ಕುಡಿಯುವ ನೀರಿಗೆ ನಿತ್ಯ ಹೋರಾಟ

ಹನುಮಸಾಗರ: ಸಮೀಪದ ಮನ್ನೇರಾಳ ಗ್ರಾಮದಲ್ಲಿ ನಾಲ್ಕು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಮಕ್ಕಳು ಸಮೇತ ಜನರು ಸಮೀಪದ ತೋಟಗಳಿಗೆ ಹೋಗಿ ನೀರು ತರಬೇಕಾದ ಪರಿಸ್ಥಿತಿ ಇದೆ.
ಕಬ್ಬರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮದಲ್ಲಿ ಸುಮಾರು 3 ಸಾವಿರ ಕುಟುಂಬಗಳಿವೆ. ಆದರೆ ಯಾವ ಕಾಲೊನಿಗಳಲ್ಲೂ ಸಮರ್ಪಕವಾಗಿ ಕುಡಿಯುವ ನೀರು ದೊರಕುತ್ತಿಲ್ಲ, ನೀರಿಗಾಗಿ ದಿನವಿಡೀ ಕಳೆಯಬೇಕಾದ ಸಂದರ್ಭ ಎದುರಾಗಿದೆ ಎಂದು ಗ್ರಾಮದ ಬಸವರಾಜ ಗೋಳು ತೋಡಿಕೊಳ್ಳುತ್ತಾರೆ.
ಕುಡಿಯುವ ನೀರಿಗಾಗಿ ಕೊಳವೆಬಾವಿ, ನೀರಿನ ಮೇಲ್ತೊಟ್ಟಿ, ಪೈಪ್ಲೈನ್ ಇದ್ದರೂ ನಿರ್ವಹಣೆ ಮಾತ್ರ ಸರಿಯಾಗಿ ಇಲ್ಲದಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ದಲಿತ ಕಾಲೊನಿಯಲ್ಲಿನ ಜನರು ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಗ್ರಾಮದ ಉಳಿದ ಭಾಗದಲ್ಲಿ ಸರಿಯಾಗಿ ನೀರು ಸರಬರಾಜು ಆಗುತ್ತಿದೆ. ಆದರೆ ನಮ್ಮ ಕಾಲೊನಿಯಲ್ಲಿ ಮಾತ್ರ ನೀರು ಸರಬರಾಜು ಆಗುತ್ತಿಲ್ಲ. ನೀರಿಗಾಗಿ ಕೊರೆಯಿಸಿದ ಕೊಳವೆ ಬಾವಿ ಹಾಗೂ ಸರಬರಾಜಿನ ನಲ್ಲಿಗಳು ಹಾಳುಬಿದ್ದಿವೆ ಎಂದು ಮುದಿಯಪ್ಪ ವಿವರಿಸುತ್ತಾರೆ.
ಕಾಲೊನಿಯ ಜನರು ನೀರಿನ ಸಮಸ್ಯೆಯನ್ನು ಹಲವು ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದಾರೆ. ಆದರೆ ‘ ನಿಮ್ಮ ಕಾಲೊನಿ ಎತ್ತರ ಪ್ರದೇಶದಲ್ಲಿ ಇರುವುದರಿಂದ ನೀರು ಏರುತ್ತಿಲ್ಲ’ ಎಂಬ ಕಾರಣ ನೀಡುತ್ತಾರೆ. ಅದಕ್ಕೆ ಪರ್ಯಾಯವಾಗಿ ಪ್ರತ್ಯೇಕ ವಾಲ್ವ್ ಇಲ್ಲವೇ ಮೇಲ್ತೊಟ್ಟಿ ನಿರ್ಮಿಸುವ ಪ್ರಯತ್ನಕ್ಕೆ ಪಂಚಾಯಿತಿ ಮುಂದಾಗಿಲ್ಲ ಎಂದು ಸ್ಥಳೀಯರು ದೂರುತ್ತಾರೆ.
ನೀರಿನ ಬಂಡಿ, ಸೈಕಲ್ ಮೂಲಕ ಸಮೀಪದ ತೋಟಗಳಿಂದ ನೀರು ತರಲು ಮಕ್ಕಳು ಹೋಗುತ್ತಾರೆ. ಹೀಗಾಗಿ ಶಾಲೆಗೆ ಹೋಗುವುದೇ ಅಪರೂಪ. ಕೂಡಲೇ ನೀರಿನ ವ್ಯವಸ್ಥೆ ಸರಿಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.