವ 10 ವರ್ಷದ ಹೆಣ್ಣು ಹುಲಿ ಶವ ಬುಧವಾರ ಪತ್ತೆಯಾಗಿ, ಎರಡೂ ಶವಗಳ ಮರಣೋತ್ತರ ಪರೀಕ್ಷೆಯನ್ನು ಬುಧವಾರ ನಡೆಸಿದ ಬಳಿಕ ಅಂತ್ಯಸಂಸ್ಕಾರ ನೆರವೇರಿ ಸಲಾಯಿತು. ಮಾವಿನಮರದಹಳ್ಳ ಎಂಬಲ್ಲಿ ಪತ್ತೆಯಾದ ಹುಲಿ ಮತ್ತೊಂದು ಹುಲಿಯೊಂದಿಗೆ ಕಾದಾಟ ನಡೆಸಿದ ಪರಿಣಾಮ ಕುತ್ತಿಗೆ ಸುತ್ತ ಹಾಗೂ ಮುಂಗಾಲಿಗೆ ಗಾಯಗಳಾಗಿ ಮೃತಪಟ್ಟಿದೆ.
ಹುಣಸೂರು ವಲಯದ ಕಚುವಿನಹಳ್ಳಿ ವಲಯದ ತಟ್ಟೆಹಳ್ಳದ ಪಾರೆ ಎಂಬಲ್ಲಿ ಮಂಗಳವಾರ ಸಾವನ್ನಪ್ಪಿರುವ 10 ವರ್ಷದ ಹೆಣ್ಣು ಹುಲಿ ಹಸಿವಿನಿಂದ ಸಾವನ್ನಪ್ಪಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬಂದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹೆಣ್ಣು ಹುಲಿ ಹೊಟ್ಟೆಯಲ್ಲಿ ಯಾವುದೇ ಆಹಾರ ಇಲ್ಲವಾಗಿದ್ದು, ಹುಲಿಯ ನಾಲ್ಕು ಕೋರೆಹಲ್ಲುಗಳು ಸಂಪೂರ್ಣ ಸವೆದು ಹೋಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಈ ಹುಲಿ 166 ಸೆ.ಮಿ ಉದ್ದವಿದ್ದು, ವಯಸ್ಸಾಗಿರುವ ಕಾರಣ ಆಹಾರ ಬೇಟೆ ಮಾಡುವ ಶಕ್ತಿ ಕಳೆದುಕೊಂಡು, ಹಸಿವಿನಿಂದ ಸಾವನ್ನಪ್ಪಿರುವ ಸಾಧ್ಯತೆಗಳಿದೆ ಎಂದು ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.
‘ಹುಲಿಗಳ ಕಾದಾಟ ಅರಣ್ಯದಲ್ಲಿ ಸರ್ವೆಸಾಮಾನ್ಯ. ಹೊಸ ಸ್ಥಳಕ್ಕೆ ಬೇರೊಂದು ಹುಲಿ ಹೋದ ಸಮಯದಲ್ಲಿ ಸ್ಥಳೀಯ ಹುಲಿ ಕಾದಾಟ ನಡೆಸುವುದು ಅವುಗಳ ಸ್ವಭಾವ. ಈ ಘಟನೆಯಲ್ಲಿ 7 ವರ್ಷದ ಹುಲಿ ಸಾವನ್ನಪ್ಪಿದೆ’ ಎಂದು ಹುಲಿ ಯೋಜನೆಯ ನಿರ್ದೇಶಕ ಕಾಂತರಾಜ್ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.